ಆ್ಯಪ್ನಗರ

ಜ್ಞಾನವಾಪಿ ಮಸೀದಿ: ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣ ವರ್ಗಾಯಿಸಿದ ಸುಪ್ರೀಂಕೋರ್ಟ್

Varanasi Gyanvapi Mosque Case: ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆಸಿದ್ದನ್ನು ವಿರೋಧಿಸಿ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಮಸೀದಿ ಒಳಭಾಗದಲ್ಲಿ ಶಿವಲಿಂಗ ಪತ್ತೆಯಾಗಿರುವ ಕುರಿತು ಮಾಹಿತಿ ಸೋರಿಕೆಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

Edited byಅಮಿತ್ ಎಂ.ಎಸ್ | Vijaya Karnataka Web 20 May 2022, 6:03 pm

ಹೈಲೈಟ್ಸ್‌:

  • ಸುಪ್ರೀಂಕೋರ್ಟ್‌ನಲ್ಲಿ ಜ್ಞಾನವಾಪಿ ಮಸೀದಿ ಸಮಿತಿ ಅರ್ಜಿ ವಿಚಾರಣೆ
  • ಆಯ್ದ ಮಾಹಿತಿ ಸೋರಿಕೆಯನ್ನು ತಡೆಯಬೇಕು ಎಂದ ಸುಪ್ರೀಂಕೋರ್ಟ್
  • ವಿಚಾರಣಾ ನ್ಯಾಯಾಧೀಶರದ ಬದಲು ಜಿಲ್ಲಾ ಜಡ್ಜ್ ವಿಚಾರಣೆ ನಡೆಸಬೇಕು
  • ಇದು ಬಹಳ ಸಂಕೀರ್ಣ ಮತ್ತು ಸೂಕ್ಷ್ಮವಾದ ವಿಚಾರ ಎಂದ ಕೋರ್ಟ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web varanasi gyanvapi mosque case supreme court says matter should be heard by district judge instead trail court
ಜ್ಞಾನವಾಪಿ ಮಸೀದಿ: ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣ ವರ್ಗಾಯಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ವಾರಾಣಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ 'ಬೇಕಾದ ಮಾಹಿತಿಗಳ ಸೋರಿಕೆ' ಮಾಡುವುದನ್ನು ತಡೆಯಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ. ಜ್ಞಾನವಾಪಿ ಮಸೀದಿಯ ಒಳಗೆ ಸಮೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಕೋರ್ಟ್, ವಾರಾಣಸಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆಯಾಗುವ ಮುನ್ನವೇ ಹಿಂದೂ ಅರ್ಜಿದಾರರೊಬ್ಬರು ಮಸೀದಿ ಚಿತ್ರೀಕರಣದ ಕುರಿತಾದ ವಿವರ ನೀಡಿದ್ದಕ್ಕೆ ಸಂಬಂಧಿಸಿದಂತೆ ಈ ಸೂಚನೆ ನೀಡಿದೆ.
ಮಸೀದಿಯ ಒಳಭಾಗದಲ್ಲಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವಿಡಿಯೋಗ್ರಫಿ ಕಾರ್ಯದ ವೇಳೆ ಹಾಜರಿದ್ದ ವಕೀಲರೊಬ್ಬರು, ಸಮೀಕ್ಷೆ ಮುಗಿದ ನಂತರ ಮಾಧ್ಯಮಗಳಿಗೆ ತಿಳಿಸಿದ್ದರು. ಇದು ತೀವ್ರ ಸಂಚಲನ ಉಂಟುಮಾಡಿತ್ತು. "ಆಯ್ದ ವಿಚಾರಗಳ ಸೋರಿಕೆಯನ್ನು ನಿಲ್ಲಿಸಬೇಕು. ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗುತ್ತಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕಿತ್ತು. ಕೋರ್ಟ್ ಅದನ್ನು ತೆರೆಯಬೇಕಿತ್ತು" ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹೇಳಿದ್ದಾರೆ.
ಶಿವಲಿಂಗ ಪತ್ತೆ ವಿವಾದದ ನಡುವಲ್ಲೂ ಗ್ಯಾನ್‌ವಾಪಿ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಿರಾತಂಕ..

ಇದೇ ವೇಳೆ ಸುಪ್ರೀಂಕೋರ್ಟ್, ದೇಶಾದ್ಯಂತ ಕುತೂಹಲ ಕೆರಳಿಸಿರುವ ಈ ಪ್ರಕರಣವನ್ನು ವಿಚಾರಣಾ ನ್ಯಾಯಾಲಯದಿಂದ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

"ಇದು ಬಹಳ ಸಂಕೀರ್ಣ ಮತ್ತು ಸೂಕ್ಷ್ಮ ವಿಚಾರ. ಈ ಪ್ರಕರಣವನ್ನು ವಿಚಾರಣಾ ನ್ಯಾಯಾಧೀಶರ ಬದಲು ಜಿಲ್ಲಾ ನ್ಯಾಯಾಧೀಶರು ವಿಚಾರಣೆ ನಡೆಸಬೇಕು. ಏಕೆಂದರೆ ಹೆಚ್ಚು ಅನುಭವಿಗಳು ವಿಚಾರಣೆ ನಡೆಸಿದರೆ ಉತ್ತಮ" ಎಂದು ಕೋರ್ಟ್ ಹೇಳಿದೆ.
ಜ್ಞಾನವಾಪಿ ಮುಸ್ಲಿಮರಿಗೆ ಸೇರಿದ್ದಲ್ಲ, ಔರಂಗಜೇಬ್ ವಶಪಡಿಸಿಕೊಂಡಿದ್ದು: ಹಿಂದೂ ಭಕ್ತರ ಪರ ವಕೀಲರ ವಾದ

ಪ್ರಸ್ತುತ ಸಮುದಾಯಗಳ ನಡುವೆ ಸಹೋದರತ್ವ ಉಳಿಸುವ ಅಗತ್ಯವಿದೆ ಮತ್ತು ಅತಿ ಮುಖ್ಯವಾಗಿ ಶಾಂತಿಯ ಅಗತ್ಯವಿದೆ ಎಂದ ಕೋರ್ಟ್, "ಸಮತೋಲನ ಮತ್ತು ಶಾಂತಿಯ ಪ್ರಜ್ಞೆಯನ್ನು ನಾವು ಹೊಂದಬೇಕಿದೆ. ನಾವು ಉಪಶಮನದ ನಡೆ ಅನುಸರಿಸಬೇಕಿದೆ. ದೇಶದಲ್ಲಿ ಸಮತೋಲನದ ಪ್ರಜ್ಞೆಯನ್ನು ಉಳಿಸುವ ಜಂಟಿ ಯೋಜನೆಯಲ್ಲಿ ನಾವಿದ್ದೇವೆ" ಎಂದು ತಿಳಿಸಿದೆ.

ಮಸೀದಿಯ ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ರಕ್ಷಣೆಯನ್ನು ಮುಂದುವರಿಸಬೇಕು ಹಾಗೂ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಮುಸ್ಲಿಮರಿಗೆ ಯಾವುದೇ ತಡೆಯೊಡ್ಡಬಾರದು ಎಂದು ತಾನು ಮೇ 17ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಕೋರ್ಟ್ ವಿಸ್ತರಿಸಿದೆ. ಮುಸ್ಲಿಮರ ವುಝು (ನಮಾಜ್‌ಗೂ ಮುನ್ನ ಕೈಕಾಲುಗಳನ್ನು ತೊಳೆಯುವ ಜಾಗ) ಆಚರಣೆಗೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ರಜಾಕಾಲದ ಬಳಿಕ ಮುಂದುವರಿಸುತ್ತೇವೆ ಎಂದು ನ್ಯಾಯಪೀಠ ತಿಳಿಸಿದೆ.
Varanasi Mosque: ಜ್ಞಾನವಾಪಿ ಮಸೀದಿ ಸಮೀಕ್ಷೆಯ ವರದಿ ಕೋರ್ಟ್‌ಗೆ ಸಲ್ಲಿಕೆ

ಪೂಜಾ ಸ್ಥಳಗಳ (ವಿಶೇಷ ಅನುಮತಿ) ಕಾಯ್ದೆ 1991ರ ಸೆಕ್ಷನ್ 3ರ ಅಡಿ ಧಾರ್ಮಿಕ ಕುರುಹುಗಳ ಪರಿಶೀಲನೆ ನಿಷೇಧವಲ್ಲ ಎಂದು ಇದೇ ವೇಳೆ ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಇದರಿಂದ ಈ ಕಾಯ್ದೆಯ ಪ್ರಕಾರ, ಮಸೀದಿ ಆವರಣದಲ್ಲಿ ವಿಡಿಯೋ ಸಮೀಕ್ಷೆ ನಡೆಸಿರುವುದು ತಪ್ಪು ಎಂಬ ಅಂಜುಮಾನ್ ಇಂತೆಜಾಮಿಯಾ ಮಸೀದಿ ನಿರ್ವಹಣಾ ಸಮಿತಿಯ ಪ್ರಮುಖ ವಾದಕ್ಕೆ ಹಿನ್ನಡೆಯಾಗಿದೆ. ಸಮೀಕ್ಷೆಗೆ ಅನುಮತಿ ನೀಡಿದರೆ ಇನ್ನೂ ಅನೇಕ ಮಸೀದಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಅದು ಅರ್ಜಿಯಲ್ಲಿ ಹೇಳಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ