ಆ್ಯಪ್ನಗರ

ಅಯೋಧ್ಯೆ ಧರ್ಮಸಭೆ ಸಂಕಲ್ಪ

ಹೊಸ ವರ್ಷಕ್ಕೆ ಮಂದಿರ , ನಿರ್ಮಾಣ ದಿನ ಪ್ರಕಟ, ಜನ್ಮಭೂಮಿ ವಿಭಜನೆಗೆ ಅವಕಾಶ ನೀಡಲ್ಲ

Vijaya Karnataka Web 25 Nov 2018, 9:44 pm
ಅಯೋಧ್ಯೆ: ಯಾವುದೇ ಕಾರಣಕ್ಕೂ ರಾಮ ಜನ್ಮ ಭೂಮಿಯನ್ನು ವಿಭಜಿಸಿ ಹಂಚಲು ಅವಕಾಶ ನೀಡುವುದಿಲ್ಲ ಎಂದು ಅಯೋಧ್ಯೆಯಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಘೋಷಿಸಲಾಗಿದೆ. ಜತೆಗೆ 2019ರ ಆರಂಭದಲ್ಲೇ ಮಂದಿತ ನಿರ್ಮಾಣದ ದಿನಾಂಕಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.
Vijaya Karnataka Web ayodhya


ಭಾನುವಾರ ಅಯೋಧ್ಯೆ ಮತ್ತು ನಾಗಪುರದಲ್ಲಿ ನಡೆದ ಬೃಹತ್‌ ಸಮಾವೇಶಗಳಲ್ಲಿ ಸಾಧು ಸಂತರು ಸೇರಿದಂತೆ ಲಕ್ಷಾಂತರ ಜನರು ಭಾಗವಹಿಸುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಿದರು. ಅಯೋಧ್ಯೆಯಲ್ಲಿ ಬಡೇ ಭಕ್ತಮಾಲ್‌ಕಿ ಬಗಿಯಾದಲ್ಲಿ 3 ಲಕ್ಷ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ವಿಶ್ವ ಹಿಂದೂ ಪರಿಷತ್‌ ಹೇಳಿಕೊಂಡಿದ್ದು, ಅತ್ಯಂತ ಶಾಂತಿಯುತವಾಗಿ ಸಂಪನ್ನವಾಯಿತು.

ಜೈ ಶ್ರೀರಾಮ್‌ ಘೋಷಣೆಗಳ ನಡುವೆ ಮಾತನಾಡಿದ ನಿರ್ಮೋಹಿ ಅಖಾಡದ ರಾಮ್‌ಜಿ ದಾಸ್‌ 'ಪ್ರಯಾಗದಲ್ಲಿ 2019ರಲ್ಲಿ ನಡೆಯುವ(ಜನವರಿ-ಮಾರ್ಚ್‌) ಕುಂಭಮೇಳದಲ್ಲಿ ರಾಮ ಮಂದಿರ ನಿರ್ಮಾಣ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದರು. ''ಇನ್ನು ಕೆಲವು ದಿನ ಮಾತ್ರ. ನೀವೆಲ್ಲರೂ ಸ್ವಲ್ಪ ತಾಳ್ಮೆಯಿಂದಿರಬೇಕೆಂದು ಮನವಿ ಮಾಡುವೆ' ಎಂದು ಅವರು ಹೇಳಿದರು.

ವಿಭಜನೆಗೆ ಬಿಡುವುದಿಲ್ಲ: 'ಯಾವುದೇ ಕಾರಣಕ್ಕೂ ಅಯೋಧ್ಯೆಯ ವಿವಾದಿತ ಭೂಮಿಯ ವಿಭಜನೆಯನ್ನು ಒಪ್ಪುವುದಿಲ್ಲ. ಸಂಪೂರ್ಣ ಜಾಗ ಮಂದಿರ ನಿರ್ಮಾಣಕ್ಕೆ ಬೇಕು,'' ಎಂದು ವಿಹಿಂಪ ನಾಯಕ ಚಂಪತ್‌ ರಾಯ್‌ ಹೇಳಿದರು. ಅವರು ಭೂಮಿಯನ್ನು ಮೂರು ಭಾಗವಾಗಿ ಹಂಚುವ ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ರಾಮ ಜನ್ಮಭೂಮಿ ನ್ಯಾಸ ಅಧ್ಯಕ್ಷ ನೃತ್ಯ ಗೋಪಾಲ್‌ದಾಸ್‌ ಅವರು, ''ನಾವು ಕೋರ್ಟ್‌ಗಳನ್ನು ಗೌರವಿಸುತ್ತೇವೆ. ನಮಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರ ಮೇಲೆ ನಂಬಿಕೆ ಇದೆ. ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತೇವೆ,'' ಎಂದರು.

ಐದು ಗಂಟೆ ಕಾಲ ನಡೆದ ಸಮಾವೇಶದಲ್ಲಿ ನಾನಾ ಆಶ್ರಮ, ಅಖಾಡಗಳ 50 ಸಂತರು ಭಾಗವಹಿಸಿದ್ದರು.

ಹಿಡಿ ಮಣ್ಣಿನ ಪ್ರತಿಜ್ಞೆ
ಕೇಸರಿ ಧ್ವಜ, ಬ್ಯಾನರ್‌ ಹಿಡಿದು ಅದೇ ಬಣ್ಣದ ರುಮಾಲುಗಳನ್ನು ಧರಿಸಿದ್ದ ಲಕ್ಷಾಂತರ ಭಕ್ತರು ಕೈಯಲ್ಲಿ ಹಿಡಿ ಮಣ್ಣನ್ನು ಹಿಡಿದು ರಾಮ ಮಂದಿರ ನಿರ್ಮಾಣದ ಪ್ರತಿಜ್ಞೆ ಮಾಡಿದರು.

******

ಅಯೋಧ್ಯೆ ವಿಚಾರಣೆಯನ್ನು ಚುನಾವಣೆ ಹಿನ್ನೆಲೆಯಲ್ಲಿ ವಿಳಂಬಗೊಳಿಸಲು ಕಾಂಗ್ರೆಸ್‌ ಕೋರ್ಟ್‌ ಮೇಲೆ ಒತ್ತಡ ಹೇರಿತ್ತು.

- ನರೇಂದ್ರ ಮೋದಿ, ಪ್ರಧಾನಿ

******

ನ್ಯಾಯಾಂಗಕ್ಕೆ ಮಂದಿರ ನಿರ್ಮಾಣ ಆದ್ಯತೆ ವಿಷಯ ಅಲ್ಲವಾದರೆ ಸರಕಾರ ಅದಕ್ಕಾಗಿ ಕಾನೂನು ರೂಪಿಸಬೇಕು.

- ಮೋಹನ್‌ ಭಾಗವತ್‌, ಆರೆಸ್ಸೆಸ್‌ ಮುಖ್ಯಸ್ಥ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ