ಮೈಸೂರು: ಸೇನೆಯಲ್ಲಿ ಊಟ ಎನ್ನುವುದು ಬಹಳ ಮುಖ್ಯ ವಿಚಾರವಾಗಿದ್ದು, ಅಧಿಕಾರಿಗಳು ಏನು ತಿನ್ನುತ್ತಾರೋ ಅದನ್ನೇ ಸೈನಿಕರಿಗೂ ನೀಡಲಾಗುತ್ತದೆ ಎಂದು ನಿವೃತ್ತ ಸೇನಾ ಮುಖ್ಯಸ್ಥ ಹಾಗೂ ರಾಜ್ಯ ವಿದೇಶಾಂಗ ವ್ಯವಹಾರಗಳ ಕೆಂದ್ರ ಸಚಿವ ವಿ.ಕೆ.ಸಿಂಗ್ ತಿಳಿಸಿದ್ದಾರೆ.
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ಬಿಎಸ್ಎಫ್ ಯೋಧ ಕಳಪೆ ಊಟ ನೀಡುತ್ತಿರುವ ಬಗ್ಗೆ ವಿಡಿಯೋ ಅಪ್ ಲೋಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೈನಿಕನ ಆರೋಪವನ್ನು ತಳ್ಳಿಹಾಕಿದ್ದಾರೆ.
'ಸದ್ಯದ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಅಂತಹ ಘಟನೆ ನಡೆದಿದ್ದರೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಸದ್ಯ ಹರಿದಾಡುತ್ತಿರುವ ದೃಶ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ' ಎಂದು ಸ್ಪಷ್ಟಪಡಿಸಿದರು.
'ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ಉತ್ತರ ಪ್ರದೇಶದಲ್ಲಿ ಏನಾಗಲಿದೆ ಎನ್ನುವುದನ್ನು ಫಲಿತಾಂಶ ಬಂದ ಮೇಲೆ ಹೇಳುತ್ತೇನೆ. ಚುನಾವಣೆಗೆ ಸಮಯ ಇರುವುದರಿಂದ ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ' ಎಂದರು.