ಆ್ಯಪ್ನಗರ

ಉಗ್ರರ ಅಟ್ಟಹಾಸ ಮಟ್ಟ ಹಾಕದೆ ಬಿಡೆವು: ಮೋದಿ ಎಚ್ಚರಿಕೆ

ಭಯೋತ್ಪಾದಕ ದಾಳಿಗಳಿಂದ ದೇಶ ನರಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ...

Vijaya Karnataka 11 Mar 2019, 8:29 pm
ಘಾಜಿಯಾಬಾದ್‌: ಭಯೋತ್ಪಾದಕ ದಾಳಿಗಳಿಂದ ದೇಶ ನರಳುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಂತಹ ಶಕ್ತಿಗಳಿಗೆ ಕಠಿಣ ಪಾಠ ಕಲಿಸಲು ಸರಕಾರ ಕೆಲವೊಂದು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Vijaya Karnataka Web modi


ಘಾಜಿಯಾಬಾದ್‌ನಲ್ಲಿ ಭಾನುವಾರ 'ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) 50ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವನ್ನು ಗುರಿಯಾಗಿಸುತ್ತಿರುವ ಉಗ್ರರಿಗೆ ಖಡಕ್‌ ಎಚ್ಚರಿಕೆ ರವಾನಿಸಿದರು.

''ಪುಲ್ವಾಮಾ ಮತ್ತು ಉರಿ ಭಯೋತ್ಪಾದಕರ ದಾಳಿಗಳನ್ನು ಉಲ್ಲೇಖಿಸಿದ ಪ್ರಧಾನಿ, ''ಇಷ್ಟು ದಿನ ಅನುಭವಿಸಿದ್ದು ಸಾಕು, ದೇಶ ಮತ್ತೆ ಭಯೋತ್ಪಾದಕರಿಂದ ನರಳಲು ನಾವು ಬಿಡುವುದಿಲ್ಲ. ಉಗ್ರರಿಗೊಂದು ಗತಿ ಕಾಣಿಸುತ್ತೇವೆ,'' ಎಂದರು.

''ನೆರೆಯ ದೇಶವೊಂದು ನಮ್ಮ ಮೇಲೆ ಸದಾ ವಿಷ ಕಾರುತ್ತಿದೆ. ನಮ್ಮ ವಿರುದ್ಧ ಸಮರ ಸಾರುವ ಸಾಮರ್ಥ್ಯ‌ ಆ ದೇಶಕ್ಕೆ ಇಲ್ಲ. ಆದ್ದರಿಂದ ಭಾರತದಲ್ಲಿ ಶಾಂತಿ ಕದಡಲು ಒಳಸಂಚು ರೂಪಿಸುತ್ತಿದೆ. ಇದಕ್ಕಾಗಿ ತನ್ನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದೆ,'' ಎಂದು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೇ ಪರೋಕ್ಷ ವಾಗಿ ವಾಗ್ದಾಳಿ ನಡೆಸಿದರು.

ವೈರತ್ವ ಹೊಂದಿರುವ ಪಕ್ಕದ ದೇಶದಿಂದ ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿ ಸಿಐಎಸ್‌ಎಫ್‌ ಸೇರಿದಂತೆ ನಮ್ಮ ಭದ್ರತಾ ಪಡೆಗಳ ಪಾತ್ರ ಮತ್ತು ಕಾರ್ಯ ಅತ್ಯಂತ ಮಹತ್ವದ್ದು ಎಂದು ಮೋದಿ ಶ್ಲಾಘಿಸಿದರು. ನಮ್ಮ ದೇಶದಲ್ಲಿರುವ ವಿಐಪಿ ಸಂಸ್ಕೃತಿಯಿಂದ ರಾಷ್ಟ್ರದ ಭದ್ರತಾ ವ್ಯವಸ್ಥೆಗೆ ಕೆಲವೊಮ್ಮೆ ಅಡ್ಡಿಯಾಗುತ್ತದೆ ಎಂದು ವಿಷಾದಿಸಿದರು.

ಪಾಕ್‌ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ: ನಿರ್ಮಲಾ

ಬಾಲಾಕೋಟ್‌ ಬಳಿ ಜೈಷೆ ಉಗ್ರರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಮಾಡಬೇಕಿದ್ದ ಕೆಲಸವನ್ನು ಭಾರತ ಮಾಡಿದೆ ಎಂದು ಹೇಳಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಭಾರತ ಆಕ್ರಮಣಶೀಲ ದೇಶವಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅವರು, ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪಾಕಿಸ್ತಾನ, ಅವರಿಗೆ ತರಬೇತಿ, ಹಣಕಾಸು ನೆರವು, ಸೇನಾ ಬೆಂಬಲ ನೀಡುತ್ತಿದೆ,'' ಎಂದು ಆರೋಪಿಸಿದರು.

ಈ ಭೂಮಿಯ ಮೇಲಿರುವ ಯಾವ ಶಕ್ತಿಯೂ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳದಂತೆ ಭಾರತವನ್ನು ತಡೆಯಲಾರದು. ಭಯೋತ್ಪಾದನೆಯನ್ನು ಮೂಲೋಚ್ಛಾಟನೆ ಮಾಡಲು ಮೋದಿ ಸರಕಾರ ಬದ್ಧವಾಗಿದೆ.
- ರಾಜನಾಥ್‌ ಸಿಂಗ್‌, ಗೃಹ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ