ಆ್ಯಪ್ನಗರ

ಟಿಎಂಸಿ ನಾಯಕ ಸುವೇಂದು ಅಧಿಕಾರಿ ರಾಜೀನಾಮೆ ತಿರಸ್ಕರಿಸಿದ ಪಶ್ಚಿಮ ಬಂಗಾಳ ಸ್ಪೀಕರ್‌

'ಸುವೇಂದು ಅಧಿಕಾರಿ ನೇರವಾಗಿ ತಮ್ಮ ಕೈಗೆ ರಾಜೀನಾಮೆ ಪತ್ರ ನೀಡಿಲ್ಲ' ಎಂದಿರುವ ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ರಾಜೀನಾಮೆ ತಿರಸ್ಕರಿಸಿದ್ದಾರೆ. ಸೋಮವಾರ ಬಂದು ಭೇಟಿಯಾಗುವಂತೆ ಅವರು ಸುವೇಂದು ಅಧಿಕಾರಿಗೆ ಸೂಚನೆ ನೀಡಿದ್ದಾರೆ.

Agencies 18 Dec 2020, 7:50 pm
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಸಭಾಧ್ಯಕ್ಷ ವಿಮನ್‌ ಬ್ಯಾನರ್ಜಿ ಟಿಎಂಸಿಯ ಬಂಡಾಯ ನಾಯಕ ಸುವೇಂದು ಅಧಿಕಾರಿ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ. ರಾಜೀನಾಮೆ ಸರಿಯಾಗಿ ಸಲ್ಲಿಕೆಯಾಗಿಲ್ಲ ಎಂಬ ಕಾರಣಕ್ಕೆ ಅವರು ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ.
Vijaya Karnataka Web Suvendu Adhikari


ಜೊತೆಗೆ 'ರಾಜೀನಾಮೆ ಸ್ವಯಂ ಪ್ರೇರಿತ ಮತ್ತು ನೈಜವಾದದ್ದು' ಎಂಬುದಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದೂ ಅವರು ಹೇಳಿದ್ದಾರೆ.
"ರಾಜೀನಾಮೆ ಸ್ವಯಂಪ್ರೇರಿತ ಮತ್ತು ನೈಜವಾದದ್ದು ಎಂದು ನನಗೆ ಅನಿಸದ ಹೊರತು, ಭಾರತದ ಸಂವಿಧಾನದ ನಿಬಂಧನೆಗಳು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಅಡಿಯಲ್ಲಿ ರಾಜೀನಾಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ," ಎಂದು ಸಭಾಧ್ಯಕ್ಷರು ತಿಳಿಸಿದ್ದಾರೆ.

ಸುವೇಂದು ಅಧಿಕಾರಿ ತಮ್ಮ ಕೈಗೆ ನೇರವಾಗಿ ರಾಜೀನಾಮೆ ಪತ್ರ ಹಸ್ತಾಂತರಿಸಿಲ್ಲ ಎಂದು ಬಿಮನ್‌ ಬ್ಯಾನರ್ಜಿ ಹೇಳಿದ್ದಾರೆ. ಹೀಗಾಗಿ ಸೋಮವಾರ ಬಂದು ಭೇಟಿಯಾಗುವಂತೆ ಸುವೇಂದು ಅಧಿಕಾರಿಗೆ ಸ್ಪೀಕರ್‌ ಸೂಚನೆ ನೀಡಿದ್ದಾರೆ.

ಟಿಎಂಸಿ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಡಿ. 19ಕ್ಕೆ ಬಿಜೆಪಿಗೆ ಸೇರ್ಪಡೆ?
ಕಳೆದ 24 ಗಂಟೆಗಳ ಅವಧಿಯಲ್ಲಿ ಮೂವರು ಘಟಾನುಘಟಿ ನಾಯಕರು ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಆರಂಭದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುವೇಂದು ಅಧಿಕಾರಿ ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿ, ಪತ್ರವನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಸಲ್ಲಿಸಿದ್ದರು. ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಅವರು ಶನಿವಾರದಿಂದ ಆರಂಭವಾಗಲಿರುವ ಗೃಹ ಸಚಿವ ಅಮಿತ್‌ ಶಾ ರಾಜ್ಯ ಪ್ರವಾಸದ ವೇಳೆ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.

ಅವರ ರಾಜೀನಾಮೆ ಬಳಿಕ ಪ್ರತಿಕ್ರಿಯೆ ನೀಡಿದ್ದ ಮಮತಾ ಬ್ಯಾನರ್ಜಿ, ಪಕ್ಷದಲ್ಲಿ ಟಿಕೆಟ್‌ ಸಿಗದವರೆಲ್ಲ ಪಕ್ಷ ತೊರೆಯುತ್ತಿದ್ದಾರೆ ಎಂದಿದ್ದರು.
ಸುವೇಂದು ಅಧಿಕಾರಿಯ ರಾಜೀನಾಮೆ ಬೆನ್ನಿಗೆ ಗುರುವಾರ ಟಿಎಂಸಿ ಶಾಸಕ ಜಿತೇಂದ್ರ ತಿವಾರಿ ಕೂಡ ತಾವು ಪಕ್ಷದಲ್ಲಿ ಮತ್ತು ಸರಕಾರದಲ್ಲಿ ತಾವು ಹೊಂದಿದ್ದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ