ಆ್ಯಪ್ನಗರ

ರಾಷ್ಟ್ರಪತಿಗಳನ್ನು ಆಶೀರ್ವದಿಸಿದ ವೃಕ್ಷ ಮಾತೆ

ಶನಿವಾರ ರಾಷ್ಟ್ರಪತಿ ಭವನದಲ್ಲಿ 54 ಸಾಧಕರನ್ನು ಪದ್ಮ ಗೌರವದಿಂದ ಪುರಸ್ಕರಿಸುವ ಕಾರ್ಯಕ್ರಮವಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗೌರವ ಪ್ರದಾನ ಮಾಡಿದರೆ, ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಹತ್ತಾರು ಗಣ್ಯರು ಉಪಸ್ಥಿತರಿದ್ದರು

Vijaya Karnataka 17 Mar 2019, 5:00 am
ಹೊಸದಿಲ್ಲಿ: ಭಾವುಕತೆ, ತಾಯಿ ಮನಸು, ಸೌಜನ್ಯ ಇವೆಲ್ಲ ಎಲ್ಲ ಶಿಷ್ಟಾಚಾರಗಳನ್ನು ಮೀರಿದ್ದು ಎನ್ನುವುದು ಶನಿವಾರ ರಾಷ್ಟ್ರಪತಿ ಭವನದಲ್ಲಿ ಮತ್ತೊಮ್ಮೆ ಸಾಬೀತಾಯಿತು.
Vijaya Karnataka Web timmakka


ಸಾವಿರಾರು ಮರಗಳನ್ನು ಮಕ್ಕಳಂತೆ ಬೆಳೆಸಿದ ಕರ್ನಾಟಕದ ಹೆಮ್ಮೆಯ ಸಾಧಕಿ, ವೃಕ್ಷ ಮಾತೆ, ಸಾಲು ಮರದ ತಿಮ್ಮಕ್ಕ ಅವರು ದೇಶದ ರಾಷ್ಟ್ರಪತಿಯ ತಲೆ ಮುಟ್ಟಿ ಆಶೀರ್ವದಿಸಿದ ಅದ್ಬುತ ಕ್ಷಣ ಅದು.

ಶನಿವಾರ ರಾಷ್ಟ್ರಪತಿ ಭವನದಲ್ಲಿ 54 ಸಾಧಕರನ್ನು ಪದ್ಮ ಗೌರವದಿಂದ ಪುರಸ್ಕರಿಸುವ ಕಾರ್ಯಕ್ರಮವಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗೌರವ ಪ್ರದಾನ ಮಾಡಿದರೆ, ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಹತ್ತಾರು ಗಣ್ಯರು ಉಪಸ್ಥಿತರಿದ್ದರು. ಇದು ಅತ್ಯಂತ ಕಟ್ಟು ನಿಟ್ಟಿನ ಶಿಷ್ಟಾಚಾರಕ್ಕೆ ಹೆಸರಾದ ಕಾರ್ಯಕ್ರಮ.

ತಮ್ಮ ಹೆಸರು ಪ್ರಕಟಿಸುತ್ತಿದ್ದಂತೆಯೇ 106 ವರ್ಷದ, ಹಸಿರು ಸೀರೆಯುಟ್ಟ ಪುಟ್ಟ ದೇಹದ ತಿಮ್ಮಕ್ಕ ಪುಟಪುಟನೆ ನಡೆಯುತ್ತ ಬಂದರು. ವಿಭೂತಿ ಧರಿಸಿದ ಮುಖದ ತುಂಬ ಗಲಗಲ ನಗು. ತಮಗಿಂತ 33 ವರ್ಷ ಹಿರಿಯರಾದ ತಿಮ್ಮಕ್ಕ ಅವರಿಗೆ ಪದ್ಮ ಗೌರವ ಪ್ರದಾನ ಮಾಡಿ, ಕ್ಯಾಮೆರಾ ಕಡೆಗೆ ನೋಡುವಂತೆ ವಿನಂತಿಸಿದರು.

ಭಾವಚಿತ್ರ ತೆಗೆಯುತ್ತಿದ್ದಂತೆಯೇ ಮತ್ತೆ ರಾಷ್ಟ್ರಪತಿಗಳ ಕಡೆಗೆ ತಿರುಗಿದ ತಿಮ್ಮಕ್ಕ ಕೈ ಎತ್ತಿ ರಾಷ್ಟ್ರಪತಿಗಳ ತಲೆ ಮೇಲಿಟ್ಟು ಆಶೀರ್ವಾದ ಮಾಡಿದರು. ರಾಷ್ಟ್ರಪತಿಗಳು ಕೂಡಾ ಸೌಜನ್ಯದಿಂದ ತಲೆ ಬಾಗಿ ಹಿರಿಯ ಜೀವದ ಆಶೀರ್ವಾದವನ್ನು ಮನಪೂರ್ವಕವಾಗಿ ಸ್ವೀಕರಿಸಿದರು. ಅಷ್ಟು ಹೊತ್ತಿಗೆ ಇಡೀ ಸಭಾಂಗಣ ನಿರಂತರ ಕರತಾಡನದ ಮೂಲಕ ಅಪರೂಪದ ಕ್ಷಣದ ಅನುಭೂತಿ ಪಡೆಯಿತು.

8000 ಮರಗಳ ತಾಯಿ

ತುಮಕೂರು ಜಿಲ್ಲೆ ಹುಲಿಕಲ್‌ ಗ್ರಾಮದ ನಿವಾಸಿ, 106 ವರ್ಷದ ತಿಮ್ಮಕ್ಕ 65 ವರ್ಷಗಳಲ್ಲಿ ನೆಟ್ಟು ಬೆಳೆಸಿದ ಮರಗಳ ಸಂಖ್ಯೆ 8000. ಇದರಲ್ಲಿ 400 ಆಲದ ಮರ. 4 ಕಿ.ಮೀ. ಉದ್ದಕ್ಕೆ ರಸ್ತೆ ಬದಿಯಲ್ಲಿ ಅವರು ನಿರ್ಮಿಸಿದ ವೃಕ್ಷ ಸಂಪತ್ತಿದೆ. ಮಕ್ಕಳಿಲ್ಲದ ಕೊರಗಿನಲ್ಲಿದ್ದ ತಿಮ್ಮಕ್ಕ ತಮ್ಮ 40ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದರು. ಆಗ ಗಂಡನ ನೆರವಿನಿಂದ ಮರಗಳನ್ನು ನೆಟ್ಟು ಮಕ್ಕಳಂತೆ ಬೆಳೆಸುವ ಸಂಕಲ್ಪ ತೊಟ್ಟರು. ಗಟ್ಟಿ ನಿರ್ಧಾರ, ಸತತ ಪರಿಶ್ರಮದ ಫಲವೀಗ ಜಗತ್ತೇ ಕಂಡರಿಯದ ಮಹಾಸಾಧನೆಯಾಗಿದೆ.

54 ಸಾಧಕರಿಗೆ ಪದ್ಮ ಗೌರವ

ಈ ಬಾರಿ 112 ಮಂದಿಗೆ ಪದ್ಮ ಗೌರವ ಪ್ರಕಟಿಸಲಾಗಿದ್ದು, ಮಾ.11ರಂದು 47 ಮಂದಿಗೆ ಪ್ರದಾನ ಮಾಡಲಾಗಿತ್ತು. ಶನಿವಾರ 54 ಮಂದಿಗೆ ಗೌರವ ನೀಡಲಾಯಿತು. ಇಸ್ರೋ ವಿಜ್ಞಾನಿ ಎಸ್‌. ನಂಬಿ ನಾರಾಯಣನ್‌, ನಟ ಮನೋಜ್‌ ಬಾಜಪೇಯಿ, ಜನಪದ ಗಾಯಕಿ ತೀಜನ್‌ ಬಾಯಿ, ಕರ್ನಾಟಕ ಮೂಲದ ಅಣು ಭೌತಶಾಸ್ತ್ರಜ್ಞೆ ರೋಹಿಣಿ ಗೋಡ್ಬೋಳೆ Üನಿವಾರ ಗೌರವ ಸ್ವೀಕರಿಸಿದ ಪ್ರಮುಖರಲ್ಲಿ ಸೇರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ