ಆ್ಯಪ್ನಗರ

ಆರೋಗ್ಯ ಸೇತು ಆ್ಯಪ್‌ ಸೃಷ್ಟಿಸಿದ್ದು ಯಾರು? ಸರಕಾರದ ಬಳಿಯೇ ಉತ್ತರವಿಲ್ಲ!

ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಐಟಿ ಇಲಾಖೆ ಆರೋಗ್ಯ ಸೇತು ಆ್ಯಪ್‌ ಸೃಷ್ಟಿಸಿದ್ದು ಯಾರು ಎಂಬ ಮಾಹಿತಿ ತಮ್ಮ ಬಳಿಯಲ್ಲಿ ಇಲ್ಲ ಎಂದು ಆರ್‌ಟಿಐ ಪ್ರಶ್ನೆಗೆ ಉತ್ತರಿಸಿವೆ. ಈ ರೀತಿಯ ಹಾರಿಕೆಯ ಉತ್ತರ ನೀಡಿದ್ದಕ್ಕೆ ಕೇಂದ್ರ ಮಾಹಿತಿ ಆಯೋಗ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

Agencies 28 Oct 2020, 3:58 pm
ಹೊಸದಿಲ್ಲಿ: ಸರಕಾರ ಮೇಲಿಂದ ಮೇಲೆ ಆರೋಗ್ಯ ಸೇತು ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಸೂಚಿಸಿದ್ದರಿಂದ ಕೋಟ್ಯಂತರ ಜನರು ಆರೋಗ್ಯ ಸೇತು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಆದರೆ ಇದನ್ನು ಸೃಷ್ಟಿಸಿದ್ದು ಯಾರು ಎಂಬುದು ಸರಕಾರಕ್ಕೇ ಗೊತ್ತಿಲ್ಲ. ಅಚ್ಚರಿಯಾದರೂ ಇದು ಸತ್ಯ.
Vijaya Karnataka Web aarogya setu


ಆರೋಗ್ಯ ಸೇತು ಆ್ಯಪ್‌ನ ವೆಬ್‌ಸೈಟ್‌ನಲ್ಲಿ ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಐಟಿ ಇಲಾಖೆ ಸೃಷ್ಟಿಸಿದೆ ಎಂಬ ಮಾಹಿತಿ ಸಿಗುತ್ತದೆ. ಆದರೆ ಈ ಎರಡೂ ಇಲಾಖೆಗಳು ಆ್ಯಪ್‌ ಸೃಷ್ಟಿಸಿದ್ದು ಯಾರು ಎಂಬ ಬಗ್ಗೆ ತಮ್ಮ ಬಳಿಯಲ್ಲಿ ಮಾಹಿತಿ ಇಲ್ಲ ಎಂದು ಆರ್‌ಟಿಐ ಪ್ರಶ್ನೆಗೆ ಉತ್ತರಿಸಿವೆ.

ಈ ರೀತಿಯ ಹಾರಿಕೆಯ ಉತ್ತರ ನೀಡಿದ್ದಕ್ಕೆ ಕೇಂದ್ರ ಮಾಹಿತಿ ಆಯೋಗ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. “ಅಧಿಕಾರಿಗಳು ಮಾಹಿತಿಯನ್ನು ನಿರಾಕರಿಸುವುದನ್ನು ಒಪ್ಪಲಾಗದು,” ಎಂದು ಆಯೋಗ ಖಾರವಾಗಿ ಹೇಳಿದೆ.

"ಆ್ಯಪ್ ಅನ್ನು ಯಾರು ರೂಪಿಸಿದ್ದಾರೆ, ಕಡತಗಳು ಎಲ್ಲಿವೆ ಎಂಬುದನ್ನು ವಿವರಿಸಲು ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇದು ಹಾಸ್ಯಾಸ್ಪದ," ಎಂದಿರುವ ಆಯೋಗ, ನವೆಂಬರ್‌ 24 ರಂದು ತನ್ನ ಮುಂದೆ ಹಾಜರಾಗುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದೆ.

ಸಾಮಾಜಿಕ ಕಾರ್ಯಕರ್ತ ಸೌರವ್‌ ದಾಸ್‌, ಹಲವು ಇಲಾಖೆಗಳನ್ನು ಸಂಪರ್ಕಿಸಿಯೂ, ಯಾವೊಂದು ಇಲಾಖೆಯೂ ಸೂಕ್ತ ಮಾಹಿತಿ ನೀಡಿಲ್ಲ ಎಂದು ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು.

ಆ್ಯಪ್‌ ರೂಪಿಸಲು ಸಿದ್ಧಪಡಿಸಿದ್ದ ಪ್ರಸ್ತಾವನೆ, ಇದಕ್ಕೆ ಅನುಮೋದನೆ ನೀಡಿದ್ದು, ಯಾವೆಲ್ಲ ಕಂಪನಿಗಳು ಭಾಗವಹಿಸಿದ್ದವು, ಯಾವೆಲ್ಲ ಇಲಾಖೆಗಳು ಇದರಲ್ಲಿ ಪಾಲ್ಗೊಂಡಿದ್ದವು, ಖಾಸಗಿ ಕಂಪನಿಗಳ ಜೊತೆಗಿನ ಮಾತುಕತೆಯ ವಿವರಗಳನ್ನು ಅವರು ಕೇಳಿದ್ದರು.

ಕಳೆದ ಎರಡು ತಿಂಗಳ ಅವಧಿಯಲ್ಲಿ ಅವರು ಕೇಳಿದ ಪ್ರಶ್ನೆ ಇಲಾಖೆಯಿಂದ ಇಲಾಖೆಗೆ ಹಾರುತ್ತಾ ಹೋಯಿತೇ ವಿನಃ ಉತ್ತರ ಮಾತ್ರ ಇಲ್ಲಿಯವರೆಗೆ ಬಂದಿಲ್ಲ.

ರಾಷ್ಟ್ರೀಯ ಮಾಹಿತಿ ಕೇಂದ್ರ 'ಆ್ಯಪ್‌ ಸೃಷ್ಟಿಗೆ ಸಂಬಂಧಿಸಿದ ಕಡತ ತನ್ನ ಬಳಿಯಲ್ಲಿ ಇಲ್ಲ' ಎಂದರೆ, ಐಟಿ ಇಲಾಖೆ ಪ್ರಶ್ನೆಯನ್ನು ರಾಷ್ಟ್ರೀಯ ಇ-ಆಡಳಿತ ವಿಭಾಗಕ್ಕೆ ವರ್ಗಾಯಿಸಿತು. 'ಕೇಳಿದ ಮಾಹಿತಿ ತನ್ನ ವಿಭಾಗಕ್ಕೆ ಸಂಬಂಧಿಸಿದ್ದಲ್ಲ' ಎಂದು ಉತ್ತರಿಸಿ ಇ-ಆಡಳಿತ ವಿಭಾಗ!

ಈ ಸಂಬಂಧ ಆರ್‌ಟಿಐ ಕೇಂದ್ರ ಮಾಹಿತಿ ಆಯೋಗ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗಕ್ಕೆ ಶೋಕಾಸ್‌ ನೋಟಿಸ್‌ನ್ನೂ‌ ಜಾರಿಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ