ಆ್ಯಪ್ನಗರ

Shaista Parveen: ಪೊಲೀಸನ ಮಗಳು ಈಗ ಮೋಸ್ಟ್ ವಾಂಟೆಡ್! ಸಾಮಾನ್ಯಳಲ್ಲ ಅತೀಕ್ ಅಹ್ಮದ್‌ನ ಹೆಂಡತಿ ಶಾಯಿಸ್ತಾ

Who is Shaista Parveen Most Wanted in UP Police List: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ ಹತ್ಯೆ ಬೆನ್ನಲ್ಲೇ, ಆತನ ಹೆಂಡತಿ ಶಾಯಿಸ್ತಾ ಪರ್ವೀನ್‌ಗಾಗಿ ಉತ್ತರ ಪ್ರದೇಶ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಉಮೇಶ್ ಪಾಲ್ ಹತ್ಯೆಯಲ್ಲಿ ಆಕೆಯ ಪಾತ್ರ ಖಚಿತವಾಗಿದೆ.

Authored byಅಮಿತ್ ಎಂ.ಎಸ್ | Vijaya Karnataka Web 19 Apr 2023, 3:01 pm
ಪ್ರಯಾಗ್‌ರಾಜ್: ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ ಕುಟುಂಬವನ್ನು ಪೊಲೀಸರು ಮಕಾಡೆ ಮಲಗಿಸಿದ್ದಾರೆ. ದಶಕಗಳ ಕಾಲ ಉಪಟಳ ನೀಡಿದ್ದ ಅತೀಕ್ ಹಾಗೂ ಆತನ ಸಹೋದರ ಅಶ್ರಫ್ ಇಬ್ಬರೂ ಹಂತಕರ ಗುಂಡೇಟಿಗೆ ಬಲಿಯಾಗಿದ್ದರೆ, ಅಪ್ಪ ನೆಟ್ಟ ಆಲದ ಮರ ಎಂದು ತಾನೂ ಬಂದೂಕು ಹಿಡಿದಿದ್ದ ಅತೀಕ್‌ನ ಮೂರನೇ ಮಗ ಅಸಾದ್ ಅಹ್ಮದ್ ಕೆಲವು ದಿನಗಳ ಹಿಂದೆ ಎನ್‌ಕೌಂಟರ್‌ನಲ್ಲಿ ಹೆಣವಾಗಿದ್ದ. ಅತೀಕ್‌ನ ಇನ್ನಿಬ್ಬರು ಮಕ್ಕಳು ಜೈಲಿನಲ್ಲಿದ್ದಾರೆ. ಅತೀಕ್‌ನ ಬೃಹತ್ ಮಾಫಿಯಾ ಬಹುತೇಕ ಮಣ್ಣಿಗೆ ಸೇರಿದೆ. ಇಷ್ಟಾದ ನಂತರವೂ ಅಲ್ಲಿನ ಪೊಲೀಸರು ಅತೀಕ್ ಕುಟುಂಬದ ಬೆನ್ನುಬಿದ್ದಿದ್ದಾರೆ. ಇದಕ್ಕೆ ಕಾರಣ ಶಾಯಿಸ್ತಾ ಪರ್ವೀನ್ ಎಂಬ ಹೆಣ್ಣುಮಗಳು.
Vijaya Karnataka Web who is shaista parveen wife of gangster atiq ahmed handled all his affairs
Shaista Parveen: ಪೊಲೀಸನ ಮಗಳು ಈಗ ಮೋಸ್ಟ್ ವಾಂಟೆಡ್! ಸಾಮಾನ್ಯಳಲ್ಲ ಅತೀಕ್ ಅಹ್ಮದ್‌ನ ಹೆಂಡತಿ ಶಾಯಿಸ್ತಾ

ಪಾಷ್ತೋ ಎಂಬ ಪದದಿಂದ ಉದ್ಭವಿಸಿದ ಶಾಯಿಸ್ತಾ ಎಂಬ ಹೆಸರಿ ಅರ್ಥ ಸುಂದರ ಎಂದು. ಆದರೆ ಶಾಯಿಸ್ತಾ ಪರ್ವೀನ್ ವಿಚಾರದಲ್ಲಿ ಅದು ಸೌಂದರ್ಯವಲ್ಲ, ಕ್ರೌರ್ಯ. ಶಾಯಿಸ್ತಾ ಬೇರೆ ಯಾರೂ ಅಲ್ಲ, ಕೊಲೆ, ಅಪಹರಣ, ಧಮಕಿ, ಸುಲಿಗೆ ಮುಂತಾದ ನೂರಾರು ಪ್ರಕರಣಗಳನ್ನು ಹೊಂದಿದ್ದ, ಮಾಜಿ ರಾಜಕಾರಣಿಯೂ ಆಗಿದ್ದ ಅತೀಕ್ ಅಹ್ಮದ್‌ನ ಹೆಂಡತಿ. ಇಂದು ಆಕೆ ಉತ್ತರ ಪ್ರದೇಶ ಪೊಲೀಸರ 'ಟಾಪ್ ವಾಂಟೆಡ್' ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾಳೆ. ಆಕೆಯನ್ನು ಬಂಧಿಸಲು ನೆರವಾದವರಿಗೆ ಸರ್ಕಾರ 50 ಸಾವಿರ ರೂ ಬಹುಮಾನ ಘೋಷಿಸಿದೆ.

ಉತ್ತರ ಪ್ರದೇಶ: ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ಗೆ ಅಸಾದ್‌ ಅಹ್ಮದ್‌ ಬಲಿ, ಕಾರ್ಯಾಚರಣೆಗೆ ಸಿಎಂ ಯೋಗಿ ಶ್ಲಾಘನೆ

ಲಖನೌ: ಪ್ರಯಾಗ್‌ರಾಜ್‌ನ ವಕೀಲ ಉಮೇಶ್‌ ಪಾಲ್‌ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಅಸಾದ್ ಅಹ್ಮದ್ ಮತ್ತು ಗುಲಾಮ್‌ನನ್ನು ಉತ್ತರ ಪ್ರದೇಶದ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ಹತ್ಯೆಯಾಗಿರುವ ಅಸಾದ್‌ ಅಹ್ಮದ್‌, ಉತ್ತರ ಪ್ರದೇಶದ ಮಾಜಿ ಸಂಸದ ಹಾಗೂ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ ಮಗ.


ಅಸಾದ್ ಹಾಗೂ ಶೂಟರ್ ಗುಲಾಮ್‌ನನ್ನು ಎನ್‌ಕೌಂಟರ್ ಮಾಡಿದ ಎಸ್‌ಟಿಎಫ್ ಅಧಿಕಾರಿಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಶ್ಲಾಘಿಸಿದ್ದಾರೆ. ಕಾನೂನು ಹಾಗೂ ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿದ್ದಾರೆ. ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಕೊಲೆ ಪ್ರಕರಣದ ಸಾಕ್ಷಿಯಾಗಿದ್ದ ಉಮೇಶ್ ಪಾಲ್‌ ಅವರನ್ನ ಫೆಬ್ರವರಿ 24ರಂದು ಪ್ರಯಾಗ್‌ರಾಜ್‌ನಲ್ಲಿ ಹತ್ಯೆಯಾಗಿತ್ತು. ಅಸಾದ್ ಮತ್ತು ಗುಲಾಮ್‌ ಇಬ್ಬರ ತಲೆಗೂ ತಲಾ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.


ನೂರಾರು ಕ್ರಿಮಿನಲ್ ಕೇಸ್‌ಗಳನ್ನು ಹೊತ್ತಿರುವ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ ಎನ್‌ಕೌಂಟರ್‌ ನಡೆಯುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಉತ್ತರ ಪ್ರದೇಶ ಪೊಲೀಸರು ಗುರುವಾರ ಝಾನ್ಸಿಯಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಅಸಾದ್ ಮತ್ತು ಗುಲಾಮ್‌ನನ್ನು ಹತ್ಯೆ ಮಾಡಿದ್ದಾರೆ.


''ಇದೊಂದು ಐತಿಹಾಸಿಕ ಕಾರ್ಯಾಚರಣೆಯಾಗಿದ್ದು, ಅಪರಾಧ ಆಧಾರಿತ ರಾಜಕೀಯದ ಕೊನೆಯಾಗಿದೆ. ಅಂಥ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರು ಕೂಡಲೇ ಶರಣಾಗಬೇಕು ಹಾಗೂ ಸರಿಯಾದ ಮಾರ್ಗವನ್ನು ಹಿಡಿಯಬೇಕು'' ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ್ದಾರೆ.


ಉಮೇಶ್‌ ಪಾಲ್‌ ಪ್ರಕರಣದಲ್ಲಿ ಅತೀಕ್ ಅಹ್ಮದ್‌ನನ್ನು ಪ್ರಯಾಗ್‌ರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಮಯದಲ್ಲೇ ಆತನ ಮಗನ ಎನ್‌ಕೌಂಟರ್ ಸುದ್ದಿ ಹೊರಬಂದಿದೆ. ಮಗನನ್ನು ಪೊಲೀಸರು ಗುಂಡಿಕ್ಕಿ ಕೊಂದಿರುವ ಸುದ್ದಿ ಕೇಳಿ ಕೋರ್ಟ್‌ನಲ್ಲಿಯೇ ಅತೀಕ್ ಅಹ್ಮದ್ ಬಿಕ್ಕಳಿಸಿ ಅತ್ತಿದ್ದಾನೆ. ಇನ್ಜೊಂದೆಡೆ ನ್ಯಾಯಾಲಯ ಅತೀಕ್ ಅಹ್ಮದ್‌ನನ್ನು ಏಳು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.


ದಿವಂಗತ ಉಮೇಶ್‌ ಪಾಲ್‌ ಅವರ ತಾಯಿ ಮತ್ತು ಹೆಂಡತಿಯು ಉತ್ತರ ಪ್ರದೇಶ ಸರಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ''ನ್ಯಾಯ ಕೊಡಿಸಿದ್ದಕ್ಕೆ ಸಿಎಂ ಯೋಗಿ ಅವರಿಗೆ ಧನ್ಯವಾದಗಳು, ಮುಂದೆಯೂ ನಮಗೆ ನ್ಯಾಯ ಸಿಗುವಂತಾಗಬೇಕು. ಸಿಎಂ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ'' ಎಂದು ಪ್ರತಿಕ್ರಿಯಿಸಿದ್ದಾರೆ.


ಉಮೇಶ್ ಪಾಲ್ ಅವರನ್ನು ಕೊಂದ ಬಳಿಕ ಅಸಾದ್ ಅಹ್ಮದ್ ಲಖನೌಗೆ ಪರಾರಿಯಾಗಿದ್ದ. ನಂತರ ಕಾನ್ಪುರ ಹಾಗೂ ಮೀರತ್‌ಗೆ ತೆರಳಿ, ಕೊನೆಗೆ ದಿಲ್ಲಿಗೆ ತಲುಪಿದ್ದ. ಪೊಲೀಸರಿಗೆ ತನ್ನ ಸುಳಿವು ಸಿಕ್ಕಿದೆ ಎಂಬುದು ಗೊತ್ತಾಗಿದ್ದರಿಂದ ಮಧ್ಯಪ್ರದೇಶಕ್ಕೆ ಪರಾರಿಯಾಗಲು ಉದ್ದೇಶಿಸಿದ್ದ. ಹೀಗಾಗಿ ಝಾನ್ಸಿಗೆ ಹೋಗಿ, ಅಲ್ಲಿಂದ ರಾಜ್ಯದ ಗಡಿಯತ್ತ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ. ಆಗ ಪೊಲೀಸರು ಅಡ್ಡಗಟ್ಟಿದ್ದರು. ಇಬ್ಬರು ಡಿಸಿಪಿ ದರ್ಜೆಯ ಅಧಿಕಾರಿಗಳ ನೇತೃತ್ವದ 12 ಮಂದಿಯ ತಂಡವು ಈ ಕಾರ್ಯಾಚರಣೆ ನಡೆಸಿದೆ. ಝಾನ್ಸಿಯ ಬಬಿನಾ ರಸ್ತೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು 40 ಸುತ್ತುಗಳಷ್ಟು ಗುಂಡುಗಳನ್ನು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ.

ಗೃಹಿಣಿಯಾಗಿದ್ದಾಕೆಯೇ ಉತ್ತರಾಧಿಕಾರಿ

ಅತೀಕ್ ಅಹ್ಮದ್ ಕಟ್ಟಿದ ರೌಡಿ ಸಾಮ್ರಾಜ್ಯ ಅಂತಿಂತಹದ್ದಲ್ಲ. ಪ್ರಯಾಗ್‌ರಾಜ್‌ನ ಕಾಲೇಜೊಂದರಲ್ಲಿ 12ನೇ ತರಗತಿ ಓದಿದ್ದ ಶಾಯಿಸ್ತಾ, ಮದುವೆಯಾದ ಹೊಸತರಲ್ಲಿ ತಾನಾಯಿತು, ತನ್ನ ಮನೆ ಕೆಲಸಗಳಾಯಿತು ಎಂದು ಅಪ್ಪಟ ಗೃಹಿಣಿಯ ಜವಾಬ್ದಾರಿ ನಿರ್ವಹಿಸುತ್ತಿದ್ದವಳು. ಈಗ 50 ವರ್ಷದವಳಾಗಿರುವ ಶಾಯಿಸ್ತಾಳಿಗೆ ಕ್ರಮೇಣ ಗಂಡನ ಸಾಮ್ರಾಜ್ಯದ ಒಳ- ಹೊರಗು ಪರಿಚಯವಾಯಿತು. ಅತೀಕ್ ಮತ್ತು ಅಶ್ರಫ್ ಇಬ್ಬರೂ ಜೈಲಿಗೆ ಹೋದ ಸಮಯದಲ್ಲೆಲ್ಲಾ ಆಕೆಯೇ ಗಂಡನ ವ್ಯವಹಾರಗಳನ್ನು ನಿಭಾಯಿಸತೊಡಗಿದ್ದಳು. ಗಂಡನ ಅನುಪಸ್ಥಿತಿಯಲ್ಲಿ ಆಕೆಯೇ ಉತ್ತರಾಧಿಕಾರಿಯಾಗಿದ್ದಳು.

ಪೊಲೀಸ್ ಕುಟುಂಬದಿಂದ ಬಂದ ಡಾನ್ ಹೆಂಡತಿ

1996ರಲ್ಲಿ ಅತೀಕ್‌ನನ್ನು ಆಕೆ ಮದುವೆಯಾಗುವಾಗ, ಆತ ಗ್ಯಾಂಗ್ ಒಂದರ ನಾಯಕನಾಗಿದ್ದ. ಈ ದಂಪತಿಗೆ ಐವರು ಮಕ್ಕಳು. ಅವರಲ್ಲಿ ಮೂರನೇಯಾತ, ಅತೀಕ್ ಹತ್ಯೆಗೂ ಕೆಲವು ದಿನಗಳ ಹಿಂದೆ ಪೊಲೀಸರಿಂದ ಎನ್‌ಕೌಂಟರ್‌ಗೆ ಬಲಿಯಾಗಿದ್ದ. ದೊಡ್ಡ ಗಂಡು ಮಕ್ಕಳಿಬ್ಬರು ಅಲಿ ಹಾಗೂ ಉಮರ್ ಅಹ್ಮದ್. ಇನ್ನಿಬ್ಬರು ಅಪ್ರಾಪ್ತ ವಯಸ್ಸಿನವರು.
ವಿಶೇಷವೆಂದರೆ ಶಾಯಿಸ್ತಾ ಪೊಲೀಸ್ ಕುಟುಂಬದಿಂದ ಬಂದವಳು. ಆಕೆಯ ಅಪ್ಪ ನಿವೃತ್ತ ಪೊಲೀಸ್ ಕಾನ್‌ಸ್ಟೆಬಲ್ ಮೊಹಮ್ಮದ್ ಹರೂನ್. ಪ್ರಯಾಗ್‌ರಾಜ್‌ನ ದಾಮುಪುರ್ ಆಕೆಯ ಕುಟುಂಬ ವಾಸವಿದ್ದ ಹಳ್ಳಿ. ಮಗುವಾಗಿದ್ದಾಗ ಶಾಯಿಸ್ತಾ ಅಪ್ಪನ ಸರ್ಕಾರ ಪೊಲೀಸ್ ಕ್ವಾಟ್ರರ್ಸ್‌ನಲ್ಲಿ ಬೆಳೆದಿದ್ದಳು. ನಾಲ್ವರು ಸಹೋದರಿಯರು ಮತ್ತು ಇಬ್ಬರು ಸಹೋದರರಿಗೆ ಆಕೆ ಹಿರಿಯಕ್ಕ. ಆಕೆಯ ಸಹೋದರರಲ್ಲಿ ಒಬ್ಬಾತ ಮದರಸಾ ಒಂದರಲ್ಲಿ ಪ್ರಾಂಶುಪಾಲ.

ಜೈಲಿಗೆ ಫೋನ್ ಕಳುಹಿಸಿದ್ದಳು

2023ರ ಫೆ. 24ರಂದು ನಡೆದ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಶಾಯಿಸ್ತಾ ಮುನ್ನೆಲೆಗೆ ಬಂದಿದ್ದಳು. ಪೊಲೀಸ್ ಮೂಲಗಳ ಪ್ರಕಾರ, ಉಮೇಶ್ ಪಾಲ್ ಹತ್ಯೆ ಬಗ್ಗೆ ಚರ್ಚಿಸಲು ಆಕೆ ಗುಜರಾತ್‌ನ ಸಬರಮತಿ ಜೈಲಿಗೆ ತೆರಳಿ ಗಂಡನ ಜತೆ ಚರ್ಚಿಸಿದ್ದಳು.
"ಜೈಲಿನ ಒಳಗೆ ತನಗೆ ಫೋನ್ ಹಾಗೂ ಸಿಮ್ ಅನ್ನು ಕಳುಹಿಸುವಂತೆ ಅತೀಕ್ ಅಹ್ಮದ್ ಹೆಂಡತಿಗೆ ಹೇಳಿದ್ದ. ಹಾಗೆಯೇ ಕಾರಾಗೃಹದ ಒಳಗೆ ಫೋನ್ ತಂದುಕೊಡಬಲ್ಲ ಪೊಲೀಸ್ ಅಧಿಕಾರಿ ಯಾರೆಂದು ಕೂಡ ಹೇಳಿದ್ದ. ಕೆಲವು ದಿನಗಳ ಬಳಿಕ ಫೋನ್ ರವಾನೆಯಾಗಿತ್ತು. ಶೂಟರ್‌ಗಳ ಜತೆ ಮಾತನಾಡಲು ಹಾಗೂ ಪಾಲ್ ಹತ್ಯೆಗೆ ಸಂಚು ರೂಪಿಸಲು ಅತೀಕ್ ಅದನ್ನು ಬಳಸಿದ್ದ" ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಾಪರ್ಟಿ ಡೀಲರ್ ಜೀಶಾನ್ ಎಂಬಾತನಿಗೆ ಹಣ ನೀಡುವಂತೆ ಅತೀಕ್ ಸೂಚನೆ ನೀಡಿದ್ದ. ಈ ವಿಚಾರವಾಗಿ ತನಗೆ ಶಾಯಿಸ್ತಾ ಅನೇಕ ಬಾರಿ ಫೋನ್ ಮಾಡಿ ಬೆದರಿಕೆ ಹಾಕಿದ್ದಳು ಎಂದು ಜೀಶಾನ್ ಆರೋಪಿಸಿದ್ದಾನೆ.

ಬಿಎಸ್‌ಪಿ ಸೇರಿದ್ದ ಶಾಯಿಸ್ತಾ

ಉಮೇಶ್ ಪಾಲ್ ಕೊಲೆಯಾದ ಸಂದರ್ಭದಿಂದಲೂ ಶಾಯಿಸ್ತಾ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾಳೆ. ಆಕೆ ವಿರುದ್ಧ ಒಂದು ಕೊಲೆ ಹಾಗೂ ಮೂರು ವಂಚನೆ ಪ್ರಕರಣಗಳು 2009ರಿಂದ ದಾಖಲಾಗಿವೆ. ವಂಚನೆ ಪ್ರಕರಣಗಳು ಜಿಲ್ಲಾ ವಿಶೇಷ ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.
2021ರ ಸೆಪ್ಟೆಂಬರ್‌ನಲ್ಲಿ ಶಾಯಿಸ್ತಾ, ಎಐಎಂಐಎಂ ಪಕ್ಷ ಸೇರಿಕೊಂಡಿದ್ದಳು. 2023ರ ಜನವರಿಯಲ್ಲಿ ಆಕೆ ಬಿಎಸ್‌ಪಿ ಸೇರ್ಪಡೆಯಾಗಿದ್ದಳು. ಮೇಯರ್ ಚುನಾವಣೆಯಲ್ಲಿ ಆಕೆ ಪಕ್ಷದಿಂದ ಟಿಕೆಟ್‌ಗೆ ಕಣ್ಣಿಟ್ಟಿದ್ದಳು. ಆದರೆ ಉಮೇಶ್ ಪಾಲ್ ಕೊಲೆ ಬಳಿಕ ಆಕೆಯಿಂದ ಪಕ್ಷ ಅಂತರ ಕಾಯ್ದುಕೊಂಡಿತ್ತು. ನಂತರ ಮೇಯರ್ ಅಭ್ಯರ್ಥಿಗಳ ಪಟ್ಟಿಯಿಂದ ಆಕೆಯ ಹೆಸರನ್ನು ಕಿತ್ತುಹಾಕಲಾಗಿತ್ತು.

ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ