ಆ್ಯಪ್ನಗರ

ತಂದೆ ಮೂಲ ಪ್ರಶ್ನಿಸಿದ ಕಾಂಗ್ರೆಸ್‌ಗೆ ಮೋದಿ ತಿರುಗೇಟು

ಇತ್ತ ರಾಜಸ್ಥಾನದಲ್ಲೂ ಪ್ರಚಾರ ಸಭೆ ನಡೆಸಿದ ಮೋದಿ ಅಲ್ಲೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

Vijaya Karnataka 26 Nov 2018, 11:18 am
ವಿದಿಶಾ (ಮಧ್ಯ ಪ್ರದೇಶ): ಜಾತಿ ನಿಂದನೆ, ಮಾತೃ ನಿಂದನೆ ಮಾಡಿದವರಿಗೆ ತಿರುಗೇಟು ನೀಡಿದ್ದ ಮೋದಿ ಅವರು, ಇದೀಗ ತಮ್ಮ ತಂದೆ ಯಾರೆಂದು ಪ್ರಶ್ನಿಸಿದ ಕಾಂಗ್ರೆಸ್‌ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
Vijaya Karnataka Web Narendra Modi


ಮಧ್ಯ ಪ್ರದೇಶದ ವಿದಿಶಾದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯಲಿ ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ''30 ವರ್ಷಗಳ ಹಿಂದೆ ನಿಧನರಾದ ನನ್ನ ತಂದೆಯನ್ನು ರಾಜಕೀಯಕ್ಕೆ ಎಳೆ ತರಲು ಕಾರಣವೇನು? ಅವರೇ (ಕಾಂಗ್ರೆಸ್‌) ನನ್ನ ಕುಟುಂಬದ ಬಗ್ಗೆ ಮಾತನಾಡಿದರೂ, ನಾನು ಅವರ (ಕಾಂಗ್ರೆಸ್‌) ಕುಟುಂಬದ ಬಗ್ಗೆ ಮಾತನಾಡುತ್ತೇನೆ ಎಂದು ಕಾಂಗ್ರೆಸ್‌ 'ನಾಮ್‌ದಾರ್‌' ಹೇಳುತ್ತಾರೆ,'' ಎಂದು ಮೋದಿ ರಾಹುಲ್‌ಗೆ ತಿರುಗೇಟು ನೀಡಿದರು.

ಇತ್ತ ರಾಜಸ್ಥಾನದಲ್ಲೂ ಪ್ರಚಾರ ಸಭೆ ನಡೆಸಿದ ಮೋದಿ ಅಲ್ಲೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

''ಕೆಲವರು ನನ್ನ ಅಮ್ಮನನ್ನು ನಿಂದಿಸುತ್ತಾರೆ. ಇನ್ನು ಕೆಲವರು ನನ್ನ ಜಾತಿ ಪ್ರಶ್ನಿಸುತ್ತಾರೆ. ಹೇಳುವವರು ಯಾರೇ ಆಗಿರಲಿ, ಹೇಳಿಸುತ್ತಿರುವವರು 'ಖ್ಯಾತರೇ' ಆಗಿರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಜ್‌ ಬಬ್ಬರ್‌ ಕುಸಿದ ರೂಪಾಯಿ ಮೌಲ್ಯವನ್ನು ಮೋದಿ ಅವರ ತಾಯಿಯ ವಯಸ್ಸಿಗೆ ಹೋಲಿಸಿದ್ದರು. ರಾಜಸ್ಥಾನದ ಹಿರಿಯ ಕಾಂಗ್ರೆಸ್‌ ನಾಯಕ ಸಿ.ಪಿ. ಜೋಶಿ ಮೋದಿ ವಿರುದ್ಧ ಜಾತಿ ನಿಂದನೆ ಮಾಡಿದ್ದರು.

ಸಿ.ಪಿ. ಜೋಶಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಮೋದಿ, ಕಬೀರ್‌ ದಾಸ್‌ ಮತ್ತು ರವಿದಾಸ್‌ ಅವರ ಅವರ ವಚನಗಳನ್ನು ಉಲ್ಲೇಖಿಸಿದ್ದಾರೆ.

''ಯಾರೊಬ್ಬರ ಜಾತಿ ಕೇಳಬಾರದು, ಎಲ್ಲರೂ ದೇವರ ಮಕ್ಕಳು. ಯಾವ ಜಾತಿಯೂ ಕೀಳಲ್ಲ,'' ಎಂಬ ರವಿದಾಸರ ಮಾತನ್ನೂ ಉದಾಹರಿಸಿದರು.

ಮೋದಿ ತಂದೆ ಬಗ್ಗೆ ಯಾರಿಗೂ ಗೊತ್ತಿಲ್ಲ: ವಿಲಾಸ್‌ ಮುತ್ತೆಂವರ್‌

ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ವಿಲಾಸ್‌ ಮುತ್ತೆಂವರ್‌ ಅವರು ಮೋದಿ ಅವರ ತಂದೆಯ ಮೂಲ ಪ್ರಶ್ನಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.

ರಾಜಸ್ಥಾನದಲ್ಲಿ ಪಕ್ಷ ದ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಮೋದಿ ಬಗ್ಗೆ ವಿಲಾಸ್‌ ಆಡಿದ ಮಾತುಗಳು ವೈರಲ್‌ ಆಗಿವೆ.

''ಪ್ರಧಾನಿಯಾಗುವುದಕ್ಕೂ ಮುನ್ನ ನೀವು ಯಾರಿಗೆ ಗೊತ್ತಿದ್ದಿರಿ? ಈಗಲೂ ಅಷ್ಟೇ ನಿಮ್ಮ ತಂದೆಯ ಹೆಸರನ್ನು ಬಲ್ಲವರು ಯಾರು? ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ತಂದೆ ರಾಜೀವ್‌ ಗಾಂಧಿ...ರಾಜೀವ್‌ ಗಾಂಧಿ ಅವರ ತಾಯಿ ಇಂದಿರಾ ಗಾಂಧಿ...ಇಂದಿರಾ ಅವರ ತಂದೆ ಜವಾಹರ್‌ ಲಾಲ್‌ ನೆಹರೂ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ನರೇಂದ್ರ ಮೋದಿ ಅವರ ತಂದೆ ಯಾರೆಂದು ಯಾರಿಗೂ ಗೊತ್ತಿಲ್ಲ,'' ಎಂದು ಮುತ್ತೆಂವರ್‌ ಹೇಳಿದ್ದಾರೆ. ಈ ವಿಡಿಯೊವನ್ನು ಬಿಜೆಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಕಾಂಗ್ರೆಸ್‌ ನಾಯಕನ ವಿರುದ್ಧ ಕಿಡಿಕಾರಿದೆ.

ಬಿರುಸುಗೊಂಡ ಪ್ರಚಾರ

* ಸೋಮವಾರ ರಾಜಸ್ಥಾನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್‌ ಸಿಂಗ್‌, ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದ ಚುನಾವಣಾ ಪ್ರಚಾರ; ರಂಗೇರಲಿರುವ ಪ್ರಚಾರ ಕಣ

* ನ.27ರಂದು ತೆಲಂಗಾಣದ ನಿಜಾಮಾಬಾದ್‌, ಮೆಹಬೂಬ್‌ನಗರದಲ್ಲಿ ಮೋದಿ ಪ್ರಚಾರ, ನ.29ರಂದು ಹೈದರಾಬಾದ್‌ನಲ್ಲಿ ರಾಹುಲ್‌ ಗಾಂಧಿ ರೋಡ್‌ ಶೋ.

ಧರ್ಮದ ಆಧಾರದ ಮೇಲೆ ಮೀಸಲು ಇಲ್ಲ: ಶಾ ಸ್ಪಷ್ಟನೆ

ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಬಿಜೆಪಿ ಎಂದೂ ಬೆಂಬಲಿಸುವುದಿಲ್ಲಅದಕ್ಕೆ ಸಂವಿಧಾನದಲ್ಲೂ ಅವಕಾಶವಿಲ್ಲ. ಆದರೆ, ಎಸ್ಸಿ/ಎಸ್ಟಿ ಮತ್ತು ಒಬಿಸಿ ಮೀಸಲು ಕಾಯ್ದುಕೊಳ್ಳಲು ಬದ್ಧವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ತೆಲಂಗಾಣದ ಪರ್ಕಲ್‌ನಲ್ಲಿ ಭಾನುವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಶೇ. 12 ಮೀಸಲು ಭರವಸೆ ನೀಡಿರುವ ಟಿಆರ್‌ಎಸ್‌ ಪಕ್ಷದ ವಿರುದ್ಧ ಹರಿಹಾಯ್ದರು. ''ಒಟ್ಟು ಮೀಸಲಾತಿ ಮೇಲೆ ಸುಪ್ರೀಂ ಕೋರ್ಟ್‌ 50% ಗರಿಷ್ಠ ಮಿತಿ ಹೇರಿರುವ ಹಿನ್ನೆಲೆಯಲ್ಲಿ, ಇದಕ್ಕೆ ಆಸ್ಪದವೆಲ್ಲಿದೆ?'' ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ