ಆ್ಯಪ್ನಗರ

ಪ್ರಿಯಾಂಕಾ ‘ಉತ್ತರ’ದ ಕಾತರ

ಉತ್ತರ ಪ್ರದೇಶದ ಪೂರ್ವ ವಲಯದಲ್ಲಿ ಕಾಂಗ್ರೆಸ್‌ ಗೆಲುವಿನ ರಾಯಭಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ಆಗಮನದಿಂದ ಪಕ್ಷದಲ್ಲಿ ಮೂಡಿರುವ ಹೊಸ ಆಶಾಕಿರಣಕ್ಕೆ ಯುಪಿಸಿಸಿ ಕಚೇರಿಯ ಹೊಸ ಚಹರೆಯು ಕನ್ನಡಿ ಹಿಡಿದಂತಿದೆ.

Vijaya Karnataka Web 12 Feb 2019, 5:00 am
ಲಖನೌ: ಕಳೆದ ಹಲವು ದಿನಗಳಿಂದ ಲಖನೌನ ಮಾಲ್‌ ಅವೆನ್ಯೂನಲ್ಲಿ ಚಟುವಟಿಕೆ ಜೋರಾಗಿದೆ. ಇಲ್ಲಿನ ಎರಡಂತಸ್ತಿನ ಭವ್ಯ ಕಟ್ಟದಲ್ಲಿರುವ ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿ (ಯುಪಿಸಿಸಿ) ಕಚೇರಿಗೆ ಹೊಸ ಕಳೆ ಬಂದಿದೆ. ಅದರಲ್ಲೂ ಯುಪಿಸಿಸಿ ಅಧ್ಯಕ್ಷ ರಾಜ್‌ ಬಬ್ಬರ್‌ ಕಚೇರಿಯ ಬದಿಯಲ್ಲೇ ಇರುವ ಒಂದು ಕೊಠಡಿಯನ್ನಂತೂ ವಿಶೇಷ ಮುತುವರ್ಜಿಯಿಂದ ಆಧುನೀಕರಣಗೊಳಿಸಲಾಗಿದೆ. ಏಕೆಂದರೆ, ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಸುತ್ತಿದ್ದ ಈ ಕೊಠಡಿಯು ಗುಣ-ವಿಶೇಷಣ ಎಲ್ಲದರಲ್ಲೂ ಅಜ್ಜಿಯ ತದ್ರೂಪವೆಂದೇ ಹೇಳಲಾಗುವ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅಧಿಕೃತ ಕಚೇರಿಯಾಗಲಿದೆ. ಉತ್ತರ ಪ್ರದೇಶದ ಪೂರ್ವ ವಲಯದಲ್ಲಿ ಕಾಂಗ್ರೆಸ್‌ ಗೆಲುವಿನ ರಾಯಭಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ಆಗಮನದಿಂದ ಪಕ್ಷದಲ್ಲಿ ಮೂಡಿರುವ ಹೊಸ ಆಶಾಕಿರಣಕ್ಕೆ ಯುಪಿಸಿಸಿ ಕಚೇರಿಯ ಹೊಸ ಚಹರೆಯು ಕನ್ನಡಿ ಹಿಡಿದಂತಿದೆ.
Vijaya Karnataka Web u8vpi_priyanka-gandhi-vadra_625x300_10_February_19


ದೇಶದಲ್ಲೇ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು (80) ಹೊಂದಿರುವ ಉತ್ತರ ಪ್ರದೇಶದಲ್ಲಿ ಪೂರ್ವ ವಲಯಕ್ಕೆ ಪ್ರಿಯಾಂಕಾ ಗಾಂಧಿ ಮತ್ತು ಪಶ್ಚಿಮ ವಲಯಕ್ಕೆ ಪಕ್ಷದ ಪ್ರಭಾವಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಉಸ್ತುವಾರಿಗಳನ್ನಾಗಿ ಕಳೆದ ತಿಂಗಳು ನೇಮಿಸಲಾಗಿದೆ. ಈ ಪೈಕಿ ಪ್ರಿಯಾಂಕಾ 42 ಸ್ಥಾನಗಳ ಹೊಣೆ ಹೊತ್ತರೆ, ಉಳಿದ 38 ಸ್ಥಾನಗಳು ಸಿಂಧಿಯಾ ಅವರ ವ್ಯಾಪ್ತಿಯಲ್ಲಿವೆ. ಹೊಸ ಜವಾಬ್ದಾರಿ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸೋಮವಾರ (ಫೆ.11) ಈ ಇಬ್ಬರೂ ನಾಯಕರು ಉತ್ತರ ಪ್ರದೇಶಕ್ಕೆ ಮೊದಲ ಬಾರಿ ಆಗಮಿಸಿದ್ದಾರೆ. ಪ್ರಿಯಾಂಕಾ ಅವರ ಆಗಮನವನ್ನು ಕಾಂಗ್ರೆಸ್‌ ಪ್ರಚಾರಕ್ಕೆ ಪಕ್ಷದ ಅಧಿಕೃತ ಚಾಲನೆ ಎಂದೇ ಬಣ್ಣಿಸಲಾಗಿದೆ.

ಕಳೆದ ಬಾರಿ ಕೇವಲ ಎರಡು ಸ್ಥಾನಗಳನ್ನಷ್ಟೇ ಗೆದ್ದಿದ್ದ ಕಾಂಗ್ರೆಸ್‌ನ ಸಂಘಟನಾ ಬಲವನ್ನು ಹೆಚ್ಚಿಸುವ ಸವಾಲು ಪ್ರಿಯಾಂಕಾ ಮುಂದಿದೆ. ನಾಲ್ಕು ದಿನಗಳ ಮೊದಲ ಭೇಟಿಯಲ್ಲಿ ಇದನ್ನೇ ಆದ್ಯತೆಯ ವಿಷಯವಾಗಿ ಪರಿಗಣಿಸಲಿದ್ದಾರೆ. ಪಕ್ಷದ ವಿವಿಧ ನಾಯಕರು ಮತ್ತು 42 ಕ್ಷೇತ್ರಗಳ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿ, ಕಾರ್ಯವ್ಯೂಹ ರಚಿಸಲಿದ್ದಾರೆ. ಉತ್ತರ ಪ್ರದೇಶ ಭೇಟಿ ಮುನ್ನಾ ದಿನವೇ ಪ್ರಿಯಾಂಕಾ 30 ಲಕ್ಷ ಫೋನ್‌ ಕಾಲ್‌ಗಳ ಮೂಲಕ ರಾಜ್ಯದ ಮಹಿಳೆಯರು, ಯುವಕರು ಮತ್ತು ಸಮಾಜದ ಎಲ್ಲಾ ವರ್ಗದ ಜನರನ್ನು ಸೆಳೆಯಲು ಯತ್ನಿಸಿದ್ದಾರೆ. ರಾಜ್ಯದಲ್ಲಿ ಹೊಸ ರಾಜಕೀಯ ಬ್ರಾಂಡ್‌ ಸೃಷ್ಟಿಗೆ ನೆರವಾಗುವಂತೆ ಮುದ್ರಿತ ಧ್ವನಿಯ ದೂರವಾಣಿ ಕರೆ ಮೂಲಕ ಅವರು ಮನವಿ ಮಾಡಿದ್ದಾರೆ. ಜತೆಗೆ ಬಿಜೆಪಿ ಮಾದರಿಯಲ್ಲಿ ಬೂತ್‌ ಮಟ್ಟದಲ್ಲೂ ಕಾರ್ಯಕರ್ತರನ್ನು ಸಂಘಟಿಸಿ ಪ್ರಚಾರ ನಡೆಸುವ ಯೋಜನೆಯನ್ನು ಕಾಂಗ್ರೆಸ್‌ ರೂಪಿಸುತ್ತಿದೆ.

ಆದರೆ, ನಿಜಕ್ಕೂ ಪ್ರಿಯಾಂಕಾ ಆಗಮನದಿಂದ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮರುಜೀವ ದೊರೆಯಲಿದೆಯಾ ಎಂಬ ಪ್ರಶ್ನೆಗೆ ಮಹಾಸಮರದ ಬಳಿಕ ಫಲಿತಾಂಶವೇ ಉತ್ತರ ನೀಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ