ಆ್ಯಪ್ನಗರ

ನಾರಿ ದರ್ಶನವಿಲ್ಲದೇ ಮುಚ್ಚಿದ ಅಯ್ಯಪ್ಪನ ಬಾಗಿಲು

ಎಲ್ಲ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸಿ ದರ್ಶನ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವಾಗ ಸಂಪ್ರದಾಯದ ಕಟ್ಟಳೆ ಯಾಕೆ ಅಡ್ಡಿಯಾಗಬೇಕು ಎಂದು ಪ್ರಶ್ನಿಸಿ ಹಲವು ಮಹಿಳೆಯರು ಆರು ದಿನಗಳಿಂದ ಅಯ್ಯಪ್ಪನ ಬೆಟ್ಟ ಹತ್ತಲು ಯತ್ನಿಸಿದರಾದರೂ ಒಬ್ಬರೂ ಗುರಿ ಮುಟ್ಟಲಿಲ್ಲ.

Vijaya Karnataka Web 22 Oct 2018, 10:29 pm
ಪಂಪಾ: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದಿನಗಳ ತುಲಾ ಮಾಸದ ಪೂಜೆಯು ನಿಷೇಧಿತ ವಯಸ್ಸಿನ ನಾರಿಯರ ದರ್ಶನವಿಲ್ಲದೇ ಸೋಮವಾರ ಮುಕ್ತಾಗೊಂಡಿತು. ಕೊನೆಯ ದಿನವೂ ಮಹಿಳೆಯರಿಂದ ದೇಗುಲ ಪ್ರವೇಶಕ್ಕೆ ಪ್ರಯತ್ನ ನಡೆಯಿತಾದರೂ ಪ್ರತಿಭಟನಾಕಾರರ ಪ್ರತಿರೋಧದ ಮುಂದೆ ಅದು ಫಲಿಸಲಿಲ್ಲ.
Vijaya Karnataka Web Sabarimala: Devotees pay obeisance Lord Ayyappa temple in Sabarimala. Kerala has...


ಎಲ್ಲ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸಿ ದರ್ಶನ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವಾಗ ಸಂಪ್ರದಾಯದ ಕಟ್ಟಳೆ ಯಾಕೆ ಅಡ್ಡಿಯಾಗಬೇಕು ಎಂದು ಪ್ರಶ್ನಿಸಿ ಹಲವು ಮಹಿಳೆಯರು ಆರು ದಿನಗಳಿಂದ ಅಯ್ಯಪ್ಪನ ಬೆಟ್ಟ ಹತ್ತಲು ಯತ್ನಿಸಿದರಾದರೂ ಒಬ್ಬರೂ ಗುರಿ ಮುಟ್ಟಲಿಲ್ಲ. ತಿಂಗಳ ದರ್ಶನಕ್ಕೆ ಕೊನೆಯ ದಿನವಾಗಿದ್ದ ಸೋಮವಾರ ಸಹ ದಲಿತ ಮಹಿಳೆ ಬಿಂದೂ ಅಂತಹದ್ದೊಂದು ಕಡೆ ಪ್ರಯತ್ನ ಮಾಡಿದರಾದರೂ ಸಫಲರಾಗಲಿಲ್ಲ.

ಕೇರಳ ಮೂಲದ 50 ವರ್ಷದೊಳಗಿನ ಬಿಂದೂ ಬೆಟ್ಟ ಹತ್ತಿಯೇ ಸಿದ್ಧ ಎಂದು ಪಣ ತೊಟ್ಟು ಶಬರಿಮಲೆಯತ್ತ ಬೆಳಗ್ಗೆ ಬಸ್‌ ಹತ್ತಿದರು. ಬೇಸ್‌ ಕ್ಯಾಂಪ್‌ ಪಂಪಾದತ್ತ ಹೊರಟ ಬಸ್‌ ಅನ್ನು ನಡುದಾರಿಯಲ್ಲಿಯೇ ತಡೆದ ಬಿಜೆಪಿ ಕಾರ್ಯಕರ್ತರು, ಅವರನ್ನು ಕೆಳಗಿಳಿಸಿದರು. ಯಾತ್ರೆ ಮುಂದುವರಿಸದಂತೆ ಘೋಷಣೆ ಕೂಗಿದರು. ಇದರಿಂದ ವಿಚಲಿತರಾದ ಅವರು ಪೊಲೀಸ್‌ ಭದ್ರತೆಯೊಂದಿಗೆ ತಮ್ಮ ಊರಿನತ್ತ ವಾಪಸಾದರು.

ದಿನವಿಡೀ, ನಿಷೇಧಿತ ವಯಸ್ಸಿನ ಇತರೆ ಹಲವು ಮಹಿಳೆಯರಿಂದ ಪ್ರವೇಶ ಯತ್ನ ನಡೆದವು. ಒಂದು ಹಂತದವರೆಗೆ ಪೊಲೀಸ್‌ ಭದ್ರತೆಯಲ್ಲಿ ಸಾಗಿದ ಮಹಿಳೆಯರು, ಹೆಜ್ಜೆ ಹೆಜ್ಜೆಗೂ ಎದುರಾದ ಪ್ರತಿಭಟನೆಯ ಬಿಸಿಗೆ ಬೆದರಿ ಬಂದ ದಾರಿಗೆ ಹಿಂದಿರುಗಿದರು.

ಆವರಣದಲ್ಲೇ ಠಿಕಾಣಿ

ಋುತುಸ್ರಾವ ವಯಸ್ಸಿನ ಮಹಿಳೆಯರ ಪ್ರವೇಶ ತಡೆಯುವುದಕ್ಕಾಗಿ ಕಳೆದ ಆರು ದಿನಗಳಿಂದ ಶಬರಿಮಲೆಯ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಬೀಡುಬಿಟ್ಟಿದ್ದರು. ಬೆಟ್ಟದ ಮೇಲಿನ ದೇವಸ್ಥಾನದ ಆವರಣದಲ್ಲಿ ಕೂಡ ನೂರಾರು ಪ್ರತಿಭಟನಾಕಾರರು ಠಿಕಾಣಿ ಹೂಡಿದ್ದರು.

ಪೂಜೆ ಮುಕ್ತಾಯ

ಮಲಯಾಳಂ ಮಾಸದ ಐದು ದಿನಗಳ ಪೂಜೆಗಾಗಿ ಅ.17ರಿಂದ ತೆರೆದಿದ್ದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಸೋಮವಾರ ರಾತ್ರಿ 10 ಗಂಟೆಗೆ ಮುಚ್ಚಿತು. ನವೆಂಬರ್‌ 17ರಿಂದ ಮತ್ತೆ ದೇಗುಲದ ಬಾಗಿಲು ತೆರೆಯಲಿದೆ. 10ರಿಂದ 50 ವರ್ಷ ವಯೋಮಾನದ ಮಹಿಳೆಯರ ದೇಗುಲ ಪ್ರವೇಶಕ್ಕೆ ಇದ್ದ ನಿಷೇಧ ತೆರವುಗೊಳಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ಇದೇ ಮೊದಲ ಬಾರಿಗೆ ಶಬರಿಮಲೆ ದೇಗುಲದ ಬಾಗಿಲು ತೆರೆದಿತ್ತು.

ಪುನರ್‌ ಪರಿಶೀಲನೆ ಅರ್ಜಿ ವಿಚಾರಣೆ ಮಂಗಳವಾರ

ಶಬರಿಮಲೆ ದೇವಸ್ಥಾನ ಪ್ರವೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪುನರ್‌ ಪರಿಶೀಲನಾ ಅರ್ಜಿ ವಿಚಾರಣೆ ದಿನಾಂಕವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನಿಗದಿಪಡಿಸಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ನ್ಯಾ.ಎಸ್‌.ಕೆ.ಕೌಲ್‌ ಅವರ ಪೀಠದ ಮುಂದೆ ಪ್ರಕರಣದ ವಿಚಾರಣೆ ನಿಗದಿಯಾಗಿದೆ. ವಕೀಲ ಮ್ಯಾಥ್ಯೂಸ್‌ ಜೆ. ನೆಡುಂಪರ ಅವರು ಈ ಕುರಿತು ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತೀರ್ಪಿನ ಪುನರ್‌ ಪರಿಶೀಲನೆ ಕೋರಿ ಒಟ್ಟು 19 ಅರ್ಜಿಗಳು ದಾಖಲಾಗಿವೆ. ಅವುಗಳ ವಿಚಾರಣೆ ದಿನಾಂಕವನ್ನು ನಾಳೆ (ಮಂಗಳವಾರ) ಪ್ರಕಟಿಸಲಾಗುವುದು ಎಂದು ಪೀಠ ತಿಳಿಸಿದೆ.

ಮುಂದೇನು?
ಆರು ದಿನಗಳ ಪ್ರವೇಶ ಸಂಘರ್ಷ ಸದ್ಯಕ್ಕೆ ಕೊನೆಗೊಂಡಿದೆ. ಮುಂದೇನು ಎನ್ನುವ ಪ್ರಶ್ನೆ ಹಾಗೇ ಉಳಿದಿದೆ. ಮರು ಪರಿಶೀಲನೆ ಅರ್ಜಿ ಮೇಲಿನ ಸುಪ್ರೀಂ ತೀರ್ಪು ಈ ವಿವಾದದ ಮುಂದಿನ ನಡೆಯನ್ನು ನಿರ್ಧರಿಸಲಿದೆ. ಸೆ.28ರಂದು ನೀಡಿದ್ದ ಈ ಮೊದಲಿನ ತೀರ್ಪು ರದ್ದುಗೊಳಿಸಿ, ಹಿಂದಿನ ಸಂಪ್ರದಾಯ ಮುಂದುವರಿಕೆಗೆ ಅನುಮತಿ ನೀಡಿದರೆ, ಪ್ರಗತಿಪರ ಸಂಘಟನೆಗಳಿಂದ ಹೋರಾಟ ನಡೆಯಬಹುದು. ಕೋರ್ಟ್‌ಗೆ ಮತ್ತಷ್ಟು ಅರ್ಜಿಗಳು ಸಲ್ಲಿಕೆಯಾಗಬಹುದು. ಒಂದು ವೇಳೆ, ತನ್ನ ಈ ಮೊದಲಿನ ತೀರ್ಪನ್ನೇ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದರೆ, ಈಗಿನ ಸಂಘರ್ಷ ಪುನರಾವರ್ತನೆಗೊಳ್ಳಲಿದೆ. ಒಟ್ಟಾರೆ ಪ್ರಕರಣ ಕಗ್ಗಂಟಾಗಿಯೇ ಉಳಿಯುವುದು ನಿಶ್ಚಿತ.

ಸುದ್ದಿ ಮಾಡಿದ ಮಹಿಳೆಯರು
ಸಿ.ಎಸ್‌.ಲಿಬಿ: ಮೊದಲ ದಿನವೇ ದೇಗುಲ ಪ್ರವೇಶಿಸುವ ಪ್ರಯತ್ನ ಮಾಡಿದರು. ಆ ಬಗ್ಗೆ ಫೇಸ್‌ಬುಕ್‌ನಲ್ಲಿ ಮುಂಚಿತವಾಗಿಯೇ ಹೇಳಿಕೊಂಡಿದ್ದರಿಂದ 65 ಕಿ.ಮೀ ದೂರದಲ್ಲಿಯೇ ಪ್ರತಿಭಟನಾಕಾರರು ಅವರನ್ನು ತಡೆದರು.

ಮಾಧವಿ:
ಆಂಧ್ರ ಪ್ರದೇಶದ ಈಕೆ ಮೊದಲ ದಿನ ಕುಟುಂಬ ಸದಸ್ಯರೊಂದಿಗೆ ಬೆಟ್ಟ ಹತ್ತಲು ಯತ್ನಿಸಿದರು. ಪಂಪಾ ತಲುಪುವ ಮೊದಲೇ ತಡೆಯಲಾಯಿತು.

ಸುಹಾಸಿನಿ ರಾಜ್‌: ನ್ಯೂಯಾರ್ಕ್‌ ಟೈಮ್ಸ್‌ ವರದಿಗಾರ್ತಿ ಎರಡನೇ ದಿನ ಬೆಟ್ಟ ಏರಲು ಯತ್ನಿಸಿದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು ಅರ್ಧದಲ್ಲೇ ವಾಪಸ್ಸಾದರು.

ಕವಿತಾ ಜಕ್ಕಲ್‌, ರೆಹಾನಾ ಫಾತಿಮಾ: ಮೂರನೇ ದಿನ ಪೊಲೀಸ್‌ ಭದ್ರತೆಯಲ್ಲಿ ಬೆಟ್ಟ ಏರಿದರು. ದೇಗುಲ ಪ್ರವೇಶಿಸಿದ ಇತಿಹಾಸ ನಿರ್ಮಿಸಲು ಕೆಲವೇ ಅಡಿ ಬಾಕಿ ಇತ್ತು. 500 ಮೀಟರ್‌ ದೂರದಲ್ಲೇ ಪ್ರತಿಭಟನಾಕಾರರು ತಡೆದರು. ದೇವಸ್ಥಾನದ ತಂತ್ರಿ ಮತ್ತು ಇತರ ಅರ್ಚಕರು, ಮಹಿಳೆಯರು ದೇಗುಲ ಪ್ರವೇಶಿಸಿದ್ದೇ ಆದಲ್ಲಿ ಪೂಜೆ ನಿಲ್ಲಿಸಿ ದೇಗುಲಕ್ಕೆ ಬೀಗ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರಿಂದ ಪೊಲೀಸರು ಮನವೊಲಿಸಿ ಹಿಂದಕ್ಕೆ ಕಳಿಸಿದರು. ಅದೇ ದಿನ ಸಾಮಾಜಿಕ ಕಾರ್ಯಕರ್ತೆ ಮೇರಿ ಸ್ವೀಟಿ ಸಹ ಬೆಟ್ಟ ಏರುವ ಯತ್ನ ನಡೆಸಿದರು.

ಎಸ್‌.ಪಿ.ಮಂಜು: ಕೇರಳ ದಲಿತ ಮೋರ್ಚಾ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿಯಾಗಿರುವ ಈಕೆ ನಾಲ್ಕನೇ ದಿನ ಬೆಟ್ಟ ಏರುವ ಹಠ ತೊಟ್ಟರು. ಹಲವು ಪ್ರಕರಣ ಇರುವ ಆಲೆಯ ಹಿನ್ನೆಲೆ ಪರಿಶೀಲಿಸಿ ಮರುದಿನ ಅನುಮತಿ ನೀಡುವುದಾಗಿ ಪೊಲೀಸರು ತಿಳಿಸಿದರು. ಅದೇಹೊತ್ತಿಗೆ ಆಕೆಯ ಮನೆ ಮೇಲೆ ದಾಳಿಯಾದ್ದರಿಂದ ಮರಳಿದರು.

ವಸಂತಿ, ಆದಿಶೇಷಿ, ಬಾಲಮ್ಮ ಸೇರಿದಂತೆ ನಿಷೇಧಿತ ವಯಸ್ಸಿನ (10ರಿಂದ 50 ವರ್ಷ) ಕನಿಷ್ಠ 20ಕ್ಕೂ ಅಧಿಕ ಮಹಿಳೆಯರು ಆರು ದಿನಗಳ ಅವಧಿಯಲ್ಲಿ ಅಯ್ಯಪ್ಪನ ದರ್ಶನ ಪಡೆಯಲು ಯತ್ನಿಸಿದರು. ದೇಗುಲದಿಂದ 20 ಕಿ.ಮೀ ದೂರದಲ್ಲಿಯೇ ಇವರನ್ನು ಪ್ರತಿಭಟನಾಕಾರರು ತಡೆದು ಹಿಂದಕ್ಕೆ ಕಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ