ಆ್ಯಪ್ನಗರ

ಕನ್ಯತ್ವ ಪರೀಕ್ಷೆ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಬಹಿಷ್ಕಾರ

ತನ್ನ ಸಮುದಾಯದಲ್ಲಿ ಇನ್ನೂ ಜೀವಂತವಾಗಿರುವ ಕನ್ಯತ್ವ ಪರೀಕ್ಷೆಯ ಪದ್ದತಿಯನ್ನು ಬಹಷ್ಕರಿಸಿದ್ದಕ್ಕೆ ದಾಂಡಿಯಾ ನೃತ್ಯ ಕಾರ್ಯಕ್ರಮದಿಂದ ಯುವತಿಯನ್ನು ಬಹಿಷ್ಕರಿಸಲಾಗಿದೆ.

Vijaya Karnataka 18 Oct 2018, 8:11 am
ಪುಣೆ: ಮದುವೆಯ ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಸುವ ತನ್ನ ಸಮುದಾಯದ ಆಚರಣೆಯ ವಿರುದ್ಧ ಧ್ವನಿ ಎತ್ತಿದ ಮಹಿಳೆಯೊಬ್ಬರನ್ನು ನವರಾತ್ರಿ ಸಂದರ್ಭದ 'ದಾಂಡಿಯಾ' ನೃತ್ಯ ಕಾರ್ಯಕ್ರಮದಿಂದ ಹೊರ ಕಳುಹಿಸಲಾಗಿದೆ!
Vijaya Karnataka Web women


ಸೋಮವಾರ ರಾತ್ರಿ ಪುಣೆಯ ಪಿಂಪ್ರಿ ಎಂಬ ಈ ಘಟನೆ ನಡೆದಿದ್ದು, ಪೊಲೀಸರು ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪಿಂಪ್ರಿಯ ಐಶ್ವರ್ಯ ಭಟ್‌ ತಮೈಚಿಕಾರ್‌(23) ಎಂಬ ಮಹಿಳೆ ಸೋಮವಾರ ತವರೂರಿಗೆ ಆಗಮಿಸಿದ್ದರು. ಅಲ್ಲಿ ನಡೆಯುತ್ತಿದ್ದ ದಾಂಡಿಯಾ ಕಾರ್ಯಕ್ರಮಕ್ಕೆ ತಾಯಿ ಜತೆ ಹೋಗಿದ್ದರು. 'ನಮ್ಮದೇ ಕಂಜರ್‌ಬಾತ್‌ ಸಮುದಾಯದವರು ಆಯೋಜಿಸಿದ ದಾಂಡಿಯಾ ಕಾರ್ಯಕ್ರಮಕ್ಕೆ ಹೋಗಿದ್ದೆ. ನಾನು ಪ್ರವೇಶಿಸುತ್ತಿದ್ದಂತೆಯೇ ಒಮ್ಮೆಲೇ ಸಂಗೀತವನ್ನು ನಿಲ್ಲಿಸಲಾಯಿತು. ಎಲ್ಲರೂ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆಯೇ ಅಮ್ಮ ನನ್ನ ಬಳಿಗೆ ಓಡಿ ಬಂದು-ಬಾ ಮನೆಗೆ ಹೋಗೋಣ- ಎಂದರು. ನಾನು ಯಾಕೆ ಎಂದು ಕೇಳಿದಾಗ ಸಮುದಾಯದ ಸದಸ್ಯರಿಗೆ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಇಷ್ಟವಿಲ್ಲವಂತೆ ಎಂದು ಹೇಳಿದರು,'' ಎಂದು ನಡೆದ ಘಟನೆಯನ್ನು ಐಶ್ವರ್ಯ ವಿವರಿಸುತ್ತಾರೆ.

''ಅದಾದ ಕೂಡಲೇ ದಾಂಡಿಯಾ ಕಾರ್ಯಕ್ರಮ ರದ್ದಾಗಿದೆ. ಸಾಮಾನ್ಯ ಸಂಗೀತಕ್ಕೆ ಹುಡುಗರು ಮಾತ್ರ ಕುಣಿಯಲು ಅವಕಾಶವಿದೆ ಎಂಬ ಪ್ರಕಟಣೆ ಹೊರಬಿತ್ತು. ನಾನು ಅಲ್ಲಿಂದ ಹೊರಟೆ. ಅಲ್ಲಿಗೆ ಬೆನ್ನು ಹಾಕುತ್ತಿದ್ದಂತೆಯೇ ದಾಂಡಿಯಾ ಮತ್ತೆ ಆರಂಭವಾಯಿತು. ನಾನು ಭಾಗವಹಿಸುವುದನ್ನು ತಡೆಯುವುದೇ ಅವರ ಉದ್ದೇಶ ಎನ್ನುವುದು ಸ್ಪಷ್ಟವಾಯಿತು,'' ಎಂದಿರುವ ಐಶ್ವರ್ಯ, ಸಮುದಾಯದ ಎಂಟು ಮಂದಿಯ ಮೇಲೆ ಸಾಮಾಜಿಕ ಬಹಿಷ್ಕಾರದ ಕಲಮುಗಳಡಿ ಕೇಸು ಹಾಕಿದ್ದಾರೆ. ಯಾರನ್ನೂ ಬಂಧಿಸಲಾಗಿಲ್ಲ.

ಗಂಡ-ಹೆಂಡತಿ ಹೋರಾಟ

ಮಹಾರಾಷ್ಟ್ರದ ಬುಡಕಟ್ಟು ಜನಾಂಗವಾಗಿರುವ ಕಂಜರ್‌ಭಾತ್‌ ಸಮುದಾಯದಲ್ಲಿ ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ ನಡೆಸುವ ಸಂಪ್ರದಾಯವಿದೆ. ಐಶ್ವರ್ಯ ಮತ್ತು ಅವರ ಪತಿ ವಿವೇಕ್‌ ಕೆಲವು ಸಮಾನ ಮನಸ್ಕರ ಜತೆ ಸೇರಿ 'ಸ್ಟಾಪ್‌ ದ ವಿ-ರಿಚುವಲ್‌' ಎಂಬ ಆಂದೋಲನ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ