ವಿಕ ಸುದ್ದಿಲೋಕ ಶಬರಿಮಲೆ/ಕಾಸರಗೋಡು
ಋುತುಮತಿಯಾಗುವ ವಯಸ್ಸಿನ ಇಬ್ಬರು ಮಹಿಳೆಯರು ಬುಧವಾರ ಮುಂಜಾನೆ ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಿಸಿ ದರ್ಶನ ಪಡೆದಿದ್ದಾರೆ. ಶತಮಾನಗಳ ಸಂಪ್ರದಾಯವನ್ನು ಮುರಿದ ಈ ವಿದ್ಯಮಾನ ಹಿಂದೂ ಸಂಘಟನೆಗಳನ್ನು ತೀವ್ರವಾಗಿ ಕೆರಳಿಸಿದ್ದು ಬುಧವಾರವೇ ಕೇರಳದಾದ್ಯಂತ ಭಾರಿ ಪ್ರತಿಭಟನೆ, ರಸ್ತೆ ತಡೆ ನಡೆಸಿದೆ. ಗುರುವಾರ ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಲಾಗಿದೆ.
ಮಂಗಳವಾರ ಮಧ್ಯರಾತ್ರಿ 12.30ಕ್ಕೆ ಪೊಲೀಸರ ಬೆಂಗಾವಲಿನೊಂದಿಗೆ ಪಂಪಾದಿಂದ ಹೊರಟ ಬಿಂದು(42) ಹಾಗೂ ಕನಕದುರ್ಗ(44) ಮುಂಜಾನೆ 3.38ರ ವೇಳೆಗೆ ಇರುಮುಡಿಯಿಲ್ಲದೇ ಸನ್ನಿಧಾನಕ್ಕೆ ಆಗಮಿಸಿ ಅಯ್ಯಪ್ಪ ದರ್ಶನ ಪಡೆದರು. ಪೊಲೀಸರ ನಿರ್ದೇಶನ ಪ್ರಕಾರ, ಇವರಿಬ್ಬರ ತಲೆಗೆ ಬಟ್ಟೆ ಹಾಕಿ ಸನ್ನಿಧಾನಕ್ಕೆ ಕರೆದೊಯ್ಯಲಾಗಿದೆ.
ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂಕೋರ್ಟ್ನ ಸೆಪ್ಟೆಂಬರ್ 28ರ ತೀರ್ಪಿನ ಬಳಿಕ ಹಲವು ಮಹಿಳೆಯರು ದೇಗುಲ ಪ್ರವೇಶಕ್ಕೆ ಪ್ರಯತ್ನಿಸಿದ್ದರೂ ಭಕ್ತರ ವಿರೋಧದಿಂದ ಸಾಧ್ಯವಾಗಿರಲಿಲ್ಲ. ಡಿಸೆಂಬರ್ 24ರಂದು ಶಬರಿಮಲೆಗೆ ಬಂದಿದ್ದರೂ ಭಕ್ತರ ಆಕ್ರೋಶಕ್ಕೆ ಮಣಿದು ಮರಳಿದ್ದ ಬಿಂದು ಮತ್ತು ಕನಕದುರ್ಗ ಜನವರಿ 1ರ ರಾತ್ರಿ ತಮ್ಮ 2ನೇ ಪ್ರಯತ್ನದಲ್ಲಿ ಸಫಲರಾಗಿದ್ದು, ತಮ್ಮ ದರ್ಶನದ ವಿಡಿಯೊವನ್ನು ಅವರೇ ವಾಟ್ಸ್ಯಾಪ್ ಮೂಲಕ ಮಾಧ್ಯಮಗಳಿಗೆ ಕಳುಹಿಸಿದ್ದಾರೆ.
ಗರ್ಭಗುಡಿಯೊಳಗೆ ಶುದ್ಧಿ
ಸ್ತ್ರೀ ಪ್ರವೇಶದಿಂದ ಆಕ್ರೋಶಗೊಂಡ ದೇಗುಲ ಆಡಳಿತ ಮತ್ತು ಅರ್ಚಕರು ಶುದ್ಧೀಕರಣಕ್ಕಾಗಿ ಗರ್ಭಗುಡಿಯನ್ನು ಮುಚ್ಚಿ ಬಿಂಬ ಶುದ್ಧಿ ಸಹಿತ ಶುದ್ಧೀಕರಣ ಕಾರ್ಯ ನಡೆಸಿದರು. ಒಂದು ಗಂಟೆ ಕಾಲ ಶಬರಿಮಲೆಗೆ ಅಯ್ಯಪ್ಪ ಭಕ್ತರನ್ನು ತಡೆಯಲಾಯಿತು. ಅರ್ಚಕರ ಈ ಕ್ರಮ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಮಹಿಳಾ ಗೋಡೆಯ ಬಲ?
ಜ.1ರಂದು ಕೇರಳ ಸರಕಾರ ಹಾಗೂ ಸಿಪಿಎಂ ನೇತೃತ್ವದಲ್ಲಿ ನಡೆದ ಮಹಿಳಾ ಗೋಡೆ(ವನಿತಾ ಮದಿಲ್)ಗೆ ವ್ಯಾಪಕ ಬೆಂಬಲ ಸಿಕ್ಕಿದ್ದರಿಂದ ಪ್ರೇರಿತವಾಗಿ ಕೇರಳ ಸರಕಾರ ಮಹಿಳೆಯರ ಪ್ರವೇಶಕ್ಕೆ ವ್ಯವಸ್ಥೆ ಮಾಡಿತು ಎನ್ನಲಾಗುತ್ತಿದೆ. ಇಬ್ಬರನ್ನೂ ಪಂಪಾದಿಂದ ಪೊಲೀಸ್ ವಾಹನದಲ್ಲೇ ಕರೆದೊಯ್ದು ದರ್ಶನದ ಪತ್ತನಂತಿಟ್ಟದಿಂದ ತ್ರಿಶೂರ್ವರೆಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ ಎನ್ನಲಾಗಿದೆ.
12 ಗಂಟೆ ಹರತಾಳ
ಮಹಿಳಾ ಪ್ರವೇಶಕ್ಕೆ ಅವಕಾಶ ನೀಡಿದ ಸರಕಾರ ಮತ್ತು ಪೊಲೀಸರ ಕ್ರಮ ಪ್ರತಿಭಟಿಸಿ ಶಬರಿಮಲೆ ಕರ್ಮಾ ಸಮಿತಿ ಕೇರಳಾದ್ಯಂತ ಗುರುವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹರತಾಳಕ್ಕೆ ಕರೆ ನೀಡಿದೆ. ಬಿಜೆಪಿ ಇದಕ್ಕೆ ಬೆಂಬಲ ನೀಡಿದೆ. ಶುಕ್ರವಾರವೂ ಪ್ರತಿಭಟನೆ ಮುಂದುವರಿಯಲಿದೆ.
ಹಿಂದೆಯೂ ಹಲವು ಮಹಿಳೆಯರು ದೇವರ ದರ್ಶನಕ್ಕೆ ಬಂದು ಪ್ರತಿಭಟನೆಯಿಂದಾಗಿ ಮರಳಿದ್ದರು. ಮಂಗಳವಾರ ರಾತ್ರಿ ದೇಗುಲದಲ್ಲಿ ಯಾವುದೇ ಪ್ರತಿರೋಧ ವ್ಯಕ್ತವಾಗದೆ ಅವರು ದರ್ಶನ ಪಡೆದಿರಬಹುದು. ಪ್ರವೇಶ ಮಾಡಿದ್ದು ನಿಜ, ಪೊಲೀಸರು ಅವರಿಗೆ ಭದ್ರತೆ ನೀಡಿದ್ದಾರೆ.
- ಪಿಣರಾಯಿ ವಿಜಯನ್, ಕೇರಳ ಸಿಎಂ
ಭದ್ರತೆ ಕಾರಣದಿಂದಾಗಿ 18 ಮೆಟ್ಟಿಲು ಬಳಸದೆ, ವಿಐಪಿ ದರ್ಶನಕ್ಕೆ ಹೋದೆವು. ಭಕ್ತರು ಭಾರಿ ಪ್ರಮಾಣದಲ್ಲಿದ್ದರೂ ಯಾರೂ ಆಕ್ಷೇಪಿಸ ಲಿಲ್ಲ. ದೇವಸ್ಥಾನದ ಪ್ರಾಂಗಣದಲ್ಲಿ ಸಾಕಷ್ಟು ಹೊತ್ತು ಇದ್ದೆವು. ಕೆಲವು ಭಕ್ತರು ನಮ್ಮನ್ನು ಗುರುತಿಸಿ ದರ್ಶನವಾಯಿತಾ ಎಂದು ಕೇಳಿದರು.
- ಬಿಂದು, ದೇಗುಲ ಪ್ರವೇಶಿಸಿದ ಮಹಿಳೆ
ಯಾರೀ ಮಹಿಳೆಯರು?
ಬಿಂದೂ: ಕೋಯಿಕ್ಕೋಡ್ ನಿವಾಸಿ ಉಪನ್ಯಾಸಕಿ. ದಲಿತ ಹಕ್ಕು ಹೋರಾಟಗಾರ್ತಿ, 2010ರಲ್ಲಿ ಸಿಪಿಎಂಗೆ ರಾಜೀನಾಮೆ ನೀಡಿದ್ದರು.
ಕನಕದುರ್ಗಾ: ಮಲಪ್ಪುರಂ ನಿವಾಸಿ ಬ್ರಾಹ್ಮಣ ಮಹಿಳೆ. ಅಯ್ಯಪ್ಪ ಭಕ್ತೆ. ಪರಿತರ ವಿತರಣೆ ಇಲಾಖೆಯಲ್ಲಿ ಗುತ್ತಿಗೆ ನೌಕರಳಾಗಿ ಸೇವೆ.
ಏನೇನಾಯಿತು?
-ಮಂಗಳವಾರ ರಾತ್ರಿ 12.30ಕ್ಕೆ ಪಂಪಾದಿಂದ ಮಲೆಯತ್ತ ಪಯಣ
- 3.38ಕ್ಕೆ ದೇಗುಲ ಪ್ರವೇಶ
- ಅರ್ಚಕರಿಂದ ಶುದ್ಧೀಕರಣ
- ಕೇರಳದಾದ್ಯಂತ ಪ್ರತಿಭಟನೆ
- ಇಂದು ನಡೆದದ್ದೇನು?
-ಸಚಿವಾಲಯದ ಮುಂದೆ ಬಿಜೆಪಿ-ಸಿಪಿಎಂ ಘರ್ಷಣೆ