ಆ್ಯಪ್ನಗರ

ಹೌದು ನಾನು ಉಗ್ರ: ಕೇರಳ ವ್ಯಕ್ತಿಯ ಸಂದೇಶ

'ಹೌದು ನಾನು ಉಗ್ರ,' ಎಂದು ಕೇರಳದಿಂದ ನಾಪತ್ತೆಯಾಗಿರುವ ವ್ಯಕ್ತಿ ಸಂದೇಶ ಕಳುಹಿಸಿದ್ದಾನೆ.

ವಿಕ ಸುದ್ದಿಲೋಕ 17 Jul 2016, 2:58 pm
ಕೋಯಿಕ್ಕೋಡ್‌: ಜನ ನನ್ನನ್ನು ಉಗ್ರ ಎಂದು ಕರೆಯಬಹುದು. ಅಲ್ಲಾನ ನಿರ್ದೇಶನದಂತೆ ಹೋರಾಡುವುದು ಭಯೋತ್ಪಾದನೆಯಾದರೆ, ಹೌದು ನಾನು ಉಗ್ರ,' ಎಂದು ಕೇರಳದಿಂದ ನಾಪತ್ತೆಯಾಗಿರುವ ವ್ಯಕ್ತಿ ತನ್ನ ಕುಟುಂಬಕ್ಕೆ ಸಂದೇಶ ಕಳುಹಿಸಿದ್ದಾನೆ.
Vijaya Karnataka Web yes i am a terrorist texts missing kerala man
ಹೌದು ನಾನು ಉಗ್ರ: ಕೇರಳ ವ್ಯಕ್ತಿಯ ಸಂದೇಶ


ಕೇರಳದಿಂದ ನಾಪತ್ತೆಯಾಗಿರುವ 15 ಮಂದಿ ಪೈಕಿ ಒಬ್ಬನಾದ ಮೊಹಮ್ಮದ್‌ ಮರ್ವಾನ್‌(23) ಇಸ್ಲಾಮಿಕ್‌ ಸ್ಟೇಟ್‌ ಸೇರಿರುವ ಶಂಕೆ ವ್ಯಕ್ತವಾಗಿದೆ. ಟೆಲಿಗ್ರಾಮ್‌ ಆ್ಯಪ್‌ ಮೂಲಕ ಜೂನ್‌ ಕಡೆಯ ವಾರ ಮರ್ವಾನ್‌ ಈ ಸಂದೇಶ ಕಳುಹಿಸಿದ್ದ. ಉಗ್ರರ ಹಿಡಿತದಲ್ಲಿರುವ ಪಶ್ಚಿಮ ಏಷ್ಯಾ ಪ್ರದೇಶದಿಂದ ಈ ಸಂದೇಶ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

ಕಾಶ್ಮೀರ, ಗುಜರಾತ್‌ ಹಾಗೂ ಮುಜಫರ್‌ನಗರದ ಸಂತ್ರಸ್ತ ಮುಸ್ಲಿಮರಿಗೆ ನೆರವು ನೀಡುವ ಐಎಸ್‌ ಕೆಲಸ ಮುಗಿದ ಬಳಿಕ ಮನೆಗೆ ವಾಪಸಾಗುವುದಾಗಿ ಮರ್ವಾನ್‌ ತಿಳಿಸಿದ್ದಾನೆ.

'ಅಮೆರಿಕ ಹಾಗೂ ರಷ್ಯಾ ಪಡೆಗಳು ನಡೆಸಿದ ಬಾಂಬ್‌ ದಾಳಿಯಲ್ಲಿ ಸಣ್ಣ ಮಕ್ಕಳು ಸೇರಿದಂತೆ ಅನೇಕ ಮುಸ್ಲಿಮರು ಅಸುನೀಗಿದ್ದಾರೆ. ಮುಸಲ್ಮಾನ ಸಮುದಾಯದ ಮೇಲೆ ಈ ರೀತಿ ದಾಳಿಗಳು ನಡೆಯುವಾಗ ಮನೆಯಲ್ಲಿ ನಾನು ಹೇಗೆ ಆರಾಮವಾಗಿ ಇರಲಿ,'ಎಂದು ಪ್ರಶ್ನಿಸಿದ್ದಾನೆ.

ಕುರಾನ್‌ ಸಾಲುಗಳನ್ನು ಉಲ್ಲೇಖಿಸಿ, 'ಸಮುದಾಯದವರೆಲ್ಲಾ ಹಿಂಸೆಗೆ ಒಳಗಾದಾಗ ನೀನೇನು ಮಾಡುತ್ತಿದ್ದೆ ಎಂದು ಅಲ್ಲಾ ನನ್ನನ್ನು ಪ್ರಶ್ನಿಸುತ್ತಾನೆ. ಇಡೀ ಮುಸ್ಲಿಂ ಸಮುದಾಯವೇ ಒಂದು ದೇಹವಿದ್ದಂತೆ ಎಂದು ಪ್ರವಾದಿ ನಮಗೆ ಹೇಳಿಲ್ಲವೇ? ನಮ್ಮ ಸಮುದಾಯದವರ ರಕ್ಷಣೆಗೆ ಹೋರಾಡುವುದು ನನ್ನ ಧಾರ್ಮಿಕ ಕರ್ತವ್ಯ,'ಎಂದು ಹೇಳಿದ್ದಾನೆ.

ಐಎಸ್‌ ನಿಯಂತ್ರಿತ ಪ್ರದೇಶದ ಹೀನಾಯ ಸ್ಥಿತಿಯನ್ನು ಸಂದೇಶದಲ್ಲಿ ವಿವರಿಸಿರುವ ಮರ್ವಾನ್‌,' ಒಳ್ಳೆಯ ಮನೆ, ಫ್ರಿಡ್ಜ್‌, ಕಾರು ಎಲ್ಲವೂ ನಿಮ್ಮ ಬಳಿ ಇದೆ. ಆದರೆ, ಇಲ್ಲಿನ ಮುಸ್ಲಿಮರ ಸ್ಥಿತಿ ನೋಡಿ. ಇಸ್ಲಾಂ ವಿರೋಧಿಗಳು ಎಲ್ಲದಕ್ಕೂ ತಡೆ ಒಡ್ಡಿರುವುದರಿಂದ ಇಲ್ಲಿ ವಿದ್ಯುಚ್ಛಕ್ತಿಯೂ ಇಲ್ಲ. ಆದರೂ, ಇಲ್ಲಿನ ಜನ ಇರುವುದರಲ್ಲೇ ತೃಪ್ತಿಯಿಂದ ಇದ್ದಾರೆ. ಅಲ್ಲಾ ತಮ್ಮ ಜತೆಗಿದ್ದಾನೆ ಎಂದು ನಂಬಿ ಖುಷಿಯಿಂದ ಇದ್ದಾರೆ,'ಎಂದು ಬರೆದಿದ್ದಾನೆ.

'ನಾನು ಏನು ಮಾಡುತ್ತಿದ್ದೇನೆ ಎಂಬ ಸಂಪೂರ್ಣ ಅರಿವು ನನಗಿದೆ. ಯಾರೂ ನನ್ನ ತಲೆ ಕೆಡಿಸಿಲ್ಲ. ಐಎಸ್‌ಗೆ ಸೇರಿಸಿಕೊಂಡಿಲ್ಲ. ಇಸ್ಲಾಮಿಕ್‌ ಸ್ಟೇಟ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಓದಿದ ನಂತರ ಇಸ್ಲಾಂಗಾಗಿ ಹೋರಾಡಲು ನಿರ್ಧರಿಸಿದೆ. ಹೋರಾಟದಲ್ಲಿ ಸತ್ತರೆ, ಹುತಾತ್ಮನಾಗುತ್ತೇನೆ,'ಎಂದು ಸಂದೇಶದಲ್ಲಿ ಹೇಳಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ