ಆ್ಯಪ್ನಗರ

ವ್ಯಕ್ತಿಯನ್ನು ಬಂಧಿಸಬಹುದು, ಅವರ ವಿಚಾರವನ್ನಲ್ಲ: ದೇಶದ್ರೋಹಿ ಪ್ರತ್ಯೇಕತಾವಾದಿ ಬಂಧನಕ್ಕೆ ಕೆರಳಿದ ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ 35ನೇ ಎ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ಹೆಚ್ಚು ಎಚ್ಚರಿಕೆಯಿಂದಿರುವಂತೆ ಪೊಲೀಸರಿಗೆ ಮತ್ತು ಅರೆ ಸೇನಾ ಪಡೆಗೆ ಸೂಚಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನೆಲ್ಲ ಬಂಧಿಸಲಾಗಿದೆ.

Times Now 23 Feb 2019, 12:26 pm
ಶ್ರೀನಗರ: ಪುಲ್ವಾಮಾ ದಾಳಿ ಬಳಿಕ ಭಾರತ ಕಾಶ್ಮೀರ ಪ್ರತ್ಯೇಕತಾವಾದಿ ನೇತಾರರ ಬಾಲ ಕಟ್ ಮಾಡಲು ಆರಂಭಿಸಿದೆ. ಕೆಲ ದಿನಗಳ ಹಿಂದೆ ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆ ಮತ್ತು ಸರಕಾರಿ ಸೌಲಭ್ಯಗಳನ್ನು ವಾಪಸ್ ಪಡೆಯಲಾಗಿತ್ತು. ಆಗ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ವಿರೋಧ ವ್ಯಕ್ತಪಡಿಸಿದ್ದರು. ಮತ್ತೀಗ ಮತ್ತೊಬ್ಬ ಮಾಜಿ ಸಿಎಂ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸರದಿ. ಅವರು ಯಾಸೀನ್ ಮಲಿಕ್ ಸೇರಿದಂತೆ ಕೆಲ ಪ್ರತ್ಯೇಕತಾವಾದಿ ನಾಯಕರ ಬೆಂಬಲವನ್ನು ಪ್ರಶ್ನಿಸಿದ್ದಾರೆ.
Vijaya Karnataka Web Mehbooba


ಪದೇ ಪದೇ ಪ್ರತ್ಯೇಕತಾವಾದಿಗಳ ಪರ ನಿಲ್ಲುವ ಮುಫ್ತಿ ಶನಿವಾರ ಮತ್ತೆ ಪ್ರತ್ಯೇಕತಾವಾದಿಗಳ ಪರ ಬ್ಯಾಟ್ ಬೀಸಿ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ಪ್ರತ್ಯೇಕತಾವಾದಿಗಳ ಬಂಧನವನ್ನು ಖಂಡಿಸಿರುವ ಅವರು ವ್ಯಕ್ತಿಯನ್ನು ಬಂಧಿಸಬಹುದು, ಅವರ ವಿಚಾರಗಳನ್ನಲ್ಲ ಎಂದಿದ್ದಾರೆ.


"ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಇಂತಹ ನಿರಂಕುಶ ಆಡಳಿತ ನಡೆಯುತ್ತಿರುವುದೇಕೆ ಎಂಬುದು ನನಗರ್ಥವಾಗುತ್ತಿಲ್ಲ. ಯಾವ ಕಾನೂನಿನ ಅಡಿಯಲ್ಲಿ ನೀವು ಅವರ ಬಂಧನವನ್ನು ಸಮರ್ಥಿಸಿಕೊಳ್ಳುತ್ತೀರ? ನೀವು ವ್ಯಕ್ತಿಯನ್ನು ಬಂಧಿಸಬಹುದು ಆದರೆ ಅವರ ವಿಚಾರಧಾರೆಗಳನ್ನಲ್ಲ, " ಎಂದು ಮುಫ್ತಿ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಅನೇಕ ಹುರಿಯತ್ ನಾಯಕರು ಮತ್ತು ಜಮಾತ್ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಜೆಕೆಎಲ್ಎಫ್ ( ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್) ಮುಖ್ಯಸ್ಥ ಯಾಸೀನ್ ಮಲಿಕ್‌ನನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಮಾತೆ ಎ ಇಸ್ಲಾಮಿ ಸಂಘಟನೆಗೆ ಸೇರಿದ ಅನೇಕ ಮುಖಂಡರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.


ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ 35ನೇ ಎ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ಹೆಚ್ಚು ಎಚ್ಚರಿಕೆಯಿಂದಿರುವಂತೆ ಪೊಲೀಸರಿಗೆ ಮತ್ತು ಅರೆ ಸೇನಾ ಪಡೆಗೆ ಸೂಚಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನೆಲ್ಲ ಬಂಧಿಸಲಾಗಿದೆ.

ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಉಗ್ರ ದಾಳಿಯ ಬೆನ್ನಲ್ಲೇ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಸರಕಾರಿ ಸೌಲಭ್ಯ ಮತ್ತು ಭದ್ರತೆಗಳನ್ನು ಸಹ ಕೆಲ ಜಮ್ಮು ಮತ್ತು ಕಾಶ್ಮೀರ ಸರಕಾರ ಹಿಂಪಡೆದಿತ್ತು.

ಕಾಶ್ಮೀರದ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದ ಹುರಿಯತ್‌ ಸಂಘಟನೆಯ ಮಿರ್ವೇಜ್‌ ಉಮರ್‌ ಫಾರೂಕ್‌, ಅಬ್ದುಲ್‌ ಘನಿ ಭಟ್‌, ಹಮೀಮ್‌ ಖುರೇಷಿ, ಶಬ್ಬೀರ್‌ ಶಾ, ಬಿಲಾಲ್‌ ಲೋನ್‌, ಫಜಲ್‌ ಹಕ್‌ ಖುರೇಷಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಈ ಮೂಲಕ ಖಡಕ್‌ ಸಂದೇಶವನ್ನೂ ರವಾನಿಸಿರುವುದು ಜತೆಗೆ, ಭದ್ರತೆಗಾಗಿ ಸುರಿಯುತ್ತಿದ್ದ ತೆರಿಗೆದಾರರ ನೂರಾರು ಕೋಟಿ ರೂ.ಪೋಲಾಗುವುದನ್ನು ತಡೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ