ಆ್ಯಪ್ನಗರ

ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿದವರು ನೀವೇ, ಈಗ ಪರಿಹಾರ ನೀಡಿ - ಕೇಂದ್ರಕ್ಕೆ ಸುಪ್ರೀಂ ಚಾಟಿ

ನೀವು ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಕೇವಲ ಉದ್ಯಮಗಳ ಬಗ್ಗೆ ಆಸಕ್ತಿ ತೋರಿ, ಜನರ ತೊಂದರೆಗಳನ್ನು ನೀವು ನಿರ್ಲಕ್ಷಿಸುವಂತಿಲ್ಲ ಎಂದು ಸುಪ್ರಿಂ ಕೋರ್ಟ್‌ ಹೇಳಿದೆ.

Agencies 26 Aug 2020, 7:35 pm

ಹೊಸದಿಲ್ಲಿ: ಸಾಲದ ಇಎಂಐ ಮುಂದೂಡಿಕೆ (ಮೊರಟೋರಿಯಂ) ಅವಧಿಯ ಬಡ್ಡಿ ಮನ್ನಾ ಸಂಬಂಧ ಕೇಂದ್ರ ಸರಕಾರದ ಅಭಿಪ್ರಾಯ ಕೇಳಿದ್ದ ಸುಪ್ರೀಂ ಕೋರ್ಟ್‌, ನೀವು ಆರ್‌ಬಿಐ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ.
Vijaya Karnataka Web supreme court


ಬಡ್ಡಿ ಮನ್ನಾ ನಿರ್ಧಾರದಿಂದ ಉದ್ಯಮಗಳು, ಬ್ಯಾಂಕ್‌ಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಕೇಂದ್ರ ಸರಕಾರದ ಹೇಳಿಕೆಗೆ ಅಸಮಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌, ನೀವು ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಖಾರವಾಗಿ ಹೇಳಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಸಾಲ ಪಾವತಿಯನ್ನು ಮುಂದೂಡಿಕೆ ಮಾಡಲಾಗಿದ್ದು ಇದಕ್ಕೆ ವಿಧಿಸಲಾದ ಬಡ್ಡಿಯನ್ನು ಮನ್ನಾ ಮಾಡುವ ಬೇಡಿಕೆಗೆ ಸಂಬಂಧಿಸಿದಂತೆ, ಸೆಪ್ಟೆಂಬರ್‌ 1 ರಂದು ತಮ್ಮ ತೀರ್ಮಾನ ಖಚಿತಪಡಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಸಾಲದ ಬಡ್ಡಿ ಮನ್ನಾ: ಅರ್ಜಿ ಸ್ವೀಕರಿಸಿದ ಸುಪ್ರೀಂ ಕೋರ್ಟ್‌

ಬಡ್ಡಿಮನ್ನಾ ಮಾಡಲು ವಿಪತ್ತು ನಿರ್ವಹಣಾ ಕಾಯಿದೆಯಡಿಯಲ್ಲಿ ಕೇಂದ್ರ ಸರಕಾರಕ್ಕೆ ವಿಶೇಷ ಅಧಿಕಾರ ಇದ್ದರೂ ಅದು ತನ್ನ ನಿಲುವು ಸ್ಪಷ್ಟಪಡಿಸಿಲ್ಲ ಎಂದು ಹೇಳಿರುವ ನ್ಯಾಯಾಲಯ, ನೀವು ಕೇವಲ ಉದ್ಯಮಗಳ ಬಗ್ಗೆ ಆಸಕ್ತಿ ತೋರಿ, ಜನರ ತೊಂದರೆಗಳನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದೆ.

"ನಿಮ್ಮ (ಕೇಂದ್ರದ) ಲಾಕ್‌ಡೌನ್‌ನಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ವ್ಯವಹಾರವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವ ಸಮಯ ಇದಲ್ಲ. ಜನರ ದುಃಸ್ಥಿತಿಯನ್ನು ಪರಿಗಣಿಸಬೇಕಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಲದ ಬಡ್ಡಿಯ ಮೇಲಿನ ನಿಮ್ಮ ಆಸಕ್ತಿಯನ್ನು ನಮಗೆ ತಿಳಿಸಬೇಕು ಎಂದು,” ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಹೇಳಿದ್ದಾರೆ.

ಅರ್ಜಿದಾರರು, 'ಮಾರ್ಚ್‌ 27 ರಂದು ಆರ್‌ಬಿಐ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕು, ಇದರಿಂದ ಬಡ್ಡಿ ಮನ್ನಾ ಸಾಧ್ಯವಾಗುತ್ತದೆ. ಬಡ್ಡಿಯಿಂದ ಜನರಿಗೆ ಸಂಕಷ್ಟ ಎದುರಾಗಿದ್ದು, ಸಂವಿಧಾನದ ಅಡಿಯಲ್ಲಿ ನೀಡಿರುವ ಬದುಕಿನ ಹಕ್ಕಿನ ಉಲ್ಲಂಘನೆಯಾಗಿದೆ,' ಎಂದು ವಾದಿಸಿದ್ದಾರೆ.

ಈ ಹಿಂದಿನ ವಿಚಾರಣೆಯಲ್ಲಿ ಆರ್‌ಬಿಐ, ಮೋರಟೋರಿಯಂ ಅವಧಿಯ ಬಡ್ಡಿಯನ್ನು ಮನ್ನಾ ಮಾಡಲು ಸಾಧ್ಯವಿಲ್ಲ. ಇದರಿಂದ ಬ್ಯಾಂಕ್‌ನ ಆರೋಗ್ಯ ಮತ್ತು ಸ್ಥಿರತೆ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿತ್ತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಆಗಸ್ಟ್‌ 31ಕ್ಕೆ ಅಂತ್ಯವಾಗುವ ಮೊರಟೋರಿಯಂ ಯೋಜನೆಯನ್ನು ಮತ್ತಷ್ಟು ವಿಸ್ತರಿಸಬೇಕು ಎಂದೂ ಮನವಿ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ