ಆ್ಯಪ್ನಗರ

ಜಾಲಿರೈಡ್‌ಗಾಗಿ ರಕ್ಷಣಾ ಹೆಲಿಕಾಪ್ಟರ್‌ ದುರ್ಬಳಕೆ ಮಾಡಿದ ಕೇರಳದ ಯುವಕ

ಭಾನುವಾರ ಕೇರಳದ ಚೆಂಗನೂರಿನ ಅರಟ್ಟುಪುಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಭಾರತೀಯ ವಾಯುಪಡೆಯ ರಕ್ಷಣಾ ಹೆಲಿಕಾಪ್ಟರ್‌ ಒಂದನ್ನು ಏರಿದ್ದ ಯುವಕನೋರ್ವ ಬಳಿಕ ತಾನು ಜಾಲಿಯಾಗಿ ಹೆಲಿಕಾಪ್ಟರ್‌ ರೈಡ್ ಹೋಗುವ ಸಲುವಾಗಿ ರಕ್ಷಣೆಗೆ ಕೋರಿಕೊಂಡಿದ್ದೆ ಎಂದಿದ್ದಾನೆ.

Vijaya Karnataka Web 22 Aug 2018, 5:15 pm
[ಮೂಲ ಸುದ್ದಿ: ಟೈಮ್ಸ್ ಆಫ್ ಇಂಡಿಯಾ, 22 ಆಗಸ್ಟ್ 2018]
Vijaya Karnataka Web Jolyride


ತಿರುವನಂತಪುರಂ:
ಕೇರಳ ಮತ್ತು ಕೊಡಗಿನಲ್ಲಿ ಪ್ರವಾಹ ಇಳಿಮುಖವಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯ ನಡೆಯುತ್ತಿದೆ. ಆದರೆ ಈ ಸಂದರ್ಭದಲ್ಲೂ ಕೆಲವು ದುರುಳರು ಮಾತ್ರ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದ್ದು, ಲೂಟಿಯಂತಹ ಕೃತ್ಯದಲ್ಲಿ ತೊಡಗಿದ್ದಾರೆ.

ಭಾನುವಾರ ಕೇರಳದ ಚೆಂಗನೂರಿನ ಅರಟ್ಟುಪುಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಭಾರತೀಯ ವಾಯುಪಡೆಯ ರಕ್ಷಣಾ ಹೆಲಿಕಾಪ್ಟರ್‌ ಒಂದನ್ನು ಏರಿದ್ದ ಯುವಕನೋರ್ವ ಬಳಿಕ ತಾನು ಜಾಲಿಯಾಗಿ ಹೆಲಿಕಾಪ್ಟರ್‌ ರೈಡ್ ಹೋಗುವ ಸಲುವಾಗಿ ರಕ್ಷಣೆಗೆ ಕೋರಿಕೊಂಡಿದ್ದೆ ಎಂದಿದ್ದಾನೆ.

ಯುವಕನ ಈ ಅನಾಗರಿಕ ವರ್ತನೆಯಿಂದ ಏರ್‌ಫೋರ್ಸ್ ರಕ್ಷಣಾ ಪಡೆಯ ಸಿಬ್ಬಂದಿ ಅಮೂಲ್ಯ ಸಮಯ, ಹೆಲಿಕಾಪ್ಟರ್ ಇಂಧನ ವ್ಯರ್ಥವಾದ ಜತೆಗೆ ಅದೇ ಪರಿಸರದಲ್ಲಿ ರಕ್ಷಣೆಯ ಅಗತ್ಯವಿದ್ದ ಮತ್ತಷ್ಟು ಜನರು ತೊಂದರೆ ಅನುಭವಿಸುವಂತಾಗಿದೆ.


ಜೋಬಿ ಜಾಯ್ ಹೆಸರಿನ 28 ವರ್ಷದ ಯುವಕ ಹೆಲಿಕಾಪ್ಟರ್ ಏರುವುದಕ್ಕಾಗಿ ರಕ್ಷಣೆಯ ಅಗತ್ಯವಿರುವವನಂತೆ ನಾಟಕ ಮಾಡಿದ್ದ. ಬರಿಗಾಲಿನಲ್ಲಿ ಓಡಿಕೊಂಡು ಬಂದು ಹೆಲಿಕಾಪ್ಟರ್‌ ಏರಿದ್ದ ಆತನನ್ನು ಹೊತ್ತ ರಕ್ಷಣಾ ಹೆಲಿಕಾಪ್ಟರ್‌ ತಿರುವನಂತಪುರಂನತ್ತ ಚಲಿಸಿದಾಗ ಆತ ತಾನು ಜಾಲಿರೈಡ್‌ಗಾಗಿ ಹೀಗೆ ಮಾಡಿದ್ದು, ಮತ್ತೆ ತನ್ನನ್ನು ಅದೇ ಸ್ಥಳದಲ್ಲಿ ಬಿಡುವಂತೆ ಕೇಳಿಕೊಂಡಿದ್ದ.

ಯುವಕನನ್ನು ರಕ್ಷಿಸುವ ಸಲುವಾಗಿ ಇನ್ನೇನು ಟೇಕಾಫ್ ಆಗಲಿದ್ದ ಹೆಲಿಕಾಪ್ಟರ್ ತುರ್ತು ಸಂದರ್ಭವಿದ್ದರೂ, ಅದೇ ಪರಿಸರದಲ್ಲಿದ್ದ ಓರ್ವ ಮಹಿಳೆ ಮತ್ತು ಮಗುವನ್ನು ಬಿಟ್ಟು ತೆರಳಬೇಕಾಗಿತ್ತು. ಆದರೆ ಯುವಕನಿಗೆ ಮಾತ್ರ ಅದರ ಅಗತ್ಯವಿರಲಿಲ್ಲ. ಯುವಕನ ಹುಚ್ಚು ವರ್ತನೆಯಿಂದ ಏರ್‌ ಫೋರ್ಸ್‌ಗೆ ಅಂದಾಜು 1 ಲಕ್ಷ ರೂ. ನಷ್ಟ ಉಂಟಾಗಿದೆ. ಆತನನ್ನು ಏರ್‌ ಫೋರ್ಸ್ ಅಧಿಕಾರಿಗಳು ತಿರುವನಂತಪುರಂ ಜಿಲ್ಲಾಡಳಿತದ ವಶಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ