ಆ್ಯಪ್ನಗರ

ಇನ್ಫೋಗ್ರಾಫಿಕ್ಸ್: ನಕಲಿ ನೇತಾಜಿಗೆ ಬೂಟು, ಕಲ್ಲೇಟು!

ಅಂದು ನೇತಾಜಿಯ ಪುನರುತ್ಥಾನವಾಗುತ್ತದೆ. ಅದಕ್ಕಾಗಿ ಕರಪತ್ರ, ಬ್ಯಾನರ್‌, ಹೋರ್ಡಿಂಗ್‌ಗಳನ್ನು ಹಾಕಲಾಗಿತ್ತು.

ಏಜೆನ್ಸೀಸ್ 5 Jun 2016, 4:26 am
ಆಗ್ರಾ: ಅದು 1975ರ ಜನವರಿ 23. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 78ನೇ ಜಯಂತಿ. ಕಾನ್ಪುರ ಬಳಿಯ ಫೂಲ್‌ಭಾಗ್‌ನಲ್ಲಿ ಕಿಕ್ಕಿರಿದ ಜನಸ್ತೋಮ. ಎಲ್ಲರಲ್ಲೂ ಒಂದೇ ಕಾತರ - ತಮ್ಮ ನೆಚ್ಚಿನ ನೇತಾರ ಸುಭಾಷ್‌ ಚಂದ್ರಬೋಸ್‌ ಅವರನ್ನು ನೋಡಿ ಕಣ್ತುಂಬಿಕೊಳ್ಳಬೇಕು!

ನಿಜ, ಕಳೆದ ಕೆಲ ದಿನಗಳಿಂದ ಹಬ್ಬಿದ ಸುದ್ದಿಯೇ ಇದಕ್ಕೆಲ್ಲ ಕಾರಣ; ಅಂದು ನೇತಾಜಿಯ ಪುನರುತ್ಥಾನವಾಗುತ್ತದೆ. ಅದಕ್ಕಾಗಿ ಕರಪತ್ರ, ಬ್ಯಾನರ್‌, ಹೋರ್ಡಿಂಗ್‌ಗಳನ್ನು ಹಾಕಲಾಗಿತ್ತು.

ಹಲವು ಗಂಟೆಗಳ ಬಳಿಕ ವೇದಿಕೆ ಮೇಲೆ ವ್ಯಕ್ತಿಯೊಬ್ಬರ ಆಗಮನವಾಗಿತ್ತು. ಉದ್ದನೆಯ ಬಿಳಿ ಗಡ್ಡ, ನೆರೆತ ತಲೆಗೂದಲಿನ ಆ ವ್ಯಕ್ತಿ ಜನರತ್ತ ಕೈ ಬೀಸಿತು. ಎತ್ತಲಿಂದಲೋ 'ನೇತಾಜಿ ಝಿಂದಾಬಾದ್‌' ಎಂಬ ಘೋಷಣೆ, ಹರ್ಷೋದ್ಗಾರ.

ಅಷ್ಟೇ...ಅಲ್ಲಿ ನಡೆಯಲಿರುವ ಭಯಾನಕ ಸನ್ನಿವೇಶಕ್ಕೆ ಮುನ್ಸೂಚನೆಯೆಂಬಂತೆ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಶಬ್ಧ. ದಿನಗಟ್ಟಲೆ ಕಾದಿದ್ದ ಜನರಿಗೋ ತಮ್ಮ ಕಣ್ಣನ್ನು ತಾವೇ ನಂಬಲಾರದಷ್ಟು ಆಘಾತ.

ನೇತಾಜಿ ಅವತಾರ ತಾನೆಂದುಕೊಂಡ ಆ ವ್ಯಕ್ತಿ ಒಂದೆರಡು ಮಾತಾಡೋದರೊಳಗೆ ಕಲ್ಲು, ಚಪ್ಪಲಿ, ಬೂಟುಗಳು ತೂರಿಬಂದವು...ಏನಾಗುತ್ತಿದೆ ಎಂದು ಅರ್ಥವಾಗುವಷ್ಟರಲ್ಲಿ ಆ ವ್ಯಕ್ತಿ ಜನರ ಕೈಯ್ಯಲ್ಲಿ ಹಣ್ಣುಗಾಯಿ ನೀರುಗಾಯಿ ಆಗಿಬಿಟ್ಟಿದ್ದ. ಪೊಲೀಸರು ರಕ್ಷಿಸದೇ ಹೋಗಿದ್ದರೆ ಆತ ಅಂದೇ ಫಿನಿಶ್‌!

ಆ ವ್ಯಕ್ತಿ ಮತ್ತಾರೂ ಅಲ್ಲ, ಜೈ ಗುರುದೇವ್‌ ಬಾಬಾ.

ನೇತಾಜಿ ಸುಭಾಷ್‌ ಚಂದ್ರಬೋಸ್‌ ಇನ್ನೂ ಬದುಕಿದ್ದಾರೆ, ಅವರನ್ನು ನಿಮಗೆ ತೋರಿಸುತ್ತೇನೆ ಬನ್ನಿ ಎಂದು ಜನರನ್ನು ನಂಬಿಸಿ, ನಂಬಿಕೆ ದ್ರೋಹ ಮಾಡಿದ ಜೈ ಗುರುದೇವ್‌ಗೆ ಜನ ಕಲಿಸಿದ ಪಾಠ ದುಬಾರಿಯಾಗಿಯೇ ಇತ್ತು.

ಆದರೆ, ಇಷ್ಟಕ್ಕೇ ಸ್ವಯಂ ಘೋಷಿತ ಬಾಬಾನ ಹುಚ್ಚಾಟ ಮುಗಿಯಲಿಲ್ಲ. ಅಕ್ರಮ ಹಾದಿಯಲ್ಲಿ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ. ಸರಕಾರಿ ಜಮೀನು ಕೊಳ್ಳೆ ಹೊಡೆದ. 'ದೂರದರ್ಶಿ ಪಕ್ಷ'ದ ಹೆಸರಲ್ಲಿ ರಾಜಕೀಯ ಪ್ರವೇಶಿಸಿದ. ...ಬಾಬಾನ ಇಂತಹ ಹತ್ತಾರು ಕಥೆಗಳಿಗೆ ಮಥುರಾದ ಜೈ ಗುರುದೇವ್‌ ಆಶ್ರಮ ಮೂಕ ಸಾಕ್ಷಿಯಾಗಿದೆ.

Vijaya Karnataka Web infographics baba gurudev
ಇನ್ಫೋಗ್ರಾಫಿಕ್ಸ್: ನಕಲಿ ನೇತಾಜಿಗೆ ಬೂಟು, ಕಲ್ಲೇಟು!


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ