ಆ್ಯಪ್ನಗರ

ಮಳೆ ಕೊರತೆ: 141 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ

ಮಳೆ ಕೊರತೆಯಿಂದ ಕಲಬುರಗಿ ಸೇರಿ ರಾಜ್ಯದ 141 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

Vijaya Karnataka 31 Jul 2019, 10:10 pm
ದೇವಯ್ಯ ಗುತ್ತೇದಾರ್‌ ಕಲಬುರಗಿ:ಮಳೆ ಕೊರತೆಯಿಂದ ಕಲಬುರಗಿ ಸೇರಿ ರಾಜ್ಯದ 141 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
Vijaya Karnataka Web 141 to groundwater level underworld in taluks
ಮಳೆ ಕೊರತೆ: 141 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ


ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕೃತ ದಾಖಲೆಗಳ ಪ್ರಕಾರ, 2018ರ ಮೇ ತಿಂಗಳಿನಿಂದ 2019ರ ಮೇ ಅಂತ್ಯಕ್ಕೆ ರಾಜ್ಯದ ಶೇ 84ರಷ್ಟು ಪ್ರದೇಶದಲ್ಲಿ ಅಂತರ್ಜಲ ಮಟ್ಟ 4 ಮೀಟರ್‌ ಕುಸಿದಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಕುಸಿತ?:

80 ತಾಲೂಕುಗಳಲ್ಲಿ 4 ಮೀಟರ್‌ ಕುಸಿದರೆ, 24 ತಾಲೂಕುಗಳಲ್ಲಿ 4ರಿಂದ 2 ಮೀ, 37 ತಾಲೂಕುಗಳಲ್ಲಿ 2ಮೀ, 20 ತಾಲೂಕುಗಳಲ್ಲಿ 0-2 ಮೀ. ಅಂತರ್ಜಲ ಮಟ್ಟ ಕುಸಿದಿದೆ. ಕೇವಲ 27 ತಾಲೂಕು ಅಂದರೆ ಶೇ 16ರಷ್ಟು ಕಡೆ ಅಂತರ್ಜಲ ಮಟ್ಟ 2-4 ಮೀಟರ್‌ ಏರಿಕೆ ಕಂಡು ಬಂದಿದೆ.

ಬೀದರ್‌, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿ 4 ಮೀಟರ್‌ ಕುಸಿತವಾಗಿದ್ದು, ಅತೀ ಹೆಚ್ಚು ಕುಸಿತವಾಗಿರುವ ಜಿಲ್ಲೆಗಳಾಗಿವೆ. ಗದಗ, ಮುಧೋಳ್‌, ಗುಂಡ್ಲುಪೇಟೆ, ರಾಮನಗರ, ಹೊನ್ನಾಳಿ ತಾಲೂಕುಗಳು (ಶೇ 3ರಷ್ಟು)ಲ್ಲಿ ಅಂತರ್ಜಲ ಮಟ್ಟ ಹೆಚ್ಚಿರುವುದು ಸಮಾಧಾನ ತಂದಿದೆ.

ಯಾಕೆ ಕುಸಿತ?:


ಕಳೆದ ವರ್ಷ ನಿರೀಕ್ಷಿತ ಮಳೆ ಆಗದಿರುವುದು ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತವಾಗಲು ಕಾರಣವಾಗಿದೆ. ತೀರಾ ಆಳದವರೆಗೆ ಬೋರ್‌ವೆಲ್‌ ಕೊರೆದು ನೀರು ಪಡೆಯುವುದು, ಮಿತಿ ಮೀರಿದ ನೀರು ಬಳಕೆ ಇದಕ್ಕೆ ಕಾರಣವೆಂದು ಭೂವಿಜ್ಞಾನಿಗಳು ಹೇಳುತ್ತಾರೆ.

ಅಂತರ್ಜಲ ಹೆಚ್ಚಿಲು ಪ್ರಮುಖ ಪಾತ್ರ ವಹಿಸುವ ಕೆರೆ ಕಟ್ಟೆಗಳು ಸಹ ಬತ್ತಿ ಹೋಗಿವೆ. ರಾಜ್ಯದ 3,611 ಸಣ್ಣ ನೀರಾವರಿ ಕೆರೆಗಳ ಪೈಕಿ ಶೇ 31ರಷ್ಟು ಕೆರೆಗಳಲ್ಲಿ ಶೇ 30-50ರಷ್ಟು ಪ್ರಮಾಣದ ನೀರಿನ ಸಂಗ್ರಹ ಇದ್ದು, ಶೇ 68ರಷ್ಟು ಕೆರೆಗಳಲ್ಲಿ ಅಲ್ಪಪ್ರಮಾಣದ ನೀರಿನ ಸಂಗ್ರಹವಿದೆ. 8 ತಾಲೂಕುಗಳ ಮಾಹಿತಿ ಲಭ್ಯವಾಗಿಲ್ಲ. ಬಹುತೇಕ ಕೆರೆಗಳು ಬತ್ತುವ ಹಂತಕ್ಕೆ ಬಂದು ತಲುಪಿದೆ.

ಪ್ರತಿ ಜಿಲ್ಲೆಗಳಲ್ಲಿಯೂ ಇಲಾಖೆ ಗುರುತಿಸಿದ ಬೋರ್‌ವೆಲ್‌ಗಳನ್ನು ಹಾಕಲಾಗಿದೆ. ಅವುಗಳಲ್ಲಿ ಗ್ರೌಂಡ್‌ನಿಂದ ನೀರಿನ ಲೆವಲ್‌ವರೆಗಿನ ಅಂತರ ಅಳೆದು ಅಂತರ್ಜಲ ಮಟ್ಟ ಎಷ್ಟು ಕುಸಿದಿದೆ ಎನ್ನುವುದನ್ನು ಅಳೆಯಲಾಗುತ್ತದೆ. ಅಂತರ್ಜಲ ಬತ್ತಿರುವುದರಿಂದ ಜನ ಆಳದವರೆಗೆ ಬೋರ್‌ವೆಲ್‌ ಕೊರೆದರೂ ನೀರು ಸಿಗುತ್ತಿಲ್ಲ. ತೋಟಗಾರಿಕೆ ಬೆಳೆಗಳಿಗೆ ನೀರು ಸಿಗದೇ ಒಣಗಿ ಹೋಗುತ್ತಿವೆ. ಜನ ಜಾನುವಾರುಗಳಿಗೆ ಬರೆ ಬಿದ್ದಂತಾಗಿದೆ.

ಎರಡು ವರ್ಷಗಳಿಂದ ಉತ್ತಮ ಮಳೆ ಬಾರದೇ ಇದ್ದರಿಂದ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದೆ. ಮಳೆ ಬಂದರೆ ಮಾತ್ರ ಈ ಮಟ್ಟವನ್ನು ಹೆಚ್ಚಿಸಬಹುದು. ಮಳೆ ನೀರು ಸಂಗ್ರಹಣೆ, ನೀರಿನ ಮಿತ ಬಳಕೆಯಾಗಬೇಕು.

ಮುಜಿಬ್‌ ಉರ್‌ ರಹೆಮಾನ್‌, ಭೂವಿಜ್ಞಾನಿ, ಕಲಬುರಗಿ
.........
2ರಿಂದ 4 ಮೀಟರ್‌ ಕುಸಿದ ಅಂತರ್ಜಲ ಮಟ್ಟ| ರಾಜ್ಯದ ಶೇ 84ರಷ್ಟು ಪ್ರದೇಶದಲ್ಲಿ ಅಂತರ್ಜಲ ಕುಸಿತ| ಮಳೆ ಕೊರತೆ ತಂದ ಆತಂಕ| ಕುಡಿಯಲು- ಕೃಷಿಗೂ ಅಪಾಯಕಾರಿ ಸಂದೇಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ