ಕಲಬುರಗಿ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬೆಣ್ಣೆತೊರಾ ಮತ್ತು ಮುಲ್ಲಾಮಾರಿ ಜಲಾಶಯಗಳು ಭರ್ತಿಯಾಗಿದ್ದು, ಒಳಹರಿವು ಹೆಚ್ಚಾಗಿದ್ದು, ಯಾವುದೇ ಕ್ಷಣದಲ್ಲಾದರೂ ನದಿಗೆ ನೀರು ಹರಿಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ನಿರ್ಮಾಣಗೊಂಡ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನಿರಂತರವಾಗಿ ಒಳ ಹರಿವಿದ್ದು, ಯಾವುದೇ ಕ್ಷಣದಲ್ಲಿ ಜಲಾಶಯ ಭರ್ತಿಯಾಗುವ ಹಂತದಲ್ಲಿದೆ. ಜಲಾಶಯದ ನೀರಿನ ಗರಿಷ್ಠಮಟ್ಟದ ನಂತರ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ನೀರನ್ನು ಆಣೆಕಟ್ಟೆಯ ಕೋಡಿ ಬಾಗಿಲುಗಳ ಮೂಲಕ ನದಿಯ ಪಾತಳಿಗೆ ಬಿಡಲಾಗುವುದು.
ಈ ಹಿನ್ನೆಲೆಯಲ್ಲಿ ನದಿಯ ಎರಡೂ ದಂಡೆಗಳಲ್ಲಿರುವ ಚಿಮ್ಮನಚೋಡ, ತಾದ್ಲಾಪುರ, ಕನಕಪುರ, ಗೌಡನಹಳ್ಳಿ, ಗಾರಂಪಳ್ಳಿ, ದೇಗಲಮಡ್ಡಿ, ನೀಮಾಹೊಸಳ್ಳಿ, ಭಕ್ತಂಪಳ್ಳಿ, ಗರಗಪಳ್ಳಿ, ಗಣಾಪುರ, ಈರಗಪಳ್ಳಿ, ಖರ್ಚಖೇಡ್ ಹಾಗೂ ಜಟ್ಟೂರು ಗ್ರಾಮಗಳಿಗೆ ನದಿಯ ಪ್ರವಾಹದಿಂದ ತೊಂದರೆಯಾಗಬಹುದು. ಈ ಗ್ರಾಮಗಳ ಜನರು ಹಾಗೂ ರೈತರು ನದಿಯಲ್ಲಿರುವ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಸುರಕ್ಷಿತ ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆಂದು ಆಣೆಕಟ್ಟು ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಬೆಣ್ಣೆತೊರಾ ಪ್ರವಾಹ ಮುನ್ನೆಚ್ಚರಿಕೆæ
ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಬಳಿ ನಿರ್ಮಾಣಗೊಂಡಿರುವ ಬೆಣ್ಣೆತೋರಾ ನೀರಾವರಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯದ ಒಳ ಹರಿವು ಹೆಚ್ಚಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುವ ಹೆಚ್ಚುವರಿ ನೀರನ್ನು ಆಣೆಕಟ್ಟೆಯ ಕೋಡಿ ಬಾಗಿಲುಗಳ ಮೂಲಕ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಮುನ್ಸೂಚನೆ ನೀಡದೆ ನದಿಯ ಪಾತಳಿಗೆ ನೀರು ಹರಿ ಬಿಡಲಾಗುವುದು.
ಈ ಹಿನ್ನೆಲೆಯಲ್ಲಿ ಯೋಜನೆಯ ಕೆಳಭಾಗದಲ್ಲಿರುವ ನದಿಯ ಎರಡೂ ದಂಡೆಗಳಲ್ಲಿರುವ ಗ್ರಾಮಗಳ ರೈತರು, ಸಾರ್ವಜನಿಕರು, ರೈತ ಮಹಿಳೆಯರು ಹಾಗೂ ದನಕರುಗಳನ್ನು ಮೇಯಿಸುವವರು ನದಿಯಲ್ಲಿ ಇಳಿಯುವುದಾಗಲಿ, ಬಟ್ಟೆ ತೊಳೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು. ನದಿಯ ಎರಡೂ ದಂಡೆಗಳಲ್ಲಿರುವ ಜನರು ಮತ್ತು ರೈತರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಸುರಕ್ಷಿತ ಎತ್ತರದ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕೆಂದು ಬೆಣ್ಣೆತೋರಾ ಆಣೆಕಟ್ಟು ಯೋಜನೆಯ ಹೆಬ್ಬಾಳ ವಿಭಾಗ-4ರ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಮಸಿಂಗ ಅಧಿಸೂಚನೆ ಹೊರಡಿಸಿದ್ದಾರೆ.
ಬೆಣ್ಣೆತೊರಾ ಜಲಾಶಯದಲ್ಲಿ ಈಗ 435.07 ಮೀಟರ್ ನೀರಿದ್ದು, ಭರ್ತಿಯಾಗಲು ಕೇವಲ ಕೇವಲ 3 ಮೀಟರ್ ಮಾತ್ರ ಬಾಕಿ ಇದೆ. ಯಾವುದೇ ಕ್ಷಣದಲ್ಲಾದರೂ ಭರ್ತಿಯಾಗುವ ಸಾಧ್ಯತೆ ಇರುವುದರಿಂದ ಕೆಳಭಾಗದ ಜನರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
207 ಮನೆಗಳು ಜಖಂ
ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಇದುವರೆಗೆ ಬಿದ್ದ ಮಳೆಯಿಂದ ಒಟ್ಟು 207 ಮನೆಗಳು ಬಿದ್ದಿವೆ. ಈ ಪೈಕಿ ಎರಡು ದಿನಗಳಲ್ಲಿ ಆಳಂದ್ ತಾಲೂಕಿನಲ್ಲಿ 18 ಮನೆಗಳು ಬಿದ್ದಿವೆ. 11 ಜಾನುವಾರುಗಳು ಸಾವಿಗೀಡಾಗಿವೆ. ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದರೆ ಜೇವರ್ಗಿಯಲ್ಲಿ ವಾಡಿಕೆಗಿಂತ ಕಮ್ಮಿ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.
ಮಳೆ ಹಾನಿ ಬಗ್ಗೆ ಸಮೀಕ್ಷೆ ಶುರುವಾಗಿದ್ದು, ನಾಲ್ಕೈದು ದಿನಗಳಲ್ಲಿ ವರದಿ ಬರಲಿದೆ ಎಂದು ಮೂಲಗಳು ವಿವರಿಸಿವೆ.