ಆ್ಯಪ್ನಗರ

ಬಿಜೆಪಿ ಮುಖಂಡನ ಹತ್ಯೆ: ಸಿಬಿಐಗೆ ತನಿಖೆಗೆ ಆಗ್ರಹ

ಈಚೆಗೆ ನಡೆದಿರುವ ಆಳಂದ ತಾಲೂಕಿನ ದಲಿತ ಯುವಕ ರಾಹುಲ್‌ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆ ಸಂಪೂರ್ಣ ಅನುಮಾನಾಸ್ಪದವಾಗಿದ್ದು, ಕೂಡಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಳಂದ ಶಾಸಕ ಸುಭಾಷ ಗುತ್ತೇದಾರ ಆಗ್ರಹಿಸಿದರು.

Vijaya Karnataka 7 Sep 2018, 5:30 pm
ಕಲಬುರಗಿ : ಈಚೆಗೆ ನಡೆದಿರುವ ಆಳಂದ ತಾಲೂಕಿನ ದಲಿತ ಯುವಕ ರಾಹುಲ್‌ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆ ಸಂಪೂರ್ಣ ಅನುಮಾನಾಸ್ಪದವಾಗಿದ್ದು, ಕೂಡಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಳಂದ ಶಾಸಕ ಸುಭಾಷ ಗುತ್ತೇದಾರ ಆಗ್ರಹಿಸಿದರು.
Vijaya Karnataka Web bjp leader murder casedemand for cbi investigation
ಬಿಜೆಪಿ ಮುಖಂಡನ ಹತ್ಯೆ: ಸಿಬಿಐಗೆ ತನಿಖೆಗೆ ಆಗ್ರಹ


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಪೂರ್ವ ನಿಯೋಜಿತವಾದ ಹತ್ಯೆಯಾಗಿದೆ. ಮಾಜಿ ಶಾಸಕ ಬಿ.ಆರ್‌.ಪಾಟೀಲ ಅವರ ಕೈವಾಡ ಇದೆ. ಹತ್ಯೆ ಮಾಡಿರುವವರೆಲ್ಲರೂ ಕಾಂಗ್ರೆಸ್‌ ಮುಖಂಡರೇ ಆಗಿದ್ದಾರೆ. ರಾಹುಲ್‌ ಬಿಜೆಪಿಯ ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷನಾಗಿದ್ದ, ಆತನ ತಂದೆ ಲಕ್ಷ್ಮಣ ತಾಪಂ ಉಪಾಧ್ಯಕ್ಷನಾಗಿ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವಿಧಾನಸಭೆಯಲ್ಲಿ ನಡೆದ ಮೇಲಾಟದಲ್ಲಿ ಮತ್ತು ಮನೆ ಹಂಚಿಕೆ ವಿವಾದ ಅಲ್ಲದೆ, ಇತರೆ ವಿಷಯಗಳಲ್ಲಿ ಲಕ್ಷ್ಮಣ ಮತ್ತು ಬಾಬುಗೌಡ ಸಿದ್ದಣ್ಣಗೌಡ ಪಾಟೀಲ ಹಾಗೂ ಇತರರ ಮಧ್ಯೆ ಗುದ್ದಾಟಗಳು ನಡೆದೇ ಇದ್ದವು ಎಂದು ಆರೋಪಿಸಿದರು.

ತನಿಖೆಗೆ ಅಡ್ಡಿ :


ಹತ್ಯೆ ಪ್ರಕರಣದ ತನಿಖೆಗೆ ಮಾಜಿ ಶಾಸಕ ಬಿ.ಆರ್‌.ಪಾಟೀಲ ಮತ್ತು ಆರ್‌.ಕೆ.ಪಾಟೀಲರು ಪೊಲೀಸರ ಮೇಲೆ ಒತ್ತಡ ಹಾಕಿ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದಕ್ಕೆ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಗಳಿಂದಲೂ ಒತ್ತಡವನ್ನು ಹಾಕಿಸಿದ್ದಾರೆ. ಇದರಿಂದಾಗಿ ತನಿಖೆ ದಾರಿ ತಪ್ಪುತ್ತಿದೆ ಎಂದರು. ಆರೋಪಿಗಳಾಗಿರುವ ಎಲ್ಲರನ್ನು ಒಂದು ವಾರದಲ್ಲಿ ಬಂಧಿಸದಿದ್ದರೆ ಬಿಜೆಪಿಯಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದರು.

ಎಸ್ಪಿಗೆ ಪತ್ರ:

ಚುನಾವಣೆ ಹಿನ್ನೆಲೆಯಲ್ಲಿ ಆಗಿದ್ದ ಜಗಳ ಮತ್ತು ಈಚೆಗಿನ ರಾಜಕೀಯ ಚುಟುವಟಿಕೆಗಳಲ್ಲಿ ಬಾಬುಗೌಡ ಪಾಟೀಲ, ಸುನೀಲ ಪಾಟೀಲ, ನಾಗರಾಜ ಪಾಟೀಲ, ಸಂಜುಕುಮಾರ ಪಾಟೀಲ, ಅಶೋಕ ಪಾಟೀಲ ಇನ್ನೂ ಹಲವರು ತಮ್ಮನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದು, ಈ ಕುರಿತು ತಮ್ಮ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ರಾಹುಲ್‌ ತಂದೆ ಲಕ್ಷ್ಮಣ ಬೀಳಗಿ ಎಸ್ಪಿ ಅವರಿಗೆ ಪತ್ರ ಬರೆದಿದ್ದರು. ಪೊಲೀಸರು ಭದ್ರತೆ ನೀಡಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ ಎಂದರು.

ರಾಹುಲ್‌ ಹತ್ಯೆಯಿಂದಾಗಿ ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ. ಕೂಡಲೇ ಸರಕಾರ ಪರಿಹಾರ ಕೊಡಬೇಕು. ರಾಹುಲ್‌ ಕುಟುಂಬದ ನೀಡಿರುವ ದೂರಿನಲ್ಲಿರುವ ಎಲ್ಲರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅಫಜಲಪುರ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ, ರಾಜು ವಾಡೇಕರ್‌, ಅಂಬರಾಯ ಅಷ್ಟಗಿ, ಧರ್ಮಣ್ಣ ಇಟಗಾ, ಸಂಜಯ ಮಿಸ್ಕಿನ್‌, ವಿಜಯಕುಮಾರ ಆಡಕಿ, ಆನಂದ ಗಾಯಕವಾಡ, ಅಂಬರಾಯ ಚಲಗೇರಾ ಇತರರು ಇದ್ದರು.

ಬಿಆರ್‌ ಬದಲಾಗ್ಯಾನ್‌

ಬಿ.ಆರ್‌.ಪಾಟೀಲ ಮೊದ್ಲ ಹಿಂಗ್‌ ಇರ್ಲಿಲ್ಲ.. ಕೊಲೆ,ಗಿಲೆ ಮಾಡಿಸುವಷ್ಟರ ಮಟ್ಟಿಗಿ ಹೋಗಿದ್ದಿಲ್ಲ.. ಈಗ ಏನ್ಯಾಗದಂದ್ರ.. ಅವನು ಸುತ್ತಮುತ್ತಾ ಎಲ್ಲರು ಸೇರಿ ತಾಲೂಕನ್ಯಾಗ ಸುಮ್ಮಸುಮ್ಮನೆ ನಮ್ಮ ವಿರುದ್ಧ ಹೇಳ್ತಾರ್‌. ಅದಕ್ಕ ಬಿಆರ್‌ ಇವರ ಹಿಂದ ನಿಂತುದ್ದು ಆದ. ನೋಡ್ರಿ.. ಪಾಟೀಲ ಗುಡಾ.. ಓಡಾಡೋ ಫಿರ್ದೋಸ್‌ 22, ಮೋಹನಗೌಡ 13, ನಾಗರಾಜ ಪಾಟೀಲ ವಿರುದ್ದ 5 ಕೇಸುಗಳಿವೆ. ಇಂತಹವರೆಲ್ಲಾ ಇದ್ರ ಏನಾಗ್ತದ್‌.. ತಾಲೂಕ್ಯಾನ್ಯಾಗ್‌ ಶಾಂತಿ ಇಲ್ಲದಂಗ್‌ ಆಗ್ಯಾದ್‌.

- ಸುಭಾಷ ಗುತ್ತೇದಾರ ಆಳಂದ ಶಾಸಕರು.

ಆರೋಪ ಸುಳ್ಳದ..

ನೋಡ್ರಿ.. ಮಾಜಿ ಶಾಸಕ ಬಿ.ಆರ್‌.ಪಾಟೀಲ ಮಾಡೋ ಆರೋಪ ಏನದಲ್ಲ.. ಅದು ಸುಳ್ಳದ. ಆಳಂದ ಗಾಣಗಾಪುರ ರಸ್ತೆ ಮಾಡ್ಲಾತ್ತೀವಿ. ಉಳಿದ ಎಲ್ಲ ಕೆಲ್ಸಾಗೋಳೂ ಬರಾಬರ್ರ ನಡದಾವ್‌. ರಸ್ತೆ, ನೀರು, ಶೌಚಾಲಯ ಕೆಲಸ ಜೋರನಿಂದ ನಡೆದಾದ... ಹೊಟ್ಟಿಕಿಚ್ಚಿಗಿ ಸುಮ್ಮ ಆರೋಪ ಮಾಡದ್ರ.. ಹ್ಯಾಂಗ್‌.. ಪಾಟೀಲರೇ ಹಿಂದಕ್‌ ಪರ್ಸೆಂಟೇಜ್‌ ವ್ಯವಹಾರ ಮಾಡ್ಯಾರ್‌ ಇದೆಲ್ಲ ತಾಲೂಕು ಯಾಕ್ರಿ ಜಿಲ್ಲಾಕ್‌ ಗೊತ್ತಾದ. ಈಗ ನಮ್ಮ ಮ್ಯಾಲ ಆರೋಪ ಮಾಡ್ತಾರ.. ಇದೆಲ್ಲ ರಾಜಕಾರಣದಾಗ ನಡಿತಾದ. ಆದ್ರ. ನಾವು ಶಾಸಕರಾದ ಮ್ಯಾಲ ಜನರಿಗೆ ಎನ್‌ ಸೌಕರ್ಯ ಕೊಡಬೇಕು ಅದೆಲ್ಲಾ ಕೋಡ್ತಾ ಇದ್ದಿವಿ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ