ಕಲಬುರಗಿ: ಉದ್ಯಮ ಸ್ಥಾಪನೆ ಮೂಲಕ ಹೈದರಾಬಾದ್ ಕರ್ನಾಟಕ ಭಾಗದ ಮಹಿಳೆಯರು ಯಶಸ್ಸು ಸಾಧಿಸಲು ಮುಂದಾಗಬೇಕೆಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಮೀರಾ ಸುರೇಶ ಪಂಡಿತ್ ಸಲಹೆ ನೀಡಿದರು.
ಇಲ್ಲಿನ ಎಚ್ಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳೆಯರಿಗಾಗಿ ಉದ್ಯಮ ಆಯ್ಕೆ, ರಫ್ತು ಹಾಗೂ ವ್ಯಾಪಾರ ಉತ್ತೇಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು. ಅಂದಾಗಲೇ ಅವರು ತಾವು ಹಿಡಿದ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಾರೆ. ಉದ್ಯೋಗ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಬೆಳೆಯಲು ಪುರುಷರ ಸಹಕಾರದ ಅಗತ್ಯವಿದೆ. ಆ ನಿಟ್ಟಿನಲ್ಲಿ ಅವರಿಗೆ ಸಹಕಾರ ನೀಡುವ ಮೂಲಕ ಮಾನವೀಯತೆ ಮೆರೆಯಬೇಕೆಂದರು.
ಹೆಣ್ಣು ಮತ್ತು ಗಂಡು ಸರಿಸಮಾನವಾಗಿ ಬೆಳೆಯುವಲ್ಲಿ ಮನುಷ್ಯತ್ವದ ಕೊರತೆ ಕಾಣುತ್ತಿದೆ ಎಂದು ವಿಷಾದಿಸಿದ ಅವರು, ಮಹಿಳೆಯರು ತಮ್ಮ ಆತ್ಮವಿಶ್ವಾಸದ ಮಟ್ಟ ಸದೃಢಗೊಳಿಸಿಕೊಳ್ಳಬೇಕು. ಮಹಿಳೆಯರು ಮನೆಯ ಗೋಡೆಗಳಿಗಷ್ಟೇ ಸೀಮಿತವಲ್ಲ. ಗುರಿ ಇಟ್ಟುಕೊಂಡು ಅದರ ಸಾಧನೆಗೆ ಪ್ರಾಮಾಣಿಕ ಯತ್ನ ನಡೆಸಿದರೆ ಯಶಸ್ಸು ಖಂಡಿತ ದೊರಕುತ್ತದೆ.
ಕೆ.ಲ್ಯಾಂಪ್ ಅಧ್ಯಕ್ಷೆ ಜ್ಯೋತಿ ಎಸ್.ಕಾಡಾದಿ ಮಾತನಾಡಿ, ಇಲ್ಲಿನ ಮಹಿಳೆಯರು ಸ್ಥಾಪಿಸುತ್ತಿರುವ ಉದ್ಯಮಗಳ ಕುರಿತು ಮಾಹಿತಿ ನೀಡಿದರು. ಎಚ್ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಮಹಿಳೆಯರು ಉದ್ಯಮ ಸ್ಥಾಪನೆಗೆ ಮುಂದಾದರೆ ಎಚ್ಕೆಸಿಸಿಐ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಡೆಪ್ಯುಟಿ ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್, ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ಕಲಬುರಗಿ ಲೇಡಿಸ್ ಅಸೋಸಿಯೇಷನ್ ಮ್ಯಾನ್ಯುಫ್ಯಾಕ್ಚರರ್ಸ್ ಪಾರ್ಕ್ ಸಂಯುಕ್ತಾಶ್ರಯದಲ್ಲಿ ನಡೆದ ಈ ಸಮಾರಂಭದಲ್ಲಿ ಕೆ.ಲ್ಯಾಂಪ್ ಉಪಾಧ್ಯಕ್ಷೆ ಶೋಭಾ ಬಾಣಿ ಸ್ವಾಗತಿಸಿದರು. ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರಶಾಂತ ಮಾನಕರ್ ಇತರರು ಇದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಅಮನ್, ಪ್ಯಾಟ್ರಿಕ್ ವಿಡ್ಮನ್, ಪಿಎಸ್ಬಿ ಶಾಸ್ತ್ರಿ, ಎಂ.ಎಸ್.ಶ್ರೀಧರನ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಕೆ.ಲ್ಯಾಂಪ್ ಪದಾಧಿಕಾರಿಗಳು ಮತ್ತು ನೂರಾರು ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ದರು.