ಕಲಬುರಗಿ: ಕೇಂದ್ರ ಸರಕಾರ ಹೆಚ್ಚುವರಿ ತೊಗರಿ ಖರೀದಿಗೆ ಅನುಮತಿ ನೀಡದೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಕೇಂದ್ರ ಸರಕಾರವೇ ತೊಗರಿ ಖರೀದಿಸಬೇಕು. ಶೇ 40ರಷ್ಟು ಮಾತ್ರ ತೊಗರಿ ಖರೀದಿಯಾಗಿದ್ದು, ಇನ್ನೂ ಭಾರಿ ಪ್ರಮಾಣದ ತೊಗರಿ ಖರೀದಿ ಬಾಕಿ ಉಳಿದಿದೆ. ಕೇಂದ್ರ ಸರಕಾರ ಖರೀದಿ ಮಿತಿ ಹೇರಿದ್ದರಿಂದ ತೊಗರಿ ಬೆಳೆಗಾರರು ತೊಂದರೆ ಎದುರಿಸುವಂತಾಗಿದೆ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರದ ಸೂಚನೆಯಂತೆ 16.4 ಲಕ್ಷ ಕ್ವಿಂಟಾಲ್ ತೊಗರಿಯನ್ನು ಖರೀದಿ ಮಾಡಲಾಗಿದೆ. ಆದರೆ, ನಾವು 40ಲಕ್ಷ ಕ್ವಿಂಟಾಲ್ ಖರೀದಿಗೆ ಬೇಡಿಕೆ ಸಲ್ಲಿಸಿದ್ದೇವೆ. ಇದುವರೆಗೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇನ್ನೆರಡು ದಿನಗಳಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಶುರು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.