ಆ್ಯಪ್ನಗರ

ಹೊಲದಲ್ಲಿ ರಾತ್ರೋರಾತ್ರಿ 'ಅಕ್ರಮ' ರಸ್ತೆ ನಿರ್ಮಾಣ

ಕೃಷ್ಣಾ ಭಾಗ್ಯ ಜಲ ನಿಗಮ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಅಧಿಕಾರಿಗಳು ವ್ಯಕ್ತಿಯೊಬ್ಬರ ಹೊಲದಲ್ಲಿ ಅವರ ಪೂರ್ವಾನುಮತಿ ಪಡೆಯದೆ ರಾತ್ರೋರಾತ್ರಿ ರಸ್ತೆ ನಿರ್ಮಿಸುವ ಮೂಲಕ ದೌರ್ಜನ್ಯ ನಡೆಸಿರುವ ಘಟನೆ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್‌.ಎನ್‌. ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Vijaya Karnataka 13 Dec 2017, 5:31 pm

ಮಹೇಶ್‌ ಕುಲಕರ್ಣಿ

Vijaya Karnataka Web construction of illegal road overnight
ಹೊಲದಲ್ಲಿ ರಾತ್ರೋರಾತ್ರಿ 'ಅಕ್ರಮ' ರಸ್ತೆ ನಿರ್ಮಾಣ


ಕಲಬುರಗಿ:
ಕೃಷ್ಣಾ ಭಾಗ್ಯ ಜಲ ನಿಗಮ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಅಧಿಕಾರಿಗಳು ವ್ಯಕ್ತಿಯೊಬ್ಬರ ಹೊಲದಲ್ಲಿ ಅವರ ಪೂರ್ವಾನುಮತಿ ಪಡೆಯದೆ ರಾತ್ರೋರಾತ್ರಿ ರಸ್ತೆ ನಿರ್ಮಿಸುವ ಮೂಲಕ ದೌರ್ಜನ್ಯ ನಡೆಸಿರುವ ಘಟನೆ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್‌.ಎನ್‌. ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಹೊರವಲಯದ ಸರ್ವೆ ನಂ.407ರ ವ್ಯಾಪ್ತಿಯ 5 ಎಕರೆ 16 ಗುಂಟೆ ಜಮೀನಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ರಸ್ತೆ ನಿರ್ಮಿಸಲಾಗಿದೆ. ವಿಚಿತ್ರವೆಂದರೆ, ಈ ರಸ್ತೆ ಯಾವುದೇ ಗಮ್ಯ ತಲುಪುವ ಉದ್ದೇಶ ಹೊಂದಿರದೆ, ಅದೇ ಹೊಲದಲ್ಲಿ ಅಂತ್ಯಗೊಂಡಿದೆ. ಆ ಮೂಲಕ ಕೆಬಿಜೆಎನ್ನೆಲ್‌ ಅಧಿಕಾರಿಗಳು ಬಿಲ್‌ ಎತ್ತಿ ಹಾಕುತ್ತಿರುವ ಸಾಧ್ಯತೆ ಇದೆ ಎಂದು ರೈತ ಸಂಘಟನೆಯ ಮುಖಂಡರೊಬ್ಬರು ಹೇಳುತ್ತಾರೆ.

ಇಷ್ಟಕ್ಕೂ, ಒಂದು ರಸ್ತೆ ನಿರ್ಮಾಣಕ್ಕೆ ಮೊದಲು ಅದರ ರೂಪುರೇಷೆ, ಅಂದಾಜು ವೆಚ್ಚ, ವಿಸ್ತೀರ್ಣದ ಕುರಿತು ಟೆಂಡರ್‌ ಪ್ರಕಟಣೆ ಹೊರಡಿಸಲಾಗುತ್ತದೆ. ಅದರಲ್ಲೂ ರೈತರ ಹೊಲದಲ್ಲಿ ನಿರ್ಮಿಸಬೇಕಾದರೆ ಅದಕ್ಕೊಂದು ಮಹತ್ವದ ಕಾರಣ ಇರಬೇಕಲ್ಲದೆ, ರೈತರಿಂದ ಭೂಮಿ ಖರೀದಿಸಬೇಕಾದರೆ ಸುಪ್ರಿಂಕೋರ್ಟ್‌ ಇತ್ತೀಚೆಗೆ ನಿಗದಿಪಡಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆದರೆ, ಇದ್ಯಾವುದನ್ನೂ ಪಾಲಿಸದೆ ದಲಿತ ರೈತನ ಹೊಲದಲ್ಲಿ ರಸ್ತೆ ನಿರ್ಮಿಸಲಾಗಿದೆ. ಮಹತ್ವದ ಅಂಶವೆಂದರೆ, ಯಾವ ಕಾರಣಕ್ಕಾಗಿ ಈ ಗುರಿ ತಲುಪದ ರಸ್ತೆ ನಿರ್ಮಿಸಲಾಗಿದೆ ಎಂಬುದಕ್ಕೆ ಕಾಡಾ ಅಧಿಕಾರಿಗಳು ಸಕಾರಾತ್ಮಕ ಸ್ಪಂದನೆ ನೀಡುತ್ತಿಲ್ಲ ಎಂದು ಹೊಲದ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ದೌರ್ಜನ್ಯ:

ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡ ದಲಿತ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರಕಾರಿ ಭೂಮಿಯಲ್ಲಿ ಭೂ ಸಾಗುವಳಿಗೆ ಅವಕಾಶ ಮಾಡಿಕೊಡಲು ಅಕ್ರಮ-ಸಕ್ರಮ ಅನುಸರಿಸುತ್ತಾ ಬಂದಿವೆ. ಆದರೆ, ಹಿಪ್ಪರಗಾ ಎಸ್‌.ಎನ್‌. ಗ್ರಾಮದಲ್ಲಿ ಕೆಲವು ಪ್ರಭಾವಿ ಗುತ್ತಿಗೆದಾರರು ಕೆಬಿಜೆಎನ್ನೆಲ್‌ ಎಂಜಿನಿಯರ್‌ಗಳ ಜತೆಗೂಡಿ ರಸ್ತೆ ನಿರ್ಮಿಸಿ ತಮ್ಮ ಕುಟುಂಬಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಹೊಲದ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪರಿಹಾರದ ಆಮಿಷ ಒಡ್ಡಿದರು...!

ಕಾಡಾ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒಂದಾಗಿ ದಲಿತ ರೈತನ ಹೊಲದಲ್ಲಿ ದಿಢೀರನೆ ರಸ್ತೆ ನಿರ್ಮಿಸಿದ್ದಕ್ಕೆ ಆ ರೈತರ ಕುಟುಂಬದಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಮೇಲಾಗಿ, ತಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 'ಅಟ್ರಾಸಿಟಿ' ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ರೈತನ ಕುಟುಂಬದವರು ನೀಡಿದ್ದಾರೆ. ಇದರಿಂದ ಕಂಗಾಲಾದ ಅಧಿಕಾರಿಗಳು ತಕ್ಷಣ ಈ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಅಷ್ಟೋ-ಇಷ್ಟೋ ಪರಿಹಾರ ನೀಡುವ ಆಮಿಷ ಒಡ್ಡುವ ಮಾತನ್ನೂ ಆಡಿದ್ದಾರೆ ಎನ್ನಲಾಗುತ್ತಿದೆ.

ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಅನುಮತಿ ಪಡೆದ ನಂತರ ಮಾತ್ರ ಸಂಪರ್ಕ ರಸ್ತೆ ನಿರ್ಮಿಸಬೇಕೆಂಬ ನಿಯಮವಿದೆ. ರೈತರ ಅನುಮತಿ ಇಲ್ಲದೆ ಅವರ ಭೂಮಿ ಕಸಿದುಕೊಳ್ಳುವಂತಿಲ್ಲ. ಹಾಗೇನಾದರೂ ಆಗಿದ್ದರೆ ತಪ್ಪು ಸರಿಪಡಿಸಿಕೊಳ್ಳಲಾಗುವುದು.

-ಶರಣಬಸಪ್ಪ ಬೆಣ್ಣೂರ, ಹಿರಿಯ ಅಧಿಕಾರಿ, ಕಾಡಾ-ಕೆಬಿಜೆಎನ್ನೆಲ್‌

ನಮ್ಮ ಹೊಲದಾಗ ರೋಡ್‌ ಮಾಡ್ಲಾಕ ನಮಗೊಂದು ಮಾತೂ ಕೇಳಿಲ್ಲ. ನಾವು ಕಂಪ್ಲೆಂಟ್‌ ಮಾಡ್ತೀವಿ ಅಂತ ಗೊತ್ತಾದ ಮ್ಯಾಲ, ಏನ್‌ ಬೇಕು ಕೇಳ್ರೀ... ಕೊಡ್ತೀವಿ ಅಂತಾರ. ಅರ್ಧ ಎಕರಿ ಹೊಲ ಹಾಳ್‌ ಮಾಡ್ಯಾರ. ನಮಗ ನಮ್ಮ ಹೊಲ ಮೊದಲ ಹ್ಯಾಂಗಿತ್ತೋ, ಹಂಗ ಮಾಡಿ ಕೊಡ್ಬೇಕು...

-ಹೊಲದ ಮಾಲೀಕರು, ಹಿಪ್ಪರಗಾ ಎಸ್‌.ಎನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ