ಆ್ಯಪ್ನಗರ

ಖರ್ಗೆ- ಜಾಧವ್‌ ಭವಿಷ್ಯ ಇಂದು ಬಹಿರಂಗ

ತೀವ್ರ ಕುತೂಹಲ ಮೂಡಿಸಿರುವ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆಯಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿಯ ಡಾ. ಉಮೇಶ್‌ ಜಾಧವ್‌ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಮಧ್ಯಾಹ್ನದ ವೇಲೆಗೆ ಗೊತ್ತಾಗಲಿದೆ.

Vijaya Karnataka 23 May 2019, 5:00 am
ಕಲಬುರಗಿ :ತೀವ್ರ ಕುತೂಹಲ ಮೂಡಿಸಿರುವ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ನಡೆಯಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿಯ ಡಾ. ಉಮೇಶ್‌ ಜಾಧವ್‌ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಮಧ್ಯಾಹ್ನದ ವೇಲೆಗೆ ಗೊತ್ತಾಗಲಿದೆ.
Vijaya Karnataka Web countdown to two results on the same day
ಖರ್ಗೆ- ಜಾಧವ್‌ ಭವಿಷ್ಯ ಇಂದು ಬಹಿರಂಗ


ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದ್ದು, ಲೋಕಸಭೆ ಜತೆಗೆ ಚಿಂಚೋಳಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣಾ ಮತ ಎಣಿಕೆಯೂ ನಡೆಯಲಿದ್ದು, ಹೈಟೆನ್ಷನ್‌ ದಿನವಾಗಿ ಪರಿಣಮಿಸಿದೆ. ಹನ್ನೊಂದು ಸಲ ನಿರಂತರವಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೊಂದು ಮಹಾ ಸವಾಲಿನ ಚುನಾವಣೆಯಾಗಿತ್ತು. ಕೈ ಪಕ್ಷದ ಶಾಸಕರಾಗಿದ್ದ ಡಾ. ಜಾಧವ್‌ ರಾಜೀನಾಮೆ ನೀಡಿ ಅವರ ವಿರುದ್ಧ ತೊಡೆ ತಟ್ಟಿರುವುದು ಕದನ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಒಂದಕ್ಕೆ ರಾಜೀನಾಮೆ ನೀಡಿ ಇನ್ನೊಂದನ್ನು ಗೆಲ್ಲಬೇಕೆಂದೇ ಬಿಜೆಪಿ ಹುರಿಯಾಳು ಆಗಿರುವ ಜಾಧವ್‌ಗೂ ಇದು ಅಗ್ನಿಪರೀಕ್ಷೆ ದಿನ. ಖರ್ಗೆ ವಕೀಲರಾಗಿದ್ದರೆ, ಜಾಧವ್‌ ವೈದ್ಯರು.

ದೊಡ್ಡ ಮಟ್ಟದ ಉಮೇದು, ಕುತೂಹಲ, ನಿರೀಕ್ಷೆ ಮತ್ತು ಕೌತುಕವನ್ನು ಗುಲ್ಬರ್ಗ ಲೋಕಸಭೆ ಕ್ಷೇತ್ರ ಉಂಟು ಮಾಡಿದೆ. ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಮಾತಿನಲ್ಲಿ ಕಟ್ಟಿ ಹಾಕುವ ಛಾತಿ ಹೊಂದಿರುವ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕಣದಲ್ಲಿರುವುದು.

* ಅರೆ ಸೇನಾ ಪಡೆ

ಹೈ ವೋಲ್ಟೇಜ್‌ ಕ್ಷೇತ್ರ ಇದಾಗಿದ್ದರಿಂದ ಅರೆ ಸೇನಾ ಪಡೆಯ 130 ಜವಾನರು ಗುಲ್ಬರ್ಗ ಕ್ಷೇತ್ರಕ್ಕೆ ಬಂದು ಇಳಿದಿದ್ದಾರೆ. ಅಲ್ಲದೆ, 2ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಬಳಕೆ ಮಾಡಲಾಗುತ್ತಿದೆ. ಫಲಿತಾಂಶ ಪ್ರಕಟವಾದ ಬಳಿಕ ಸಾರ್ವಜನಿಕ ಮೆರವಣಿಗೆ, ವಿಜಯೋತ್ಸಾಹಗಳಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ನಿಷೇಧ ಹೇರಲಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಕ್ಷಣದ ಕುತೂಹಲ ಹೊರ ಹೋಗದಂತೆ ತಡೆಯಲು ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ.

ಬುಧವಾರ ಬೆಳಗ್ಗೆ ರಾಜ್ಯದ ಡಿಜಿಪಿ ಅವರು ಗುಲ್ಬರ್ಗ ಅತ್ಯಂತ ಸೂಕ್ಷ್ಮ ಕೇಂದ್ರವೆಂದು ಘೋಷಣೆ ಮಾಡಿ ಹೆಚ್ಚುವರಿಯಾಗಿ ನಿಗಾವಹಿಸುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದಾರೆ. ಇದೆಲ್ಲವೂ ಕ್ಷೇತ್ರದಲ್ಲಿನ ಬೂದಿ ಮುಚ್ಚಿದಂತಿರುವ ಮನಸ್ಥಿತಿ ತೋರಿಸುತ್ತದೆ. ಪರಿಸ್ಥಿತಿ ಎಷ್ಟು ಬಿಗುವಿನಿಂದ ಕೂಡಿದೆ ಎಂದರೆ ಬಾಯಿ ಬಿಚ್ಚಿ ಹೀಗೆ ಎಂದು ಅಂದಾಜು ಹೇಳುವಂತೆಯೇ ಇಲ್ಲ. ಅಷ್ಟು ಸೂಕ್ಷ್ಮ ಮತ್ತು ಗಂಭೀರವಾಗಿದೆ.

ಗುಲ್ಬರ್ಗ ಉತ್ತರವೇ ಫೈನಲ್‌

ಗುಲ್ಬರ್ಗ ಉತ್ತರ ಕ್ಷೇತ್ರದ ಮತಗಳು ಮತ್ತು ಕೋಲಿ ಸಮಾಜದ ಮತಗಳ ಮೇಲೆ ಉಭಯ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಗುಲ್ಬರ್ಗ ಉತ್ತರ ಕ್ಷೇತ್ರದ ಮತಗಳನ್ನು ಹೆಚ್ಚಾಗಿ ಕಾಂಗ್ರೆಸ್‌ ನೆಚ್ಚಿಕೊಂಡಿದೆ. ಇಲ್ಲಿ ಪಡೆಯುವ ಮತಗಳ ಮೇಲೆ ಖರ್ಗೆ ಭವಿಷ್ಯ ನಿರ್ಧಾರವಾಗಲಿದೆ. ದೊಡ್ಡ ಪ್ರಮಾಣದಲ್ಲಿ ಕೈ ಹಿಡಿದರೆ ಖರ್ಗೆ ಸೇಫ್‌ ಎಂದು ರಾಜಕೀಯ ವಿಶ್ಲೇಷಕರ ಮಾತು.

ವೀರಶೈವ ಲಿಂಗಾಯತ, ಕೋಲಿ ಸಮಾಜದ ಮತಗಳನ್ನು ಯಾರು ಹೆಚ್ಚಿಗೆ ಪಡೆಯುತ್ತಾರೆ ಎನ್ನುವುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಕೋಲಿ ಸಮುದಾಯದ ಮತಗಳನ್ನು ಜಾಧವ್‌ ಹೆಚ್ಚು ನಿರೀಕ್ಷಿಸಿದ್ದು, ಇದಾದರೆ ಗೆಲುವಿನ ದಡ ಸೇರಲಿದ್ದಾರೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಕೋಲಿ ಸಮಾಜದ ಮತಗಳನ್ನು ಹೆಚ್ಚಾಗಿ ಬುಟ್ಟಿಗೆ ಹಾಕಿಕೊಳ್ಳಲು ಮೀಸಲಾತಿ ದಾಳ ಎಸೆದಿದ್ದ ಬಿಜೆಪಿ, ಗೆದ್ದರೆ ಈ ಸಮುದಾಯಕ್ಕೆ ಎಸ್‌ಟಿ ಸ್ಥಾನ ಕಲ್ಪಿಸುವುದಾಗಿ ವ್ಯಾಪಕ ಪ್ರಚಾರ ಮಾಡಿದೆ. ಇದು ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗಲಿದೆ.

ಅಫಜಲಪುರ, ಜೇವರ್ಗಿ, ಗುಲ್ಬರ್ಗ ದಕ್ಷಿಣದಲ್ಲಿ ಹೆಚ್ಚು ಮತ ಬರಲಿವೆ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದ್ದರೆ, ಗುಲ್ಬರ್ಗ ಉತ್ತರ, ಚಿತ್ತಾಫುರ, ಗುಲ್ಬರ್ಗ ಗ್ರಾಮೀಣ,ಸೇಡಂನಲ್ಲಿ ಲೀಡ್‌ ಬರುತ್ತದೆ ಎಂದು ಕಾಂಗ್ರೆಸ್‌ ನಿರೀಕ್ಷಿಸಿದೆ. ಆದರೆ ಅಫಜಲಪುರ, ಜೇವರ್ಗಿಯಲ್ಲಿ ಕಾಂಗ್ರೆಸ್‌ ಶಾಸಕರಿದ್ದರಿಂದ ಹೆಚ್ಚು ಮತ ಬರುತ್ತವೆ ಎನ್ನುವುದು ಕಾಂಗ್ರೆಸ್‌ಗೆ ಬಲವಾದ ನಂಬಿಕೆ ಇಟ್ಟುಕೊಂಡಿದೆ. ಆದರೆ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದು, ಹೆಚ್ಚು ಮತಗಳನ್ನು ಬಿಜೆಪಿ ನಿರೀಕ್ಷಿಸಿದೆ.

ಕಾಂಗ್ರೆಸ್‌ನಿಂದ ಸಿಡಿದು ಹೋಗಿ ಬಿಜೆಪಿ ಸೇರಿರುವ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ್‌ ಚಿಂಚಿನಸೂರ, ಡಾ. ಎ.ಬಿ. ಮಲಕರೆಡ್ಡಿ ಪ್ರಭಾವ ಎಷ್ಟು ಕೆಲಸ ಮಾಡಿದೆ ಎನ್ನುವುದನ್ನೂ ಈ ಚುನಾವಣಾ ಫಲಿತಾಂಶ ಒರೆಗೆ ಹಚ್ಚಲಿದೆ.

ಈ ಮತಗಳು ಒಂದು ಪಕ್ಷದ ಹೆಚ್ಚಾಗಿ ವಾಲಿವೆ ಎಂಬ ಬಗ್ಗೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಎಲ್ಲ ಕಾರಣಗಳಿಂದ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಸುತ್ತಲೇ ಎಲ್ಲರ ಮನಸ್ಸುಗಳು ಗಿರಕಿ ಹೊಡೆಯುತ್ತಿದೆ. ಯಾವಾಗ ಬೆಳಕಾಗುತ್ತದೆ, ಯಾವಾಗ ಕೌಂಟಿಂಗ್‌ ಶುರುವಾಗುತ್ತದೆ ಎಂಬ ಕಾತರ ಹೆಚ್ಚಾಗಿದೆ. ರಿಸಲ್ಟ್‌ ಯಾರ ಪರವಾಗಿ ಬರಲಿದೆ ಎನ್ನುವುದು ತುದಿಗಾಲಲ್ಲಿ ನಿಲ್ಲಿಸಿದೆ.


ಚಿಂಚೋಳಿ ರಿಸಲ್ಟ್‌ ಯಾರಿಗೆ ಲಕ್‌?

ಜಿಲ್ಲೆಯ ಚಿಂಚೋಳಿ ಮೀಸಲು ಮತಕ್ಷೇತ್ರದ ಉಪ ಚುನಾವಣಾ ಫಲಿತಾಂಶವೂ ಗುರುವಾರವೇ ಪ್ರಕಟವಾಗಲಿದ್ದು, ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್‌ ಜಾಧವ್‌ ಮತ್ತು ಕಾಂಗ್ರೆಸ್‌ನ ಸುಭಾಷ ರಾಠೋಡ್‌ ಭವಿಷ್ಯವೂ ಬಹಿರಗಂವಾಗಲಿದೆ.

ಶಾಸಕರಾಗಿದ್ದ ಡಾ.ಉಮೇಶ್‌ ಜಾಧವ್‌ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ಉಪ ಚುನಾವಣೆ ನಡೆದಿದ್ದು, ಕೈಯಿಂದ ಕ್ಷೇತ್ರ ಜಾರಿ ಹೋಗದಂತೆ ಜಾಧವ್‌ ಬೆವರು ಸುರಿಸಿದ್ದರೆ, ಪಕ್ಷ ಗೆದ್ದಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಸಹ ವ್ಯಾಪಕ ಶ್ರಮ ಹಾಕಿದ್ದಾರೆ. ಯಾರದು ಎಷ್ಟು ಪ್ರಮಾಣದಲ್ಲಿ ವರ್ಕೌಟ್‌ ಆಗಿದೆ ಎನ್ನುವುದು ಗುರುವಾರ ಅನಾವರಣಗೊಳ್ಳಲಿದೆ. ಅವಿನಾಶ್‌ ವೈದ್ಯಕೀಯ ಪದವೀಧರವಾಗಿದ್ದರೆ, ರಾಠೋಡ್‌ ಎಲ್‌ಎಲ್‌ಎಂ ಸ್ನಾತಕೋತ್ತರ ಪವೀಧರ. ಕ್ಷೇತ್ರದ ಜನರು ಯಾರಿಗೆ ಹೆಚ್ಚು ಬೆಂಬಲಿಸಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಜಾಧವ್‌ ವಿರುದ್ಧ ಆಪರೇಶನ್‌ ಕಮಲ, ಕೋಟ್ಯಂತರ ರೂ.ಗಳಿಗೆ ಬಿಜೆಪಿಗೆ ಮಾರಾಟವಾಗಿದ್ದಾರೆ, ಉಪ ಚುನಾವಣೆ ಅನಗತ್ಯವಾಗಿ ಹೇರಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ವಾಗ್ದಾಳಿ ನಡೆಸಿದ್ದರು. ಆದರೆ ಚಿಂಚೋಳಿ ಅಭಿವೃದ್ಧಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಕಡೆಗಣಿಸಿದ್ದಾರೆ, ಸಮ್ಮಿಶ್ರ ಸರಕಾರದಲ್ಲಿ ಕೆಲಸ ಆಗುತ್ತಿಲ್ಲ, ಅದಕ್ಕಾಗಿ ರಾಜೀನಾಮೆ ನೀಡಿರುವೆ ಎಂದು ಉಮೇಶ್‌ ಜಾಧವ್‌ ಪ್ರತ್ಯುತ್ತರ ನೀಡಿದ್ದರು. ಇದು ಮತದಾರರ ಮೇಲೆ ಎಷ್ಟು ಪರಿಣಾಮ ಬೀರಿದೆ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗಲಿದೆ.

ಕ್ಷೇತ್ರದಲ್ಲಿ ಲಿಂಗಾಯತ, ಬಂಜಾರಾ ಮತ್ತು ಕೋಲಿ ಸಮುದಾಯದ ಮತಗಳನ್ನು ಬಿಜೆಪಿ ಹೆಚ್ಚಾಗಿ ನೆಚ್ಚಿಕೊಂಡಿದ್ದರೆ, ಅಲ್ಪಸಂಖ್ಯತರು, ಪರಿಶಿಷ್ಟರ ಮತಗಳನ್ನು ಹೆಚ್ಚಾಗಿ ನಿರೀಕ್ಷಿಸಿದ್ದು, ರಾಠೋಡ್‌ ಸಹ ಬಂಜಾರಾ ಸಮುದಾಯಕ್ಕೆ ಸೇರಿದವರಾಗಿದ್ದು ಈ ಸಮುದಾಯದಿಂದಲೂ ಹೆಚ್ಚು ಮತ ಬರುತ್ತವೆ ಎನ್ನುವುದು ಕಾಂಗ್ರೆಸ್‌ ಪ್ರತಿಪಾದನೆ. ಬಿಜೆಪಿ ಕಾಂಗ್ರೆಸ್‌ ಅಭ್ಯರ್ಥಿಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಮತ ವಿಭಜನೆ ಆಗಲಿವೆ. ಆದರೆ ಎಷ್ಟು ಯಾರಿಗೆ ವಿಭಜನೆಯಾಗಿವೆ ಎನ್ನುವುದು ಕುತೂಹಲ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ