ಆ್ಯಪ್ನಗರ

ಕೋಟ್ಯಂತರ ರೂ. ತೆರಿಗೆ ವಂಚನೆ ಜಾಲ ಪತ್ತೆ

ತೆರಿಗೆ ವಂಚಿಸುವ ಇರಾದೆಯಿಂದ ಕೋಟ್ಯಂತರ ರೂ. ಮೌಲ್ಯದ ದಿನ ಬಳಕೆಯ ವಸ್ತುಗಳನ್ನು ಬಚ್ಚಿಟ್ಟಿದ್ದ ಗೋದಾಮುಗಳನ್ನು ಇಲ್ಲಿನ ಕಿರಾಣಾ ಬಜಾರ್‌ ಪ್ರದೇಶದಲ್ಲಿ ವಾಣಿಜ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

Vijaya Karnataka 16 Mar 2019, 10:42 pm
ಕಲಬುರಗಿ:ತೆರಿಗೆ ವಂಚಿಸುವ ಇರಾದೆಯಿಂದ ಕೋಟ್ಯಂತರ ರೂ. ಮೌಲ್ಯದ ದಿನ ಬಳಕೆಯ ವಸ್ತುಗಳನ್ನು ಬಚ್ಚಿಟ್ಟಿದ್ದ ಗೋದಾಮುಗಳನ್ನು ಇಲ್ಲಿನ ಕಿರಾಣಾ ಬಜಾರ್‌ ಪ್ರದೇಶದಲ್ಲಿ ವಾಣಿಜ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Vijaya Karnataka Web crores detecting tax fraud networks
ಕೋಟ್ಯಂತರ ರೂ. ತೆರಿಗೆ ವಂಚನೆ ಜಾಲ ಪತ್ತೆ


ಗೋಯಲ್‌ ಟ್ರೇಡಿಂಗ್‌ ಕಂಪನಿ ಹೆಸರಿನಲ್ಲಿ ಹೈದರಾಬಾದ್‌, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಂದ ಸಿಗರೇಟು, ಗುಟ್ಕಾ, ಪಾನ್‌ ಮಸಾಲಾ, ಸೇರಿದಂತೆ ಹಲವು ನಮೂನೆಯ ತಂಬಾಕು ಉತ್ಪನ್ನಗಳು ಲಾರಿಗಳಲ್ಲಿ ರಾತ್ರಿ ಹೊತ್ತು ತಂದು ಈ ರಹಸ್ಯ ಗೋದಾಮುಗಳಲ್ಲಿ ಮುಚ್ಚಿಡಲಾಗುತ್ತಿದೆ ಎನ್ನಲಾಗಿದೆ.

ಈ ಕುರಿತು ಸುಳಿವು ದೊರೆತ ಬೆನ್ನಲ್ಲಿಯೇ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಶುಕ್ರವಾರ ದಿಢೀರ್‌ ದಾಳಿ ನಡೆಸಿದ್ದಾರೆ. ಈ ವೇಳೆ, ಟ್ರೇಡಿಂಗ್‌ ಕಂಪನಿಯ ಯಾವ ಪ್ರತಿನಿಧಿಯೂ ರಹಸ್ಯ ಗೋದಾಮುಗಳ ಬೀಗ ತೆಗೆಯಲು ಸುತಾರಾಂ ಒಪ್ಪಲಿಲ್ಲ. ಹೀಗಾಗಿ, ಅಧಿಕಾರಿಗಳು ಮುಂದಿನ ಹಂತದ ತಪಾಸಣೆಗಾಗಿ ಕಾಯ್ದಿಟ್ಟು ಗೋದಾಮುಗಳ ಶೆಟರ್‌ಗಳನ್ನು ಸೀಲ್‌ ಮಾಡಿಟ್ಟು ಇಲಾಖೆಯ ಉನ್ನತಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಏನಿದು ದಂಧೆ?

ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಮ ಪ್ರಮಾಣದಲ್ಲಿ ತೆರಿಗೆ ಪಾವತಿಯಾಗುವ ಜಿಎಸ್‌ಟಿ ಜಾರಿಗೆ ಬಂದಾಗಿನಿಂದಲೂ ತೆರಿಗೆ ವಂಚಿಸುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ. ಆದರೆ, ಈ ಟ್ರೇಡಿಂಗ್‌ ಕಂಪನಿ ಮೇಲ್ನೋಟದಲ್ಲಿ ತೆರಿಗೆ ಪಾವತಿಸುವ ಕಂಪನಿ ಎಂದು ಬಿಂಬಿಸಿಕೊಳ್ಳುತ್ತಿದ್ದಾಗ್ಯೂ, ರಾತ್ರಿ ಹೊತ್ತು ಲಾರಿಗಳಲ್ಲಿ ತುಂಬಿಕೊಂಡು ನಗರ ಪ್ರವೇಶಿಸುವ ತೆರಿಗೆ ರಹಿತ ದಿನಬಳಕೆಯ ಸಾಮಗ್ರಿಗಳನ್ನು ರಹಸ್ಯ ಗೋದಾಮುಗಳಲ್ಲಿ ತುಂಬಿಡಲಾಗುತ್ತಿದೆ ಎಂಬ ಮಾತಿದೆ. ಇನ್ನೊಂದೆಡೆ, ಸರಕಾರಕ್ಕೆ ಜಿಎಸ್‌ಟಿ ಪಾವತಿಸುವ ಸದ್ವಿನಯಶೀಲ ಕಂಪನಿ ಎಂದು ಬಿಂಬಿಸಿಕೊಳ್ಳುತ್ತಲೇ ಗೋದಾಮುಗಳಲ್ಲಿ ಅಡಗಿಸಿಟ್ಟಿರುವ ಸಾಮಗ್ರಿಗಳನ್ನು ತೆರಿಗೆ ವ್ಯಾಪ್ತಿಗೆ ತರದೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾಗಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಖರೀದಿಯ ಖಾತೆಯೇ ಇಲ್ಲ!

ಶುಕ್ರವಾರ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಪರಿಶೀಲನೆ ನಡೆಸಿದಾಗ ಬಹುತೇಕ ವಸ್ತುಗಳ ಖರೀದಿ ದಾಖಲಿಸುವ ಖಾತೆಗಳೇ ಇಲ್ಲದಿರುವುದು ಪತ್ತೆಯಾಗಿದೆ.

ಈ ಕುರಿತು ಅಧಿಕಾರಿಗಳು ನಡೆಸಿದ ನಿರಂತರ ಕ್ರಾಸ್‌ ಇಂಟರಾಗೇಷನ್‌ ಸಂದರ್ಭದಲ್ಲಿಯೂ ಕಂಪನಿಯ ಪ್ರತಿನಿಧಿಗಳು ಬಾಯಿಬಿಟ್ಟಿಲ್ಲ ಎನ್ನಲಾಗಿದೆ. ಹೀಗಾಗಿ, ಇದೊಂದು ಕೋಟ್ಯಂತರ ರೂ. ಮೊತ್ತದ ತೆರಿಗೆ ವಂಚನೆಯ ಭಾರಿ ಜಾಲ ಇರಬಹುದು ಎಂಬ ಶಂಕೆಗೆ ದಾರಿ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ