ಆ್ಯಪ್ನಗರ

ಹೊಸ ತಾಲೂಕುಗಳಿಗೆ ಸೌಲಭ್ಯ ಒದಗಿಸಲು ಗಡುವು: ಹೆಬ್ಬಾಳ್‌

ಸರಕಾರ ಜಾರಿಗೆ ತಂದ ಹೊಸ ತಾಲೂಕುಗಳಲ್ಲಿ ಸರಿಯಾದ ಸೌಲಭ್ಯ, ಸಿಬ್ಬಂದಿ ಕೊರತೆಯನ್ನು ಒಂದು ತಿಂಗಳಲ್ಲಿ ನೀಗಿಸದಿದ್ದರೆ ಹೋರಾಟ ಮಾಡುವುದಾಗಿ ಮಾಜಿ ಶಾಸಕ ವಿಶ್ವನಾಥ ಪಾಟೀಲ್‌ ಹೆಬ್ಬಾಳ್‌ ತಿಳಿಸಿದರು.

Vijaya Karnataka 23 Jun 2019, 9:30 pm
ಕಲಬುರಗಿ :ಸರಕಾರ ಜಾರಿಗೆ ತಂದ ಹೊಸ ತಾಲೂಕುಗಳಲ್ಲಿ ಸರಿಯಾದ ಸೌಲಭ್ಯ, ಸಿಬ್ಬಂದಿ ಕೊರತೆಯನ್ನು ಒಂದು ತಿಂಗಳಲ್ಲಿ ನೀಗಿಸದಿದ್ದರೆ ಹೋರಾಟ ಮಾಡುವುದಾಗಿ ಮಾಜಿ ಶಾಸಕ ವಿಶ್ವನಾಥ ಪಾಟೀಲ್‌ ಹೆಬ್ಬಾಳ್‌ ತಿಳಿಸಿದರು.
Vijaya Karnataka Web deadline to facilitate new taluks hebbal
ಹೊಸ ತಾಲೂಕುಗಳಿಗೆ ಸೌಲಭ್ಯ ಒದಗಿಸಲು ಗಡುವು: ಹೆಬ್ಬಾಳ್‌


ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯಾದ್ಯಂತ ಹೊಸದಾಗಿ 50 ತಾಲೂಕುಗಳು ಜಾರಿಗೆ ಬಂದು ಒಂದು ವರ್ಷ ಗತಿಸಿ ಹೋಗಿವೆ. ಆದರೆ, ಈ ನೂತನ ತಾಲೂಕುಗಳಿಗೆ ಇಂದಿನವರೆಗೂ ಸರಿಯಾದ ಸೌಲಭ್ಯಗಳಿಲ್ಲ ಎಂದು ದೂರಿದರು. ಪ್ರಸ್ತುತ ಹಳೇ ನಾಡ ಕಚೇರಿಗಳಲ್ಲಿ ಮಾತ್ರ ನಾಮಫಲಕ ಬದಲಾಯಿಸಿ ಅಲ್ಲಿಯೇ ಹೊಸ ಕಚೇರಿ ಆರಂಭಿಸಿದ್ದು ಬಿಟ್ಟರೆ ಹೊಸ ಕಚೇರಿಗಳು ಆರಂಭವಾಗಿಲ್ಲ. ಸಿಬ್ಬಂದಿ ನೇಮಕವಾಗಿಲ್ಲ. ಇದರಿಂದ ಜನರ ಕೆಲಸಗಳೇ ಆಗುತ್ತಿಲ್ಲ ಎಂದು ಆರೋಪಿಸಿದರು.

ಒಂದು ಲಕ್ಷ ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ತಾಲೂಕುಗಳಲ್ಲಿ ಗ್ರೇಡ್‌-2 ತಹಸೀಲ್ದಾರ್‌, ಹೆಚ್ಚಿರುವ ತಾಲೂಕುಗಳಲ್ಲಿ ಗ್ರೇಡ್‌ 1 ತಹಸೀಲ್ದಾರ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ದುರದೃಷ್ಟವೆಂದರೆ ಈ ತಹಸೀಲ್ದಾರ್‌ಗಳಿಗೆ ಇಲ್ಲಿವರೆಗೂ ವಾಹನ ವ್ಯವಸ್ಥೆಯೇ ಇಲ್ಲವಾಗಿದೆ. ಇದರಿಂದ ಇವರಿಂದ ಅಭಿವೃದ್ಧಿ ಕಾರ್ಯಗಳನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಪ್ರಸ್ತುತ ತಹಸೀಲ್ದಾರರು ತಾಲೂಕು ಸ್ಥಳಕ್ಕೆ ಹೋಗಬೇಕಾದರೆ ಬಸ್‌ನಲ್ಲಿಯೋ ಇಲ್ಲವೇ ತಮ್ಮ ಬೈಕ್‌ ಮೇಲೆ ಹೋಗಬೇಕಾದ ಪರಿಸ್ಥಿತಿಯಿದೆ ಎಂದರು.

ನೂತನ ತಾಲೂಕುಗಳಲ್ಲಿ ತಹಸಿಲ್‌ ಕಚೇರಿ ನಿರ್ಮಾಣಕ್ಕೆ ಇದುವರೆಗೂ ನಿವೇಶನವನ್ನೂ ಗುರುತಿಸಲು ಆಗುತ್ತಿಲ್ಲ. ಮುಖ್ಯವಾಗಿ ಬೇಕಾದ ಕಚೇರಿಗಳೇ ಆರಂಭವಾಗದಿದ್ದರಿಂದ ಜನರು ಹೊಸ ತಾಲೂಕಿನಿಂದ ಹಳೇ ತಾಲೂಕುಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ, ಒಂದು ಕೆಲಸ ಪೂರ್ಣಕೆಲಸವಾಗಲು ಬೇಕಾದ ಸಿಬ್ಬಂದಿ, ಅಧಿಕಾರಿಗಳು ತಾಲೂಕಿನಲ್ಲಿ ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಯವರಿಗೆ ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಅಷ್ಟರಲ್ಲಿ ಹೊಸ ತಾಲೂಕುಗಳ ಸಮಸ್ಯೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ರೂಪುರೇಷೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಮಚಂದ್ರ ಜಾಧವ್‌, ಡಿಎಸ್‌ ನಾಮ್‌ದಾರ್‌, ತಿಪ್ಪಣ್ಣ ಇಂಗನ್‌ಕರ್‌, ಜಲೀಲ್‌ ಅಹಮದ್‌ ಇತರರಿದ್ದರು.

ಕೇವಲ ಚುನಾವಣೆ, ಓಟ್‌ ಬ್ಯಾಂಕ್‌ಗಾಗಿ ಹೊಸ ತಾಲೂಕುಗಳನ್ನು ವಿಂಗಡಿಸಿದಂತಾಗಿದೆ. ಅನೇಕ ಹಳ್ಳಿಗಳನ್ನು ಅವೈಜ್ಞಾನಿಕವಾಗಿ ತಾಲೂಕುಗಳಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ತಾಲೂಕು ಹತ್ತಿರವಿದ್ದರೂ ದೂರದ ಪ್ರದೇಶಕ್ಕೆ ಕೆಲಸಗಳಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಸಿದಂತಾಗಿದೆ.

- ವಿಶ್ವನಾಥ ಪಾಟೀಲ್‌ ಹೆಬ್ಬಾಳ್‌, ಮಾಜಿ ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ