ಕಲಬುರಗಿ: ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ರೂ. 18 ಸಾವಿರ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಹಾಗೂ ವಿವಿಧ ಸಂಘಟನೆಗಳು ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದವು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ, ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಿಲ್ಲಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಪ್ರತಿ ತಿಂಗಳು ರೂ. 3000 ಹಾಗೂ ಬಿಸಿಯೂಟ ನೌಕರರಿಗೆ ಕೇವಲ ರೂ. 1100 ಗೌರವ ಧನ ನೀಡುವ ಮೂಲಕ ಶೋಷಣೆ ಮಾಡಲಾಗುತ್ತಿದೆ. ಕೇವಲ 10 ತಿಂಗಳು ಮಾತ್ರ ನೀಡುತ್ತಿರುವುದರಿಂದ ಬದುಕು ಕಷ್ಟಕರವಾಗಿದೆ ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳಲ್ಲಿ ಸುಮಾರು 1 ಕೋಟಿಗೂ ಅಧಿಕ ನೌಕರರು ಕೆಲಸ ಮಾಡುತಿದ್ದಾರೆ. ಅವರಲ್ಲಿ ಐಸಿಎಇಎಸ್ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ 25 ಲಕ್ಷ ಅಂಗನವಾಡಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಕಿಯರು ಕೆಲಸ ಮಾಡುತಿದ್ದಾರೆ. ಎನ್ಎಚ್ಎಂನಲ್ಲಿ ಸೇವೆ ಸಲ್ಲಿಸುತ್ತಿರುವ 10 ಲಕ್ಷ ಆಶಾ ಕಾರ್ಯಕರ್ತೆಯರು, ಮಧ್ಯಾಹ್ನದ ಬಿಸಿಯೂಟ (ಎಂಡಿಎಂ) ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ 28 ಲಕ್ಷ ಕಾರ್ಯಕರ್ತೆಯರು ಇದ್ದಾರೆ. ಎಸ್ಎಸ್ಎ ಮತ್ತಿತರ ಯೋಜನೆಯಲ್ಲೂ ಸುಮಾರು ಜನ ಕೆಲಸ ಮಾಡುತ್ತಿದ್ದಾರೆ. ಸದರಿ ಯೋಜನೆಗಳಿಂದ ಸುಮಾರು ಜನರು ಲಾಭ ಪಡೆಯುತ್ತಿದ್ದಾರೆ. ಆದರೆ, ಅನುಷ್ಠಾನದಲ್ಲಿ ಮುಖ್ಯ ಪಾತ್ರ ವಹಿಸುವ ನೌಕರರನ್ನು ನಿರ್ಲಕ್ಷಿಸಲಾಗುತ್ತಿದೆ. ಸುಮಾರು 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2013ರ ಮೇ 17, 18ರಂದು ನಡೆದ 45ನೇ ಭಾರತ ಕಾರ್ಮಿಕ ಸಮ್ಮೇಳನವು ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರನ್ನು ದೇಶದ ಕಾರ್ಮಿಕ ಕಾಯ್ದೆಗಳ ಪರಿಭಾಷೆಯ 'ವಕ್ಸರ್ಸ್' ಅಥವಾ 'ಕಾರ್ಮಿಕ'ರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಲಾಗಿತ್ತು. ಈ ಹಿಂದಿನ ಯುಪಿಎ ನೇತೃತ್ವದ ಕೇಂದ್ರ ಸರಕಾರ ಬೇಡಿಕೆಗಳಿಗೆ ಸ್ಪಂದನೆ ನೀಡಿರಲಿಲ್ಲ. ಕನಿಷ್ಠ ಈಗಿನ ಎನ್ಡಿಎ ಸರಕಾರವಾದರೂ ನಮ್ಮ ಬೇಡಿಕೆಗಳನ್ನು ಆಲಿಸುವ ಭರವಸೆ ಇತ್ತು. ಆದರೆ, ಇದೂ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದ್ದಾರೆ.
* ಬಜೆಟ್ನಲ್ಲಿ ಅನುದಾನ ಕಡಿತ: ಖಂಡನೆ
ಐಸಿಡಿಎಸ್, ಎನ್ಎಚ್ಎಂ, ಎಂಡಿಎಂನಂತಹ ಜನಕಲ್ಯಾಣ ಯೋಜನೆಗಳಿಗಾಗಿ ಬಜೆಟ್ನಲ್ಲಿ ಅನುದಾನ ಹೆಚ್ಚಿಸುವ ಬದಲು ಕಡಿತಗೊಳಿಸಲಾಗುತ್ತಿದೆ. ಕೇಂದ್ರ ಸರಕಾರದ ಈ ನಡೆ ನೌಕರರು ಮಾತ್ರವಲ್ಲದೇ ಪ್ರಜ್ಞಾವಂತರಲ್ಲೂ ಆತಂಕ ಸೃಷ್ಟಿಸಿದೆ. ಕಾರ್ಮಿಕ ವಿರæೂೕಧಿ ಮಾರ್ಪಾಟುಗಳನ್ನು ಮಾಡುವ ಮೂಲಕ ಕಾರ್ಪೋರೇಟ್ ಉದ್ದಿಮೆದಾರರ ಎನ್ಜಿಒಗಳಿಗೆ ವಹಿಸಲು ತಯಾರಿ ನಡೆಸುತ್ತಿದೆ. ಆಧಾರ್ ಮತ್ತು ಬ್ಯಾಂಕ್ ಖಾತೆಗಳ ಜೋಡಣೆಯ ನೆಪದಲ್ಲಿ ಫಲಾನುಭವಿಗಳಿಗೆ ನಗದು ಹಣ ವರ್ಗಾವಣೆ ಕ್ರಮ ಜಾರಿಗೊಳಿಸುವ ಮೂಲಕ ಅತ್ಯಂತ ಮಹತ್ವದ ಸಾರ್ವತ್ರಿಕ ಆಹಾರ ಭದ್ರತೆಯಂತಹ ಯೋಜನೆಗೆ ಕೊಡಲಿಪೆಟ್ಟು ಹಾಕುವ ಹುನ್ನಾರ ನಡೆದಿದೆ ಎಂದು ಟೀಕಿಸಿದ್ದಾರೆ.
ಮುಖಂಡರಾದ ಎಂ.ಜಿ. ಸಂತೋಷ್ ಹಿರವೆ, ಚಂದಮ್ಮ, ಶಿವಲಿಂಗಮ್ಮ, ಲಕ್ಷ್ಮಿ ಹರಸೂರ, ಎಂ.ಜಿ.ರಾಘವೇಂದ್ರ, ಭಾಗ್ಯಶ್ರೀ, ಅನಸೂಬಾಯಿ, ನಾಗವೇಣಿ, ಶಾರದಾ, ಲಕ್ಷ್ಮಿ, ವಿದ್ಯಾವತಿ, ಕವಿತಾ, ಚನ್ನಮ್ಮ, ಸಿದ್ದಮ್ಮ, ಶೋಭಾ, ಮಂಜುಳಾ. ಸಾವಿತ್ರಿ, ಮೋನಮ್ಮ, ಬಸಮ್ಮ, ಮಹಾದೇವಿ, ಲಕ್ಷ್ಮಿಬಾಯಿ ಸೇರಿ ಇತರರು ಪಾಲ್ಗೊಂಡಿದ್ದರು.
ಕಾರ್ಮಿಕರಿಗೆ ಜೀವನಯೋಗ್ಯ ಮಾಸಿಕ ವೇತನ, ವಿವಿಧ ಸಾಮಾಜಿಕ ಭದ್ರತೆ, ನಿವೃತ್ತಿ ವೇತನ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡಬೇಕು.
- ಎಸ್.ಎಂ. ಶರ್ಮಾ, ಜಿಲ್ಲಾಧ್ಯಕ್ಷ
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ
ಮಾಸಿಕ ರೂ.3 ಸಾವಿರ ಪಿಂಚಣಿ ನೀಡಿ
ರೂ. 18 ಸಾವಿರ ಮಾಸಿಕ ವೇತನ ನಿಗದಿಪಡಿಸಿ
ನೌಕರರ ಬೇಡಿಕೆಗೆ ಸ್ಪಂದಿಸಿದ್ದಲ್ಲಿ ಉಗ್ರ ಹೋರಾಟ: ಎಚ್ಚರಿಕೆ