ಕಲಬುರಗಿ: ಮಕ್ಕಳಲ್ಲಿರುವ ಪ್ರತಿಭೆ ಎಂಬುದು ಗುಪ್ತಗಾಮಿನಿ ಇದ್ದಂತೆ. ಅದನ್ನು ಗುರುತಿಸಿ ಬೆಳಕಿಗೆ ತರುವ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕೆಂದು ಇಲ್ಲಿನ ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾರ್ಯದರ್ಶಿ ಡಾ. ವಿ.ಜಿ.ಅಂದಾನಿ ಹೇಳಿದರು.
ಫೈನ್ ಆರ್ಟ್ ಸೊಸೈಟಿ ವತಿಯಿಂದ ಕಾಲೇಜಿನ ಆವರಣದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಒಂದೊಂದು ಮಗುವಿನಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸುವ ತಾಳ್ಮೆ ಮತ್ತು ಗ್ರಹಿಕೆ ದೊಡ್ಡವರಲ್ಲಿ ಇರಬೇಕು. ಅಂದಾಗಲೇ ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸುವುದು ಸುಲಭವಾಗುತ್ತದೆ ಎಂದರು.
ಜೇವರ್ಗಿ, ಚಿತ್ತಾಪುರ, ಅಫಜಲಪುರ, ಕಮಲಾಪುರ ಹಾಗೂ ಇನ್ನಿತರ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
1ರಿಂದ 4, 5ರಿಂದ 7, 8ರಿಂದ10 ಮತ್ತು 11ರಿಂದ 12 ವರ್ಷದ ಮಕ್ಕಳ ಪ್ರತ್ಯೇಕ ಗುಂಪು ರಚಿಸಿ ಸ್ಪರ್ಧೆಗಳನ್ನು ನಡೆಸಲಾಯಿತು. ಇದೇ ಮೊದಲ ಬಾರಿ ಪ್ರಥಮ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಾಚಾರ್ಯ ಪೂರ್ಣಿಮಾ ಪಾಟೀಲ್, ಎಸ್.ರಾಜಶೇಖರ, ಟಿ. ದೇವೇಂದ್ರ, ಧರ್ಮಾನಂದ, ಶಶಿಕಾಂತ, ಎಚ್.ವಿ.ಮಂತಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿ, ಚಿತ್ರಕಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪೆನ್ಸಿಲ್ ಚೌಕಟ್ಟಿಗೆ ಬಣ್ಣದ ಉಡುಗೆ
ಐಡಿಯಲ್ ಫೈನ್ ಆರ್ಟ್ ಕಾಲೇಜಿನಲ್ಲಿ ನಡೆದ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಲವು ಆಯಾಮಗಳಿಂದ ಗಮನ ಸೆಳೆಯುವಂತಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಬಹುತೇಕರು ಮೊದಲು ಪೆನ್ಸಿಲ್ ಹಿಡಿದು ಒಂದಾದ ನಂತರ ಒಂದು ಚಿತ್ರದ ಚೌಕಟ್ಟು ರೂಪಿಸಿಕೊಳ್ಳುತ್ತಿದ್ದರು. ನಂತರ ತಮ್ಮ ಕಲ್ಪನೆಗೆ ನಿಲುಕುವ ಬಣ್ಣವನ್ನು ಚೌಕಟ್ಟಿನೊಳಗೆ ಅಲಂಕರಿಸಿ ಸಂಭ್ರಮಿಸುತ್ತಿದ್ದರು. ಹೀಗೆ ಪ್ರಕೃತಿ, ಶಿಕ್ಷಣ, ಪರಿಸರ ಮಾಲಿನ್ಯ ತಡೆ, ಭಾರತ ಒಂದೇ, ನಾಳಿನ ಕರ್ನಾಟಕ ಹೀಗೆ ಹಲವು ವಿಷಯಗಳ ಕುರಿತು ಬಣ್ಣದ ಬಳಪ, ಸ್ಕೆಚ್ಪೆನ್, ಕುಂಚ ಬಳಸಿ ಚಿತ್ರಗಳನ್ನು ರಚಿಸಿ ಮಕ್ಕಳು ಖುಷಿ ಪಟ್ಟರು. ಅದರಲ್ಲೂ, ಜಲವರ್ಣ ಚಿತ್ರ, ರೇಖಾಚಿತ್ರ, ವ್ಯಂಗ್ಯಚಿತ್ರ ರಚಿಸುವಲ್ಲಿಯೂ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.