ಕಲಬುರಗಿ: ಪಾಲಿಕೆಯಲ್ಲಿ ಅವಕಾಶವಿದ್ದರೆ ನಗರದಲ್ಲಿ ಒಂದು 'ಮಿನಿ ರಂಗಮಂದಿರ' ಸ್ಥಾಪಿಸಲಾಗುವುದು ಎಂದು ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ್ ಮೋದಿ ಭರವಸೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ, ರಂಗವೃಕ್ಷ ನೃತ್ಯ ಸೇವಾ ಸಂಘ, ಇಂಡಿಯನ್ ಕಲ್ಚರಲ್ ಸೆಂಟರ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಸಿದ್ಧಾರ್ಥ ವಿಹಾರ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ವಿಶೇಷ ಘಟಕ ಯೋಜನೆ ಅಡಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ 'ರಂಗ ತರಬೇತಿ ಶಿಬಿರ'ವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಇಂಥದ್ದೊಂದು 'ರಂಗಮಂದಿರ'ದ ಜರೂರತ್ತು ಇದೆ. ಈಗಿರುವ ರಂಗಮಂದಿರದಲ್ಲಿ ಬಹುತೇಕ ರಾಜಕೀಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತವೆ. ಆದರೆ, ಕಲೆ, ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ಜಾನಪದ ಪ್ರಕಾರಗಳನ್ನು ಉಳಿಸುವ ಉದ್ದೇಶ ಇದೆ. ಇದಕ್ಕಾಗಿ, ಪ್ರತ್ಯೇಕ ರಂಗಮಂದಿರ ನಿರ್ಮಿಸಿದಲ್ಲಿ ಭಾರಿ ಪ್ರಯೋಜನ ಆಗಲಿದೆ ಎಂದು ಹೇಳಿದರು.
ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡಲು ಪಾಲಿಕೆಯಲ್ಲಿ ಅವಕಾಶ ಇದೆಯೇ ಎಂಬುದನ್ನು ಮೊದಲು ತಾವು ಪರಿಶೀಲಿಸುವುದಾಗಿ ಅವರು ವಾಗ್ದಾನ ಮಾಡಿದರು.
ಹೈ-ಕ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆದರೆ, ಅವುಗಳಿಗೆ ಸೂಕ್ತ ವೇದಿಕೆ ಸಿಗದೇ ಇರುವುದರಿಂದ ಬೆಳ್ಳಿಪರದೆಯ ಮೇಲೆ ಮಿಂಚಿಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಕಲಾವಿದರಾಗಿದ್ದ ಸುಮಾರು ಜನರು ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ. ಇದೇ ರೀತಿಯಲ್ಲಿ ನಮ್ಮವರಿಗೂ ಪ್ರತಿಭೆ ಹೊರಹಾಕಲು ವೇದಿಕೆ ಸಿಗಬೇಕು. ಕನ್ನಡ ಚಿತ್ರೋದ್ಯಮ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರುನಾಥ ಬಿ.ಹೂಗಾರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಸಂದೀಪ್, ಸಿದ್ಧಾರ್ಥ ವಿಹಾರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಾರುತಿರಾವ್ ಮಾಲೆ, ರಂಗಕರ್ಮಿ ಪ್ರಭಾಕರ ಜೋಶಿ, ವಿಠ್ಠಲ ದೊಡ್ಡಮನಿ, ಭವಾನಿಸಿಂಗ್ ಠಾಕೂರ, ಶೇಖ್ ಮಾಸ್ತರ್, ಈಶ್ವರ ಇಂಗನ್ ಇತರರಿದ್ದರು.