ಆ್ಯಪ್ನಗರ

ಕಾಂಗ್ರೆಸ್‌ ವಿಸರ್ಜನೆಗೆ ಮಾಜಿ ಸಿಎಂ ಶೆಟ್ಟರ್‌ ಸಲಹೆ

ದೇಶದ ಜನತೆ ತಮ್ಮ ಸುರಕ್ಷತೆಗಾಗಿ ಮತದಾರರು ನರೇಂದ್ರ ಮೋದಿ ಅವರ ಸರಕಾರವನ್ನು ಪ್ರಚಂಡ ಬಹುಮತದ ಮುಖೇನ ಗೆಲ್ಲಿಸಿ ತಂದಿದ್ದಾರೆ. ಹೀನಾಯ ಸ್ಥಿತಿಗೆ ತಲುಪಿರುವ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

Vijaya Karnataka 12 Jun 2019, 7:07 pm
ಕಲಬುರಗಿ :ದೇಶದ ಜನತೆ ತಮ್ಮ ಸುರಕ್ಷತೆಗಾಗಿ ಮತದಾರರು ನರೇಂದ್ರ ಮೋದಿ ಅವರ ಸರಕಾರವನ್ನು ಪ್ರಚಂಡ ಬಹುಮತದ ಮುಖೇನ ಗೆಲ್ಲಿಸಿ ತಂದಿದ್ದಾರೆ. ಹೀನಾಯ ಸ್ಥಿತಿಗೆ ತಲುಪಿರುವ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆಗ್ರಹಿಸಿದರು.
Vijaya Karnataka Web former cm shettar advises congress dissolution
ಕಾಂಗ್ರೆಸ್‌ ವಿಸರ್ಜನೆಗೆ ಮಾಜಿ ಸಿಎಂ ಶೆಟ್ಟರ್‌ ಸಲಹೆ


ಮಂಗಳವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ನಾನೇ ಮನವಿ ಮಾಡುತ್ತೇನೆ. ಕಾಂಗ್ರೆಸ್‌ ವಿಸರ್ಜಿಸಿ, ಇಲ್ಲವೇ ಮುಂದೆ ಜನರೇ ವಿಸರ್ಜನೆ ಮಾಡುತ್ತಾರೆ ಎಂದು ಕುಹಕವಾಡಿದರು.

ಮೈತ್ರಿಕೂಟ ಕಟ್ಟಿಕೊಂಡು ದೇಶದಲ್ಲಿ ಜಾತಿ ಸಮೀಕರಣ ಮಾಡಿ ಲೋಕಸಭೆಯಲ್ಲಿ ಅಧಿಕಾರ ಹಿಡಿಯಲು ಹವಣಿಸಿದ್ದ ಕಾಂಗ್ರೆಸ್‌ ಮತ್ತು ಘಟಬಂದನ್‌ಗೆ ಜನ ಸರಿಯಾದ ಬುದ್ಧಿ ಕಲಿಸಿದ್ದಾರೆ ಎಂದ ಅವರು, ಮೋದಿ ಸುನಾಮಿಯಲ್ಲಿ ಪ್ರತಿ ಪಕ್ಷ ವು ಕೊಚ್ಚಿಕೊಂಡು ಹೋಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಮಂಡ್ಯದಲ್ಲಿ ನಿಖಿಲ್‌ ಸೋಲು ಪ್ರತಿಪಕ್ಷಗಳಿಗೆ ದೊಡ್ಡ ಪಾಠ ಎಂದರು.

ಸಮ್ಮಿಶ್ರ ಸರಕಾರ ಸತ್ತಿದೆ

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಜೀವಂತ ಇದೆ ಏನ್ರಿ ಎಂದು ಪ್ರಶ್ನಿಸಿದ ಅವರು, ಸರಕಾರ ಸತ್ತು ಹೋಗಿದೆ. ಮುಖ್ಯಮಂತ್ರಿಗಳು ಕೇವಲ ಮೂರು ಜಿಲ್ಲೆಗಳಿಗೆ ಸೀಮಿತವಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿ ಜನರಲ್ಲಿ ಬೇಸರ ಉಂಟು ಮಾಡುತ್ತಿದ್ದಾರೆ. ರಾತ್ರಿ 12 ಗಂಟೆಗೆ ಬಂದು ಬೆಳಗ್ಗೆ 5 ಗಂಟೆಗೆ ಹೋದರೆ ಅದು ಗ್ರಾಮ ವಾಸ್ತವ್ಯನಾ ಎಂದು ಪ್ರಶ್ನಿಸಿದರು.

ಈ ಹಿಂದೆ ಮಾಡಿರುವ ಗ್ರಾಮ ವಾಸ್ತವ್ಯ ಹಾಗೂ ಲಕ್ಷಾಂತರ ರೂ. ಖರ್ಚು ಮಾಡಿರುವ ಕುರಿತು ಕೂಡಲೇ ಸರಕಾರ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದರು.

ಸಂಪುಟ ವಿಸ್ತರಣೆ


ಸಂಪುಟ ಪುನಃ ರಚನೆ ಮಾಡಿ ಸರಕಾರವನ್ನು ಉಳಿಸಿಕೊಳ್ಳಲು ಹೊರಟಿರುವ ಸಿಎಂ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ತಂತ್ರ ನಡೆಯುವುದಿಲ್ಲ. ಮೂರು ಜನರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಆರು ಜನ ಅಸಮಧಾನ ಹೊಂದುತ್ತಾರೆ. ಅವರ ಸಿಟ್ಟಿನಿಂದ ಹೇಗೆ ಬಚಾವಾಗುತ್ತಾರೆ. ಮತ್ತೆ ಅದೇ ರಾಗ ಅದೇ ಹಾಡು. ಈ ಸಮ್ಮಿಶ್ರ ಸರಕಾರ ಬಹಳ ದಿನ ನಡೆಯೋದಿಲ್ಲ ಎಂದು ಶೆಟ್ಟರ್‌ ಹೇಳಿದರು.

ಜಿಂದಾಲ್‌ ಕಂಪೆನಿ ಮತ್ತು ನಿಮ್ಮ(ಸರಕಾರ) ನಡುವೆ ಆದ ಅಗ್ರಿಮೆಂಟ್‌ ತೋರಿಸಿ. ಮಾರ್ಕೆಟ್‌ನಲ್ಲಿ ಭೂಮಿಯ ಬೇಲೆ ಒಂದು ಕೋಟಿ ರೂಪಾಯಿ ಇದೆ. ಸರಕಾರ ಒಂದು ಲಕ್ಷ ಚಿಲ್ಲರೆಗೆ ಮಾರಾಟ ಮಾಡೋಕೆ ಮುಂದಾಗಿರೋದನ್ನ ನೋಡೋದ್ರೆ ಹಗಲು ದರೋಡೆ ಮಾಡೋಕೆ ಮುಂದಾಗಿದ್ದಾರೆ ಎಂದು ಆಪಾದಿಸಿದರು.

ಖರ್ಗೆಗೆ ಎಐಸಿಸಿ ಸ್ಥಾನ ಕೊಡಲಿ

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಉನ್ನತ ಅಧಿಕಾರವೆಲ್ಲಾ ತಮ್ಮ ಕುಟುಂಬದ ಸದಸ್ಯರದಲ್ಲಿಯೇ ಇಟ್ಟುಕೊಳ್ಳುತ್ತಾರೆ. ಹೊರಗಿನವರಿಗೆ ಅಲ್ಲಿ ಅವಕಾಶವಿಲ್ಲ. ಒಂದು ವೇಳೆ ಆಂತರಿಕ ಪ್ರಜಾಪ್ರಭುತ್ವ ಇದ್ದರೆ ಕಾಂಗ್ರೆಸ್‌ ಎಐಸಿಸಿ ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಡಲಿ ನೋಡೋಣ. ಅಧಿಕಾರವೆಲ್ಲಾ ಗಾಂಧಿ ಕುಟುಂಬದ ಹೊರಗಿನವರಿಗೆ ಕೊಡೋದೇ ಇಲ್ಲ. ಆದ್ದರಿಂದ ಪಕ್ಷ ವಿಸರ್ಜನೆ ಮಾಡೋದು ಸೂಕ್ತ ಎಂದು ಶೆಟ್ಟರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ