ಆ್ಯಪ್ನಗರ

ವಿಲಕ್ಷಣ ಅಪಘಾತ: ಭಾರಿ ಬಿರುಗಾಳಿಗೆ ಹಾರಿದ ನೀರಿನ ಟ್ಯಾಂಕ್, ಚಲಿಸುತ್ತಿದ್ದ ಬೈಕ್‌ಗೆ ಅಪ್ಪಳಿಸಿ ಬಿದ್ದ ಸವಾರ

ಜೇವರ್ಗಿ ಪಟ್ಟಣದ ಮಹಾಲಕ್ಷ್ಮಿ ಹೋಟಲ್‌ ವೃತ್ತದಲ್ಲಿ ಸಂಜೆ ಬೀಸಿದ ಬಿರುಗಾಳಿಗೆ ಮನೆಯ ಮೇಲಿದ್ದ ಸಿಂಟೆಕ್ಸ್‌ ನೀರಿನ ಟ್ಯಾಂಕೊಂದು ಹಾರಿ ಉರುಳಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಬೈಕಿಗೆ ಅಪ್ಪಳಿಸಿದೆ. ಇದರಿಂದ ಬೈಕ್‌ ಸವಾರ ಕೆಲ ಹೊತ್ತು ರಸ್ತೆಯಲ್ಲಿಯೇ ಮಳೆಯಲ್ಲಿ ಹಾಗೆ ಬಿದ್ದಿದ್ದ. ಪ್ರಜ್ಞೆ ಬಂದ ಬಳಿಕ ಆತನೇ ಎದ್ದು ಬಂದ. ಅಲ್ಲಿಯವರೆಗೆ ಮಳೆಯಲ್ಲಿ ಸುತ್ತಲಿನ ಪ್ರದೇಶದ ಜನ ನೋಡುತ್ತಿದ್ದ ನಿಂತಿದ್ದರು ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

Vijaya Karnataka 22 May 2019, 8:35 am

ಹೈಲೈಟ್ಸ್‌:

  • ಬಿರುಗಾಳಿಗೆ ಹಾರಿಹೋದ ಮನೆ ಪತ್ರಾಗಳು.
  • ಶಹಾಬಾದ್, ಚಿತ್ತಾಪುರ ತಾಲೂಕಿನಲ್ಲೂ ಬಿರುಗಾಳಿ, ಆಲಿಕಲ್ಲು ಮಳೆ
  • ಅಕಾಲಿಕ ಮಳೆ, ಸಿಡಿಲು ಬಡಿದು ಇಬ್ಬರಿಗೆ ಗಾಯ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಕಲಬುರಗಿ: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಬಿರುಗಾಳಿ, ಆಲಿಕಲ್ಲು ಮಳೆಯಿಂದಾಗಿ ಸಿಡಿಲು ಬಡಿದು ಹಲವರಿಗೆ ಗಾಯಗಳಾಗಿವೆ. ಗಾಳಿ ಮಳೆಯಿಂದ ಅಲ್ಲಲ್ಲಿ ಮನೆಯ ಪತ್ರಾಸ್‌ ಹಾರಿ ಹೋಗಿವೆ. ಶಹಾಬಾದ್‌ನಲ್ಲಿ ಸಿಡಿಲಿಗೆ, ಜೇವರ್ಗಿಯಲ್ಲಿ ಮನೆ ಮೇಲಿನ ನೀರಿನ ಟ್ಯಾಂಕ್‌ ಬಡಿದು ಇಬ್ಬರಿಗೆ ಗಾಯಗಳಾಗಿವೆ. ಉಳಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ 15-20 ನಿಮಿಷದ ರಭಸದ ಮಳೆಯಾಗಿದೆ. ಕಾದು ಕೆಂಡವಾಗಿದ್ದ ಬಿಸಿಲ ನೆಲ ತಂಪಾಗಿದೆ.
ಈ ಮಳೆಯಿಂದ ಭಾರಿ ಬಿಸಿಲಿನ ಝಳ ಕಡಿಮೆಯಾಗಿದೆ. ಜನರಲ್ಲಿ ತುಸು ನೆಮ್ಮದಿ, ರೈತರ ಮೊಗದಲ್ಲಿ ತುಸು ನಗು ಮಿನುಗಿದೆ. ಬಹುತೇಕರು ಬೇಸಿಗೆಯ ಮಳೆಯನ್ನು ಸ್ವಾಗತಿಸಿದ್ದಾರೆ. ಯಾವುದೇ ಜೀವ ಹಾನಿ ಆಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ಮೇಲು ಸೇತುವೆ ಬಳಿಯಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಬಿದ್ದಿವೆ. ಅದಲ್ಲದೆ, ಬಿದ್ದಾಪುರ ಕಾಲೊನಿ, ಹೈಕೋರ್ಟ್‌ ಪ್ರದೇಶ, ರಾಮಮಂದಿರ, ಸರದಾರ ವಲ್ಲಭಬಾಯಿ ಪಟೇಲ್‌, ಜಗತ್‌ ವೃತ್ತಗಳಲ್ಲಿ, ಬಸ್‌ನಿಲ್ದಾಣ, ಸರಕಾರಿ ಆಸ್ಪತ್ರೆ, ಸುಪರ್‌ ಮಾರುಕಟ್ಟೆ ಪ್ರದೇಶದಲ್ಲಿ 10 ನಿಮಿಷ ಸಾಧಾರಣ ಮಳೆಯಾಗಿದೆ.

ಆದರೆ, ನಗರದ ಹೊರ ವಲಯದ ಡಬರಾಬಾದ ಕ್ರಾಸ್‌, ಆಳಂದ ನಾಕಾ, ಸುಲ್ತಾನಪುರ ಕ್ರಾಸ್‌ಗಳಲ್ಲಿ ಭಾರಿ ಬಿರುಗಾಳಿ ಬೀಸಿದ ಪರಿಣಾಮ ಅಲ್ಲಲ್ಲಿ ಮನೆಯ ಮೇಲಿನ ತಗಡಿನ ಪತ್ರಾಸ್‌ಗಳು, ಅಂಗಡಿಯ ಬಿದುರಿನ ಮುಂಗಟ್ಟು ಹಾರಿ ಹೋಗಿವೆ.

ಜೇವರ್ಗಿ ಪಟ್ಟಣದ ಮಹಾಲಕ್ಷ್ಮಿ ಹೋಟಲ್‌ ವೃತ್ತದಲ್ಲಿ ಸಂಜೆ ಬೀಸಿದ ಬಿರುಗಾಳಿಗೆ ಮನೆಯ ಮೇಲಿದ್ದ ಸಿಂಟೆಕ್ಸ್‌ ನೀರಿನ ಟ್ಯಾಂಕೊಂದು ಹಾರಿ ಉರುಳಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಬೈಕಿಗೆ ಅಪ್ಪಳಿಸಿದೆ. ಇದರಿಂದ ಬೈಕ್‌ ಸವಾರ ಕೆಲ ಹೊತ್ತು ರಸ್ತೆಯಲ್ಲಿಯೇ ಮಳೆಯಲ್ಲಿ ಹಾಗೆ ಬಿದ್ದಿದ್ದ. ಪ್ರಜ್ಞೆ ಬಂದ ಬಳಿಕ ಆತನೇ ಎದ್ದು ಬಂದ. ಅಲ್ಲಿಯವರೆಗೆ ಮಳೆಯಲ್ಲಿ ಸುತ್ತಲಿನ ಪ್ರದೇಶದ ಜನ ನೋಡುತ್ತಿದ್ದ ನಿಂತಿದ್ದರು ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಶಹಾಬಾದ ವರದಿ:
ಶಹಾಬಾದ ನಗರ ಸೇರಿದಂತೆ ವಾಡಿ, ನಾಲವಾರ ವಲಯದಲ್ಲಿ ಸಂಜೆ 4 ಗಂಟೆಯಿಂದ ಗುಡುಗು ಸಹಿತ ಭಾರಿ ಅಲ್ಪ ಮಳೆ ಬಿತ್ತು. ಆದರೆ, ಜೋರಾದ ಬಿರುಗಾಳಿ ಕ್ಷಣ ಕಾಲ ಭಯ ಹುಟ್ಟಿಸಿತ್ತು.

ಇದೇ ವೇಳೆ ಸಿಡಿಲಿನಿಂದ ಮಹಿಳೆಯೊಬ್ಬರಿಗೆ ಗಾಯವಾಗಿದೆ.ಮುತ್ತಗಾ ಗ್ರಾಮದ ಮಹಿಳೆ ಸರಸ್ವತಿ ಸಿದ್ದಣ್ಣ ಹಳ್ಳಿ (70) ಮನೆಯಲ್ಲಿಯೇ ಇದ್ದಾಗ ಸಿಡಿಲು ಬಡಿದಿದೆ. ಕೂಡಲೇ ಗ್ರಾಮದ ವೈದ್ಯ ಡಾ.ಮಹೇಂದ್ರ ಕೋರಿ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಶಹಾಬಾದ್‌ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಗುಳನಾಗಾಂವ, ಬಾಲು ನಾಯಕ ತಾಂಡಾ, ಮಹಾನಗರ ತಾಂಡಾ ಭಾಗದಲ್ಲಿ ಸಣ್ಣ ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಇದರಿಂದ ಸುಣ್ಣದ ಕಲ್ಲಿನ ಪರಿಸಿ ನಾಡಿನಲ್ಲಿ ಕಾದು ಕೆಂಡವಾಗಿದ್ದ ಭೂಮಿಗೆ ತಂಪು ನೀಡಿತು. ನಾಲವಾರ ವಲಯದಲ್ಲಿ ಸಂಜೆ 4 ಗಂಟೆಯಿಂದ ಸ್ವಲ್ಪ ಮಳೆಯಾದ ಬಗ್ಗೆ ವರದಿಯಾಗಿದೆ.

ಚಿತ್ತಾಪುರ ವರದಿ: ಚಿತ್ತಾಪುರ ತಾಲೂಕಿನಲ್ಲೂ ಸಹ ಭಾರಿ ಗುಡುಗು, ಮಿಂಚಿನ ಸಮೇತ ಮಳೆಯಾಗಿದೆ. ಅಲ್ಲಲ್ಲಿ ಗಾಳಿಯಿಂದ ಸಣ್ಣ ಪುಟ್ಟ ಅನಾಹುತಗಳು ಸಂಭವಿಸಿವೆ. ಆಳಂದ ತಾಲೂಕಿನಲ್ಲಿ ಮಳೆಯಾಗಿಲ್ಲ. ಬರಿ ಬಿರುಗಾಳಿ ಬೀಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ