ಆ್ಯಪ್ನಗರ

ಆ್ಯಕ್ಷನ್‌ ಪ್ಲಾನ್‌ ಇದ್ದರೆ ಮಾತ್ರ ಅನುದಾನ

ಹೈದರಾಬಾದ್‌-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ಬಯಸುವ ಇಲಾಖೆಗಳು ತಮ್ಮ ಮಾತೃ ಇಲಾಖೆಯ ಅಂಶಿಕ ಅನುದಾನದ ಜೊತೆಗೆ ಕಾಮಗಾರಿಯ ಆಡಳಿತಾತ್ಮಕ ಅನುಮೋದನೆ, ಕ್ರಿಯಾ ಯೋಜನೆ ಜೊತೆಗೆ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಮಂಡಳಿ ಅನುದಾನ ಬಿಡುಗಡೆ ಮಾಡಲಿದೆ ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ಸ್ಪಷ್ಟಪಡಿಸಿದರು.

Vijaya Karnataka 19 Sep 2018, 5:52 pm
ಕಲಬುರಗಿ : ಹೈದರಾಬಾದ್‌-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುದಾನ ಬಯಸುವ ಇಲಾಖೆಗಳು ತಮ್ಮ ಮಾತೃ ಇಲಾಖೆಯ ಅಂಶಿಕ ಅನುದಾನದ ಜೊತೆಗೆ ಕಾಮಗಾರಿಯ ಆಡಳಿತಾತ್ಮಕ ಅನುಮೋದನೆ, ಕ್ರಿಯಾ ಯೋಜನೆ ಜೊತೆಗೆ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಮಂಡಳಿ ಅನುದಾನ ಬಿಡುಗಡೆ ಮಾಡಲಿದೆ ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ಸ್ಪಷ್ಟಪಡಿಸಿದರು.
Vijaya Karnataka Web grant only if the plan is available
ಆ್ಯಕ್ಷನ್‌ ಪ್ಲಾನ್‌ ಇದ್ದರೆ ಮಾತ್ರ ಅನುದಾನ


ಮಂಗಳವಾರ ಕಲಬುರಗಿ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಎಚ್‌ಕೆಆರ್‌ಡಿಬಿ ಅನುದಾನದಿಂದ ವಿವಿಧ ಅನುಷ್ಠಾನ ಸಂಸ್ಥೆಗಳು ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಂಡಳಿಯಿಂದ 2015-16, 2016-17ರಲ್ಲಿ ವಿವಿಧ ಇಲಾಖೆಗಳಿಗೆ ನೀಡಿರುವ ಹಣ ಖರ್ಚಾಗದೆ ಹಾಗೇ ಉಳಿದಿದೆ. ಇದರ ಹಿಂದೆ ಇಲಾಖೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪೂರ್ಣ ಸಿದ್ಧತೆ ಇಲ್ಲದೆ ಕಾಮಗಾರಿಗಳಿಗೆ ಹಣ ಮೀಸಲಿರಿಸಿ ನಂತರ ಸಿದ್ಧತೆ ನಡೆಸುವುದು ತಪ್ಪು ಸಂಪ್ರದಾಯವಾಗುತ್ತದೆ. ಇನ್ನು ಮುಂದೆ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಪ್ರಥಮ ಹಂತದ ಎಲ್ಲ ಸಿದ್ಧತೆಗಳನ್ನು ಕೈಗೊಂಡು ಪ್ರಸ್ತಾವನೆ ಸಲ್ಲಿಸುವ ಯೋಜನೆಗಳಿಗೆ ಮಾತ್ರ ಮಂಡಳಿಯಿಂದ ಅನುಮೋದನೆ ನೀಡಲಾಗುವುದು ಎಂದರು.

ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಕಾಮಗಾರಿ ಅಥವಾ ಯೋಜನೆಯ ಸಂಪೂರ್ಣ ಅನುದಾನವನ್ನು ಒಂದೇ ಬಾರಿ ಬಿಡುಗಡೆ ಮಾಡದೆ ಕಾಮಗಾರಿಯ ವಿವಿಧ ಹಂತಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಹಿಂದೆ ಮಂಡಳಿಯಿಂದ ನೀಡಿರುವ ಹಣಕ್ಕೆ ಸದ್ಬಳಕೆ ಪ್ರಮಾಣ ಪತ್ರ ಕಡ್ಡಾಯವಾಗಿ ಒಂದು ವಾರದೊಳಗೆ ನೀಡಬೇಕು. ಮಂಡಳಿಯಿಂದ ಆಯಾ ವರ್ಷ ಅನುಮೋದನೆ ನೀಡಿರುವ ಕಾಮಗಾರಿಯನ್ನು ಅದೇ ವರ್ಷ ಪೂರ್ಣಗೊಳಿಸಿ ಅಂತಿಮ ಬಿಲ್‌ ಪಡೆಯಬೇಕು ಎಂದು ತಿಳಿಸಿದರು.

ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಮಂಡಳಿಯು 2014-15ರಿಂದ ಈವರೆಗೆ ಮಂಜೂರು ಮಾಡಿರುವ ಕಾಮಗಾರಿಗಳ ಪೈಕಿ ಸುಮಾರು ಕಾಮಗಾರಿಗಳನ್ನು ಇನ್ನು ಆರಂಭಿಸಿಲ್ಲ. ಇಂತಹ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು. ಪ್ರಗತಿಯಲ್ಲಿರುವ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ಹಾಗೆ ನೋಡಿಕೊಳ್ಳಬೇಕು. ಪೂರ್ಣಗೊಂಡ ಕಾಮಗಾರಿಗಳ ಬಿಲ್ಲುಗಳು ಬಾಕಿ ಉಳಿಯದಂತೆ ಎಚ್ಚರಿಕೆ ವಹಿಸಬೇಕು. ಮಂಡಳಿಯಿಂದ ಕಾಮಗಾರಿಗಳನ್ನು ಪರಿಶೀಲಿಸಲು ಮೂರನೇ ತಂಡವನ್ನು (ಥರ್ಡ್‌ ಪಾರ್ಟಿ) ನಿಯೋಜನೆ ಮಾಡಲಾಗುತ್ತಿದೆ. ಅಲ್ಲಿಯವರೆಗೆ ಲೋಕೋಪಯೋಗಿ, ಜಿಲ್ಲಾ ಪಂಚಾಯತಿ ಎಂಜಿನಿಯರಿಂಗ್‌ ಅಥವಾ ಮಹಾನಗರ ಪಾಲಿಕೆಯ ಮೂರನೇ ತಂಡದಿಂದ ಕಾಮಗಾರಿಗಳ ಪರಿಶೀಲಿಸಿ ಕೈಗೊಳ್ಳಬೇಕು. ಆ ತಂಡದ ವರದಿಯೊಂದಿಗೆ ಬಿಲ್‌ ಸಲ್ಲಿಸಬೇಕು. ಕೆಲವು ಅನುಷ್ಠಾನ ಸಂಸ್ಥೆಗಳಲ್ಲಿ ಕಳೆದ ತಿಂಗಳಿಂದ ಇಲ್ಲಿಯವರೆಗೆ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಅಧಿಕಾರಿಗಳು ಮುತುವರ್ಜಿ ವಹಿಸಿ ಕಾಮಗಾರಿಗಳನ್ನು ಶೀಘ್ರ ಗತಿಯಲ್ಲಿ ಕೈಗೊಳ್ಳಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತ ಭೀಮಾಶಂಕರ ತೆಗ್ಗೆಳ್ಳಿ, ಎಚ್‌ಕೆಆರ್‌ಡಿಬಿ ಜಂಟಿ ನಿರ್ದೇಶಕ ಬಸವರಾಜ, ವಿವಿಧ ಅನುಷ್ಠಾನ ಸಂಸ್ಥೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅನುಮೋದಿತ ಕಾಮಗಾರಿಗೆ ಫಂಡ್‌ ಸಿಗಲ್ಲ

ಕೆಲವು ಇಲಾಖೆಗಳು ಅನುಮೋದನೆ ಪಡೆದ ಕಾಮಗಾರಿಗಳನ್ನು ಮಾರ್ಪಾಡು ಮಾಡಿಕೊಂಡು ಹೆಚ್ಚುವರಿ ಅನುದಾನಕ್ಕಾಗಿ ಮಂಡಳಿಗೆ ಬೇಡಿಕೆ ಸಲ್ಲಿಸುತ್ತಿವೆ. ಹೆಚ್ಚುವರಿ ಅನುದಾನ ಪುನಃ ನೀಡಲು ಮಂಡಳಿಯಲ್ಲಿ ಅವಕಾಶ ಇಲ್ಲ ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ತಿಳಿಸಿದರು.

ಹಾಗೊಂದು ವೇಳೆ, ಅನುಮೋದನೆ ಪಡೆದ ಕಾಮಗಾರಿಯಲ್ಲಿ ಮಾರ್ಪಾಡು ಮಾಡಿದರೆ ಹೆಚ್ಚುವರಿ ಅನುದಾನವನ್ನು ತಮ್ಮದೆ ಮಾತೃ ಇಲಾಖೆಯಿಂದ ಪಡೆದು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ