ಆ್ಯಪ್ನಗರ

ಅಂಗೈ ಅಗಲ ಜಾಗದಲ್ಲೂ ಹಸಿರು ಚಿಗುರಿಸಿ

ಗಿಡ ಮರ ಬೆಳೆಸಿ ಪೋಷಿಸಲು ಮುಖ್ಯವಾಗಿ ಮನಸ್ಸಿರಬೇಕಷ್ಟೆ. ಅಂಗೈಯಗಲ ಜಾಗವಿದ್ದರೂ ಅಲ್ಲೊಂದು ಹಸಿರು ಚಿಗುರಿಸಬಹುದು ಎಂದು ಭಾರತದ ಪ್ರಥಮ ಸಸ್ಯ ವೈದ್ಯ ವಿಜಯ ನಿಶಾಂತ ಹೇಳಿದರು.

Vijaya Karnataka 22 Jul 2018, 5:09 pm
ಕಲಬುರಗಿ : ಗಿಡ ಮರ ಬೆಳೆಸಿ ಪೋಷಿಸಲು ಮುಖ್ಯವಾಗಿ ಮನಸ್ಸಿರಬೇಕಷ್ಟೆ. ಅಂಗೈಯಗಲ ಜಾಗವಿದ್ದರೂ ಅಲ್ಲೊಂದು ಹಸಿರು ಚಿಗುರಿಸಬಹುದು ಎಂದು ಭಾರತದ ಪ್ರಥಮ ಸಸ್ಯ ವೈದ್ಯ ವಿಜಯ ನಿಶಾಂತ ಹೇಳಿದರು.
Vijaya Karnataka Web grow green in the palm area
ಅಂಗೈ ಅಗಲ ಜಾಗದಲ್ಲೂ ಹಸಿರು ಚಿಗುರಿಸಿ


ನಗರದ ಸಂಗಮೇಶ್ವರ ಸಭಾಗೃಹದಲ್ಲಿ ನೂತನ ವಿದ್ಯಾಲಯ ಸಂಸ್ಥೆ, ಜೋಗ ಶೇಟೆ ವಿಜ್ಞಾನ ಕೇಂದ್ರ, ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಲಬುರಗಿ ಹಸಿರಾಗಿಸುವ ಯೋಜನೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಪರಿಸರ ಹಸಿರಾಗಿಸುವ ಸಂಕಲ್ಪ ಮಾಡಲಾಗುತ್ತಿದೆ. ಆದರೆ ಇದು ಕೇವಲ ಮಾತಿಗಷ್ಟೆ ಸೀಮಿತವಾಗಿದೆ. ಇಂದು ಯಾರಿಗಾದರೂ ಸಸಿ ನೆಟ್ಟು ಎಷ್ಟು ಬೆಳೆಸಲು ಹೇಳಿದರೆ ಜಾಗ, ನೀರಿನ ಕೊರತೆ ಸೇರಿದಂತೆ ಹಲವಾರು ಕಾರಣ ಹೇಳುತ್ತಾರೆ. ಯಾವುದೇ ದಿನಾಚರಣೆಗಳು ಆಯಾ ದಿನಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಕೇವಲ ಒಂದು ದಿನಕ್ಕೆ ಮಾತ್ರ ನೆನಪಿಸಿಕೊಂಡು ಆಚರಣೆ ಮಾಡುವ ಬದಲು ಆ ದಿನದಿಂದ ಅದರ ನಿರಂತರ ಹರಿವಾಗಬೇಕು ಎಂದರು.

ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಮುಂದೊಂದು ದಿನ ಅವನಿಗೆ ಮುಳ್ಳಾಗಬಹುದು. ಮನುಷ್ಯ ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ. ಹೀಗಾಗಿ ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸಿ ಎಂದು ಸಲಹೆ ನೀಡಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಮಾತನಾಡಿ, ಸಸಿ ನಿರ್ವಹಣೆ ವಿಷಯವಾಗಿ ಜನರಿಗೆ ಸಂಪೂರ್ಣ ಸಹಾಯ, ಸಹಕಾರ ನೀಡಲು ಬದ್ಧ. ಇದಕ್ಕಾಗಿ ನಗರದ ನಾನಾ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಎನ್‌ಎಸ್‌ಎಸ್‌, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವ ನಿರೀಕ್ಷಿಸುವುದಾಗಿ ಆಶಯ ವ್ಯಕ್ತಪಡಿಸಿದರು.

ಈ ವೇಳೆ ವಿದ್ಯಾರ್ಥಿಗಳ ಜತೆ ಹಸಿರಾಗಿಸಿವ ಬಗ್ಗೆ ಸಂವಾದ ಹಮ್ಮಿಕೊಳ್ಳಲಾಯಿತು. ಎನ್‌ವಿ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಸರ್ವೋತ್ತಮರಾವ್‌ ಅಧ್ಯಕ್ಷತೆ ವಹಿಸಿದ್ದರು. ನೂತನ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಾಣೇಶ ದೇಶಪಾಂಡೆ, ಡಿಎಫ್‌ಒ ಗುಂಡು ಸಿಂಗ್‌, ಗುಲ್ಬರ್ಗ ರೋಟರಿ ಕ್ಲಬ್‌ ಚುನಾಯಿತ ಅಧ್ಯಕ್ಷ ರಾಮಚಂದ್ರ ಶಾನಭೋಗ, ಜೋಗ ಶೇಟೆ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಡಾ. ಕಿಶೋರ ದೇವಳಗಾಂವಕರ್‌, ಸಿಂಡಿಕೇಟ್‌ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ರಾಜಪ್ಪಾ ಗೌಳಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆರ್‌.ಎಚ್‌. ಪಾಟೀಲ್‌ ನಿರೂಪಿಸಿದರೆ, ಎನ್‌ವಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಫೀಕ್‌ ಅಹ್ಮದ್‌ ವಂದಿಸಿದರು.

ರಾಜಕೀಯ ಒತ್ತಡ ಬೇಡ

ಇಡೀ ಜಗತ್ತು ಪರಿಸರ ಕಾಪಾಡಲು ಹೊರಟಿದೆ. ಪರಿಸರ ಉಳಿದರೆ ಮಾತ್ರ ಎಲ್ಲವೂ ಉಳಿಯುತ್ತದೆ. ಆದ್ದರಿಂದ, ಕಲಬುರಗಿ ಹಸಿರಾಗಿಸುವ ಯೋಜನೆಯನ್ನು ಫೋಟೊ ಮತ್ತು ಫೋಸ್‌ಗೆ ಸೀಮಿತಗೊಳಿಸಬೇಡಿ. ನೆಟ್ಟಗಿಡವನ್ನು ಹೆಮ್ಮರವಾಗಿ ಬೆಳೆಸುವತ್ತ ಚಿಂತಿಸಬೇಕು. ಹಸಿರು ಕಲಬುರಗಿ ಯೋಜನೆಯಿಂದ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ ಜವಾಬ್ದಾರಿ ಕೂಡ ಹೆಚ್ಚಿದೆ. ಈಗಾಗಲೇ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಕೂಡ ಪರಿಸರ ರಕ್ಷಣೆ ಕೆಲಸ ಮಾಡುತ್ತಿದ್ದಾರೆ. ಇಂತಹ ಸಮಾಜಮುಖಿ ಯೋಜನಕ್ಕೆ ಯಾರೂ ರಾಜಕೀಯ ಒತ್ತಡ ತರುವ ಪ್ರಯತ್ನ ನಡೆಸಬಾರದು. ಕಲಬುರಗಿ ಅಂಥವರ ಸೊತ್ತಲ್ಲ. ಹೀಗಾಗಿ ಎಲ್ಲರೂ ಹಸಿರು ಉಳಿಸುವ ಕೆಲಸ ಮಾಡೋಣ. ಈ ಮೂಲಕ ಆದಷ್ಟು ಬೇಗ ಕಲಬುರಗಿಯನ್ನು ಹಸಿರಾಗಿಸೋಣ ಎಂದು ಎನ್‌ವಿ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಸರ್ವೋತ್ತಮರಾವ್‌ ಹೇಳಿದರು. ಈಗಾಗಲೇ 2000 ಗಿಡಗಳನ್ನು ನೆಟ್ಟಿದ್ದು ಅದರಲ್ಲಿ 720 ಗಿಡ ಈಗ ಬೆಳೆದಿದ್ದಾವೆ. ಹೀಗಾಗಿ ಕಲಬುರಗಿ ನಾಡನ್ನು ಹಚ್ಚ ಹಸಿರಾಗಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸದರು.

ಹಸಿರು ಪಡೆ ಹೆಚ್ಚಾಗಲಿ

ಎನ್‌ಎಸ್‌ಎಸ್‌ ಹಸಿರು ಪಡೆಗಳಂತಹ ಸಂಘಟನೆ ಮಾಡಿಕೊಂಡು ಗಿಡ ನೆಟ್ಟು ಬೆಳೆಸಬೇಕು. ಈ ನಿಟ್ಟಿನಲ್ಲಿ ಒಬ್ಬ ವಿದ್ಯಾರ್ಥಿ ಒಂದು ಗಿಡ ದತ್ತು ಪಡೆದು ಪೋಷಿಸುವ ಪರಿಪಾಠ ಬೆಳೆಸಿಕೊಂಡರೆ ಇನ್ನೂ ಉತ್ತಮ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ರಮೇಶ ಲಂಡನಕರ್‌ ಸಲಹೆ ನೀಡಿದರು.

ನಮ್ಮ ಪರಿಸರವನ್ನು ಪ್ರೀತಿಸಲು ಕೇವಲ ಅದರ ಬಗ್ಗೆ ಒಂದು ಸಣ್ಣ ಕುತೂಹಲದ ನೋಟ ಸಾಕು. ಸೂಕ್ಷ್ಮವಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಾ ಹೋದಂತೆ ಏಕಾಗ್ರತೆಯ ಜತೆಗೆ ಪರಿಸರ ಪ್ರೇಮ ಮತ್ತು ಕಾಳಜಿ ಬೆಳೆಯುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ