ಆ್ಯಪ್ನಗರ

ರೇಷ್ಮೆ ಕೃಷಿಕರ ಮೂಕವೇದನೆಗೆ ಸ್ಪಂದನೆ ಎಂದು?

ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಕೈಗೊಳ್ಳುವ ಬೆರಳೆಣಿಕೆಯಷ್ಟೇ ರೈತರು ಭರ್ಜರಿ ಉತ್ಪಾದನೆ ಪಡೆಯುತ್ತಿದ್ದರೂ,ಸ್ವಯಂಚಾಲಿತ ನೂಲು ಬಿಚ್ಚಣಿಕೆ ಘಟಕ ಇಲ್ಲದೆ ಉತ್ಪಾದಕರು ತಮ್ಮದಲ್ಲದ ತಪ್ಪಿಗಾಗಿ ಕೈ ಸುಟ್ಟುಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ.

Vijaya Karnataka 1 Mar 2019, 4:35 pm
ಮಹೇಶ್‌ ಕುಲಕರ್ಣಿ ಕಲಬುರಗಿ :ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಕೈಗೊಳ್ಳುವ ಬೆರಳೆಣಿಕೆಯಷ್ಟೇ ರೈತರು ಭರ್ಜರಿ ಉತ್ಪಾದನೆ ಪಡೆಯುತ್ತಿದ್ದರೂ,ಸ್ವಯಂಚಾಲಿತ ನೂಲು ಬಿಚ್ಚಣಿಕೆ ಘಟಕ ಇಲ್ಲದೆ ಉತ್ಪಾದಕರು ತಮ್ಮದಲ್ಲದ ತಪ್ಪಿಗಾಗಿ ಕೈ ಸುಟ್ಟುಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ.
Vijaya Karnataka Web is silk farmer responding to silence
ರೇಷ್ಮೆ ಕೃಷಿಕರ ಮೂಕವೇದನೆಗೆ ಸ್ಪಂದನೆ ಎಂದು?


ಜಿಲ್ಲೆಯಾದ್ಯಂತ ಒಟ್ಟು 910 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಲಾಗುತ್ತಿದೆ. ಈ ಪೈಕಿ ಅಧಿಕೃತವಾಗಿ ರೇಷ್ಮೆ ಕೃಷಿ ಕೈಗೊಳ್ಳುವ 181 ಗ್ರಾಮಗಳು ಜಿಲ್ಲೆಯಲ್ಲಿದ್ದು, 1202ಕ್ಕೂ ಹೆಚ್ಚು ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ ಎಂಬುದನ್ನು ಖುದ್ದು ರೇಷ್ಮೆ ಇಲಾಖೆಯ ಉನ್ನತ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ.

ಉತ್ಪಾದನೆಗೆ ಕೊರತೆ ಇಲ್ಲ:

ಇನ್ನೊಂದೆಡೆ, ಇದೇ ಜನವರಿ ಅಂತ್ಯಕ್ಕೆ ಕಲಬುರಗಿ ಜಿಲ್ಲೆಯಲ್ಲಿ 235 ಮೆಟ್ರಿಕ್‌ ಟನ್‌ ರೇಷ್ಮೆ ಗೂಡಿನ ಉತ್ಪಾದನೆ ಕೈಗೊಳ್ಳಲಾಗಿದೆ. ಮೇಲಾಗಿ, ಇದೇ ಮಾರ್ಚ್‌ ಅಂತ್ಯಕ್ಕೆ 300 ಮೆಟ್ರಿಕ್‌ ಟನ್‌ ಗೂಡು ಉತ್ಪಾದನೆ ಆಗಲಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಉತ್ಪಾದಿಸಿದ ರೇಷ್ಮೆ ಗೂಡಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಕೇವಲ 70 ಮೆಟ್ರಿಕ್‌ ಟನ್‌ ವಹಿವಾಡಿಗೆ ಮಾತ್ರ ಅವಕಾಶವಿದ್ದು, ಉಳಿದ 230 ಮೆಟ್ರಿಕ್‌ ಟನ್‌ ಗೂಡಿನ ವಹಿವಾಟಿಗಾಗಿ ಜಿಲ್ಲೆಯ ರೈತರು ಅನ್ಯ ದಾರಿಯಿಲ್ಲದೆ ದೂರದ ರಾಮನಗರ, ಶಿಡ್ಲಘಟ್ಟ ಮಾರುಕಟ್ಟೆ ಕಡೆಗೆ ಮುಖ ಮಾಡಬೇಕಾಗಿದೆ. ದುರಂತವೆಂದರೆ, ರಾಮನಗರ ಮತ್ತು ಶಿಡ್ಲಘಟ್ಟ ತಲುಪಬೇಕಾದರೆ ಮೂರು ದಿನ ಹಿಡಿಯುತ್ತದೆ. ಅಷ್ಟರೊಳಗೆ ರೇಷ್ಮೆಗೂಡಿನ ಗುಣಮಟ್ಟ ಕುಸಿದಿರುತ್ತದೆ. ಹೀಗಾಗಿ, ನಿರೀಕ್ಷಿತ ದರ ಲಭಿಸದಂತಾಗುತ್ತಿದೆ. ಅಷ್ಟೇ ಅಲ್ಲ; ವಹಿವಾಟಿನ ಮೂರು ದಿನದ ಬಳಿಕ ಮಾರಾಟದ ಹಣ ಪಡೆಯಬೇಕಾದ ಅಸಹಾಯಕ ಸ್ಥಿತಿ ರೈತರನ್ನು ಬಾಧಿಸುತ್ತಿದೆ ಎಂದು ರೇಷ್ಮೆ ಕೃಷಿಕರೊಬ್ಬರು ವಿಷಾದ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯಲ್ಲಿ ಹೆಚ್ಚುವರಿ ರೇಷ್ಮೆ ಗೂಡಿನ ಬಳಕೆಗೆ ಅನುಗುಣವಾಗಿ ಸ್ಥಳೀಯವಾಗಿ ಆಟೊಮ್ಯಾಟಿಕ್‌ ನೂಲು ಬಿಚ್ಚಣಿಕೆ ಘಟಕಗಳನ್ನು ತೆರೆದರೆ ರೇಷ್ಮೆ ಗೂಡು ಉತ್ಪಾದಿಸುವ ರೈತರ ಕಷ್ಟ ದೂರ ಮಾಡಿದಂತಾಗುತ್ತದೆ. ಅದರಲ್ಲೂ, ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರೇ ಹೆಚ್ಚಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ. ಸಮಾಧಾನದ ಅಂಶವೆಂದರೆ, ಈ ರೈತರ ನೆರವಿಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಪ್ರಿಯಾಂಕ್‌ ಖರ್ಗೆ ಮುಂದಾಗುವ ಆಸಕ್ತಿ ತೋರಿಸಿರುವುದು ರೇಷ್ಮೆ ಕೃಷಿಕರಲ್ಲಿ ಆಶಾಭಾವ ಮೂಡಿಸಿದೆ.

ತುರ್ತು ಸಭೆ ನಡೆಸಲು ಸೂಚನೆ

ರೇಷ್ಮೆ ಕೃಷಿಯಲ್ಲಿ ತೊಡಗಿರುವ ಕಲಬುರಗಿ ಜಿಲ್ಲೆಯ ಕೃಷಿಕರೊಂದಿಗೆ ರೇಷ್ಮೆ ಇಲಾಖೆಯ ಅಧಿಕಾರಿಗಳು ತುರ್ತು ಸಭೆ ಕೈಗೊಂಡು ಆಟೊಮ್ಯಾಟಿಕ್‌ ನೂಲು ಬಿಚ್ಚಣಿಕೆ ಘಟಕಗಳ ಸ್ಥಾಪನೆ ಕುರಿತು ಮೊದಲು ಪರಾಮರ್ಶೆ ನಡೆಸಬೇಕೆಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಈಗಾಗಲೇ ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


ರೇಷ್ಮೆ ಇಲಾಖೆಯ ಅಧಿಕಾರಿಗಳು ತುರ್ತಾಗಿ ರೇಷ್ಮೆ ಕೃಷಿಕರೊಂದಿಗೆ ಸಭೆ ಕೈಗೊಂಡು ವರದಿ ಸಲ್ಲಿಸಿದರೆ ಅಗತ್ಯ ಕ್ರಮದ ಕುರಿತು ಪರಿಶೀಲನೆ ನಡೆಸಲಾಗುವುದು.

-ಪ್ರಿಯಾಂಕ್‌ ಖರ್ಗೆ, ಸಚಿವರು, ಸಮಾಜ ಕಲ್ಯಾಣ ಖಾತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ