ಆ್ಯಪ್ನಗರ

ಅಪೆಕ್ಸ್‌ ಬ್ಯಾಂಕ್‌ನಿಂದ ರೈತರಿಗೆ ಸಾಲ ಕೊಡಿ: ಮಾನ್ಪಡೆ

ರೈತರ ಸಾಲಮನ್ನಾ ಆಗಿ ಒಂದು ವರ್ಷ ಗತಿಸಿದರೂ ಇನ್ನೂ ರೈತರ ಖಾತೆಗೆ ಜಮಾ ಆಗದ ಹಣವನ್ನು ರೈತರಿಗೆ ಖಾತೆಗೆ ಜಮಾ ಮಾಡಬೇಕು ಹಾಗೂ ಹೊಸ ಸಾಲವನ್ನು ಶೀಘ್ರ ರೈತರಿಗೆ ನೀಡುವ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಮಾರುತಿ ಮಾನ್ಪಡೆ ಆಗ್ರಹಿಸಿದರು.

Vijaya Karnataka 18 Jul 2019, 9:50 pm
ಕಲಬುರಗಿ:ರೈತರ ಸಾಲಮನ್ನಾ ಆಗಿ ಒಂದು ವರ್ಷ ಗತಿಸಿದರೂ ಇನ್ನೂ ರೈತರ ಖಾತೆಗೆ ಜಮಾ ಆಗದ ಹಣವನ್ನು ರೈತರಿಗೆ ಖಾತೆಗೆ ಜಮಾ ಮಾಡಬೇಕು ಹಾಗೂ ಹೊಸ ಸಾಲವನ್ನು ಶೀಘ್ರ ರೈತರಿಗೆ ನೀಡುವ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಮಾರುತಿ ಮಾನ್ಪಡೆ ಆಗ್ರಹಿಸಿದರು.
Vijaya Karnataka Web loans to farmers from apex bank manpade
ಅಪೆಕ್ಸ್‌ ಬ್ಯಾಂಕ್‌ನಿಂದ ರೈತರಿಗೆ ಸಾಲ ಕೊಡಿ: ಮಾನ್ಪಡೆ


ನಗರದ ನೆಹರೂ ಗಂಜ್‌ನಲ್ಲಿರುವ ರೈತ ಭವನದಲ್ಲಿ ಸಹಕಾರಿ ಸಂಘಗಳ ಉಳಿವಿಗಾಗಿ, ರೈತರ ಕೃಷಿ ಸಾಲಕ್ಕಾಗಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದರು.

ಪ್ರಮುಖವಾಗಿ ಸರಕಾರ ಕಳೆದ ವರ್ಷ ಮನ್ನಾ ಮಾಡಿದ ರೈತರ ಸಾಲ ಹಣವನ್ನು ಬ್ಯಾಂಕ್‌ ಅಕೌಂಟ್‌ಗೆ ಹಾಕಬೇಕು. ಹೊಸ ಸಾಲ ನೀಡಬೇಕು. ಡಿಸಿಸಿ ಬ್ಯಾಂಕ್‌ಗಳಲ್ಲಿ ಸಾಲ ಸಿಗದಿದ್ದರಿಂದ ಅಪೆಕ್ಸ್‌ ಬ್ಯಾಂಕ್‌ಗಳಿಂದಲೇ ರೈತರಿಗೆ ಸಾಲ ವಿತರಿಸಬೇಕು ಹಾಗೂ ಸೊಸೈಟಿ ಕಾರ್ಯದರ್ಶಿಗಳ ವೇತನ ಇತರ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.

ರೈತರ ಸಾಲವನ್ನು ಸರಕಾರ ಮನ್ನಾ ಮಾಡಿದರೂ ರೈತರ ಖಾತೆಗೆ ಜಮಾ ಆಗಿಲ್ಲ. ಡಿಸಿಸಿ ಬ್ಯಾಂಕ್‌ನವರು ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಮಾಡಿದ್ದರಿಂದ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಮ್ಮ ಹಣವನ್ನು ನಮಗೆ ಬಿಡುಗಡೆ ಮಾಡಬೇಕು ಎಂದರು.

ಒಂದೆಡೆ ಸಾಲ ಮನ್ನಾನೂ ಮಾಡುತ್ತಿಲ್ಲ. ಹೊಸ ಸಾಲನೂ ನೀಡುತ್ತಿಲ್ಲ. ಇದರಿಂದ ರೈತರು ಡಿಸಿಸಿ ಬ್ಯಾಂಕ್‌ಗಳಿಗೆ ಅಲೆದಾಡಿ ಸುಸ್ತಾಗುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಕಲಬುರಗಿಯಲ್ಲಿ 4 ಲಕ್ಷ 26 ಸಾವಿರ ರೈತರಿದ್ದಾರೆ. ಇದರಲ್ಲಿ ಸಾಲ ಪಡೆದ ಒಂದು ಲಕ್ಷ ರೈತರಿಗೆ ಇನ್ನೂ 50 ಸಾವಿರ ರೂ. ಬಂದೇ ಇಲ್ಲ. ಬ್ಯಾಂಕ್‌ಗಳು ಸಾಲ ಕೊಡುತ್ತಿಲ್ಲ. ಸೊಸೈಟಿಯವರೂ ನೀಡುತ್ತಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ದುಬಾರಿ ಬಡ್ಡಿ ನೀಡುವ ಲೇವಾದೇವಿಗಾರರ ಹತ್ತಿರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತರು ಬೆಳೆ ಬೆಳೆದು ಮಾರುಕಟ್ಟೆಗೆ ತಂದಾಗ ಬೆಲೆ ಕಡಿಮೆ ಇರುತ್ತದೆ. ಆದರೆ, ಅದೇ ರೈತ ತನಗೆ ಬೇಕಾದ ಸಾಮಗ್ರಿ ಕೊಳ್ಳಲು ಹೋದರೆ ಬೆಲೆ ಜಾಸ್ತಿ ಇರುತ್ತದೆ. ಗೊಬ್ಬರ, ಕ್ರಿಮಿನಾಶಕ ಬೆಲೆ ಹೆಚ್ಚಳವಾಗಿರುತ್ತವೆ. ದೇಶದಲ್ಲಿ ರಾಸಾಯನಿಕ ಗೊಬ್ಬರ ತಯಾರಿಸುವ ಕಂಪನಿಗಳು ಮುಚ್ಚಿ ಹೋಗಿವೆ. ವಿದೇಶದಿಂದ ರಾಸಾಯನಿಕ ಗೊಬ್ಬರವನ್ನು ತರಿಸಲಾಗುತ್ತಿದ್ದು, ಅಂಥ ಕಂಪನಿಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಆದರೆ, ರೈತರಿಗೆ ನೀಡಲಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶರಣಬಸಪ್ಪ ಮಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಸದಸ್ಯರಾದ ಚಂದ್ರಕಾಂತ ಸಂಗೋಳಗಿ, ಚಂದ್ರಕಾಂತ ಜಲ್ದೆ, ಮುಕುಂದರಾವ್‌ ಪಾಟೀಲ್‌, ಅಶೋಕ ಮ್ಯಾಗೇರಿ, ಮಹಾದೇವಪ್ಪ, ಅಂಬಲಗಿ, ವಿಜಯಕುಮಾರ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು. ಶಾಂತಪ್ಪ ಪಾಟೀಲ್‌ ನಿರೂಪಿಸಿದರು. ರೇವಣಸಿದ್ದಪ್ಪ ಮರಪಳ್ಳಿ ನಿರೂಪಿಸಿದರು. ಅವ್ವಣ್ಣ ಕವಲಗಾ ವಂದಿಸಿದರು.

ಕೈಗಾರಿಕೆಗಳಿಗೆ ಸಾಲ ಕೊಡಲು ಪ್ರತ್ಯೇಕ ಬ್ಯಾಂಕ್‌ಗಳ ವ್ಯವಸ್ಥೆ ಮಾಡುವ ಸರಕಾರಗಳು ರೈತರಿಗೆ ಸಾಲ ನೀಡುವ ಬ್ಯಾಂಕ್‌ಗಳ ವ್ಯವಸ್ಥೆ ಮಾಡಲ್ಲ. ಮಾಡಿದ ಕೆಲ ಬ್ಯಾಂಕ್‌ಗಳಲ್ಲಿಯೂ ಸಾಲ ಸಿಗದೆ ರೈತ ಕಂಗಾಲಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್‌ಗಳಲ್ಲಿ ಸಾಲವಿದ್ದರೂ ಸಾಲ ನೀಡಬೇಕೆಂಬ ನಿಯಮಗಳನ್ನು ಬ್ಯಾಂಕ್‌ಗಳು ಧಿಕ್ಕರಿಸುತ್ತಿದ್ದು, ಈ ಬಗ್ಗೆ ಹೋರಾಟ ಮಾಡಿಯೇ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

- ಮಾರುತಿ ಮಾನ್ಪಡೆ, ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ

ಕೃಷಿ ಸಮ್ಮಾನ್‌ನಿಂದ ಲಾಭ ಇಲ್ಲ

ಕೇಂದ್ರ ಸರಕಾರ ಜಾರಿಗೆ ತಂದಿರುವ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ವರ್ಷಕ್ಕೆ ಆರು ಸಾವಿರ ರೂ. ನೀಡಲಾಗುತ್ತದೆ. ಇದರಿಂದ ರೈತರಿಗೆ ಹೆಚ್ಚೇನು ಅನುಕೂಲವಿಲ್ಲ ಎಂದ ಅವರು, ದೇಶದಲ್ಲಿ 3 ಲಕ್ಷ 60 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಅಭಿವೃದ್ಧಿಗಾಗಿಯೇ ರಚನೆಗೊಂಡಿರುವ ಸ್ವಾಮಿನಾಥನ್‌ ವರದಿ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಮಾನ್ಪಡೆ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ