ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ಮತ್ತು ಮಕ್ಕಳ ಮಾರಾಟ ಜಾಲ ತಡೆಗಟ್ಟುವಲ್ಲಿ ವಿಫಲರಾದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಬಿ.ಆರ್.ಪಾಟೀಲ್ ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವರಾದ ಉಮಾಶ್ರೀಗೆ ಪತ್ರ ಬರೆದಿದ್ದಾರೆ.
ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ವ್ಯಾಪಕವಾಗಿ ನಡೆಯುತ್ತಿವೆ. ಗುಜ್ಜರ್ ಕಿ ಶಾದಿ ಹೆಸರಲ್ಲಿ ಹೆಣ್ಣುಮಕ್ಕಳ ಮಾರಾಟ ಜಾಲವೇ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಉದಾಹರಣೆ ಎರಡು ದಿನಗಳ ಕೆಳಗೆ ಜಿಲ್ಲೆಯ ಕುಮಸಿ ಗ್ರಾಮದಲ್ಲಿ ಗುಜ್ಜರ್ ಕಿ ಶಾದಿಯನ್ನು ತಡೆ ಹಿಡಿಯಲಾಗಿದೆ. ಇಂಥ ವಿಷಯಗಳು ತುಂಬಾ ಅಘಾತಕಾರಿಯಾಗಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜನರಲ್ಲಿ ತಿಳಿವಳಿಕೆ ಇಲ್ಲದ ಕಾರಣ, ಕೌಟುಂಬಿಕ ಬಡತನ ಮತ್ತು ಹಿರಿಯರ ಒತ್ತಾಯದ ಮೇರೆಗೆ ಈ ರೀತಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸಾಮಾಜಿಕ ಕಾರ್ಯಕರ್ತರ ಜೊತೆ ಸೇರಿ ಅರಿವು ಮೂಡಿಸಬೇಕು. ಇಂಥ ಘಟನೆಗಳಾದರೂ ಮೌನ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.