ಅಫಜಲಪುರ: ಕ್ಷೇತ್ರ ಅಭಿವೃದ್ಧಿಗಾಗಿ ಗುತ್ತೇದಾರರ ಕುಟುಂಬವು ರಾಜಕಾರಣ ಮಾಡಿದೆಯೇ ವಿನಃ, ಅಧಿಕಾರಕ್ಕಾಗಿ ಮಂತ್ರಿ ಸ್ಥಾನದ ಆಮಿಷಕ್ಕಾಗಿ ಅಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದಲ್ಲಿ ಮಂತ್ರಿಯನ್ನಾಗಿ ಮಾಡಿದ್ದೇ ತಮ್ಮ ತಂದೆ ವೆಂಕಯ್ಯ ಗುತ್ತೇದಾರರು ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದರು.
ತಾಲೂಕಿನ ಭೋಸಗಾ ಗ್ರಾಮದ ಹೊಸ ಬಡಾವಣೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಘೋಷಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್. ಬಂಗಾರೆಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಧರ್ಮಸಿಂಗ್ ಅವರನ್ನು ಮಂತ್ರಿ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಂತ್ರಿ ಸ್ಥಾನ ನೀಡಿರಲಿಲ್ಲ. ಆಗ ಬಂಗಾರಪ್ಪನವರ ಮೇಲೆ ಒತ್ತಡ ತಂದು ಖರ್ಗೆಯವರನ್ನು ಮಂತ್ರಿ ಮಾಡಿದ್ದೇ ವೆಂಕಯ್ಯ ಗುತ್ತೇದಾರರು. ಇಂತಹ ಕುಟುಂಬದಿಂದ ಬಂದ ತಮಗೆ ಅಧಿಕಾರದ ಇಲ್ಲವೇ ಮಂತ್ರಿ ಸ್ಥಾನದ ಆಮಿಷ ಇಲ್ಲ ಎಂದು ಸಮರ್ಥಿಸಿಕೊಂಡರು.
ಈ ಭಾಗದ ಜೀವನಾಡಿಯಾದ ಸೊನ್ನ-ಭೀಮಾ ಏತ ನೀರಾವರಿ ಯೋಜನೆಗೆ ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರ ಮನವೊಲಿಸಿ 10 ಕೋಟಿ ರೂ.ಗಳ ಅನುದಾನ ತಂದು ತಾವೇ ಶಂಕುಸ್ಥಾಪನೆ ನೆರವೇರಿಸಿದ್ದು , ಕಾರಣಾಂತರದಿಂದ ಕಾಮಗಾರಿ ಅಪೂರ್ಣವಾಗಿತ್ತು. ಇದರ ಮುಂದುವರಿಕೆಗೆ ಅನುದಾನದ ಕೊರತೆ ಇತ್ತು. ಹೇಗಾದರೂ ಮಾಡಿ ನಮ್ಮ ಭಾಗದ ನೀರಾವರಿ ಯೋಜನೆಯನ್ನು ಪೂರ್ಣ ಮಾಡಿಯೇ ತೀರಬೇಕು ಎಂಬ ಸದುದ್ದೇಶದೊಂದಿಗೆ ಜೆಡಿಎಸ್ ಸೇರಿದ್ದೆ. ಮಾಲೀಕಯ್ಯ ಗುತ್ತೇದಾರರು ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದರು ಎಂದು ಆರೋಪಿಸಲಾಯಿತು. ಆದರೆ, ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ 20 ಕೋಟಿ ರೂ. ಅನುದಾನ ತಂದು ಸೊನ್ನ-ಭೀಮಾ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲಾಯಿತು. ಇಂದು ಈ ಭಾಗದಲ್ಲಿ ಹಸಿರು ನಳನಳಿಸುತ್ತಿದೆ. ಆರೋಪಿಸುವ ವಿವಿಧ ಪಕ್ಷಗಳ ಮುಖಂಡರಿಗೆ ಈ ಇತಿಹಾಸ ಗೊತ್ತಿಲ್ಲವೆ? ಎಂದು ಪ್ರಶ್ನಿಸಿದರು.
ಹಲವರಿಗೂ ಮಂತ್ರಿ ಮಾಡಿರುವೆ
ಎಸ್.ಬಂಗಾರೆಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಮಂತ್ರಿಯಾಗಲು ಹಾತೊರೆಯಲಿಲ್ಲ. ಆದರೆ, ಮಂತ್ರಿ ಸ್ಥಾನಾಕಾಂಕ್ಷಿತ ಸುಮಾರು 17 ಜನ ಶಾಸಕ ಮುಖಂಡರಿಗೆ ಮಂತ್ರಿ ಮಾಡಲು ಶಿಫಾರಸು ಮಾಡಿದ್ದೇನೆ. ಆಗ ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿತ್ತು. ಅಂದಿನ ಆ ನಿಲುವು ಇಂದಿಗೂ ಇದೆ. ಹೀಗಾಗಿ, ಮಾಲೀಕಯ್ಯ ಗುತ್ತೇದಾರ ಎಂದಿಗೂ ಕ್ಷೇತ್ರ ಅಭಿವೃದ್ಧಿಯಲ್ಲಿ ಸ್ವಾರ್ಥ ಸಾಧಿಸುವುದಿಲ್ಲ ಎಂದರು.
ಭೋಸಗಾ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ 1992-93ರಲ್ಲಿ ಭೂಮಿ ಕಂಪಸಿತ್ತು. ಆಗ ಸಂತ್ರಸ್ಥರಿಗೆ ವಾಸಿಸಲು ಮನೆ ಹಾಗೂ ದುಡಿಮೆಗೆ ಜಮೀನು ನೀಡುವಲ್ಲಿ ಶ್ರಮಿಸಿದ್ದು ಖುಷಿ ತಂದಿದೆ. ಆಗ ಅಲ್ಲಿ ರಾಜಕೀಯ ಮಾಡಲಿಲ್ಲ. ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾಗಿ ಈಗಾಗಲೆ ಸುಮಾರು 11 ಸಾವಿರ ಮನೆಗಳಿಗೆ ಸ್ವತಃ ಭೇಟಿ ನೀಡಿ ನಿರಾಶ್ರಿತರನ್ನು ಗುರುತಿಸಿದ್ದೇನೆ. ಅವರ ಅಭಿವೃದ್ಧಿಗೂ ಯೋಜನೆ ರೂಪಿಸಿದ್ದಾಗಿ ಭರವಸೆ ನೀಡಿದರು.
ಬಯಲು ಶೌಚ ಮುಕ್ತ
ಮಹಾತ್ಮಾ ಗಾಂಧೀಜಿಯ ಕನಸು ನನಸಾಗಿಸಲು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಿಗಾಗಿ ರಾಜ್ಯ ಸರಕಾರ ಬದ್ಧವಿದೆ. ಸರಕಾರದಲ್ಲಿ ಹಣದ ಕೊರತೆ ಇಲ್ಲ. ಜಾಗೃತಿಯ ಕೊರತೆ ಇದೆ. ಆದ್ದರಿಂದ, ಜಾಗೃತಿಯತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಜಿ.ಪಂ.ಸದಸ್ಯ ಅರುಣಕುಮಾರ ಪಾಟೀಲ ಮಾತನಾಡಿ, ಹೈ-ಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾ.ಪಂ.ಅಧ್ಯಕ್ಷೆ ಸರುಬಾಯಿ, ಬಸವರಾಜ ಕಾಂಬಳೆ, ತಾ.ಪಂ.ಸದಸ್ಯ ಕಲ್ಲಪ್ಪ ಪ್ಯಾಟಿ, ಇ.ಓ ಮಹಾದೇವಪ್ಪ ಪಾಟೀಲ, ಕಾಂಗ್ರೆಸ್ ಮುಖಂಡರಾದ ಸೈಪನಸಾಬ ಮುಜಾವರ, ಸಿದ್ದುಗೌಡ ಭಾಸಗಿ, ದತ್ತು, ಶಂಕರ ಕಣ್ಣಿ, ದೇವಿಂದ್ರ ಜಮಾದಾರ, ಮಹಾರಾಯ ಪೂಜಾರಿ, ಹಣಮಂತ ಜಮಾದಾರ, ರಾಜು ಬಂಡಗಾರ, ಮಲ್ಲು ಬಂಡಗಾರ, ಮುಕ್ತಾಬಾಯಿ ಹರಿಜನ, ಪಿ.ಡಿ.ಓ ಶರಣಪ್ಪ ಡಂಗಿ ಇತರರಿದ್ದರು.