ಕಲಬುರಗಿ: ನಗರದ ಎಸ್ವಿಪಿ ವೃತ್ತದಿಂದ ಜಗತ್ ರಸ್ತೆ ಮಧ್ಯೆ ಭಾರಿ ದುರಂತವೊಂದು ಶುಕ್ರವಾರ ಕೂದಲೆಳೆಯಲ್ಲಿ ತಪ್ಪಿದೆ.
ಸಿಗ್ನಲ್ನಲ್ಲಿ ನಿಂತಿದ್ದ ಆಂಬುಲೆನ್ಸ್ವೊಂದು ಜಗತ್ ವೃತ್ತದ ಕಡೆಗೆ ಹೋಗುತಿತ್ತು. ಏಕಾಏಕಿ ದ್ವಿಚಕ್ರ ವಾಹನ ಸವಾರರೊಬ್ಬರು ರಸ್ತೆ ವಿಭಜಕದ ಮಧ್ಯೆ ಬಿಟ್ಟಿರುವ ಜಾಗದಿಂದ ನುಸುಳಿ ಹೋಗಲು ಪ್ರಯತ್ನಿಸಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.
ಬೈಕ್, ಬುಲೆರೊ ವಾಹನದ ಮುಂದೆ ಬರುತ್ತಿದ್ದಂತೆಯೇ ತಕ್ಷಣ ಬ್ರೇಕ್ ಹಾಕಿದ್ದಕ್ಕೆ ಹಿಂದೆ ಇದ್ದ ಆಂಬುಲನ್ಸ್ ಬುಲೆರೋಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ವಾಹನದಲ್ಲಿ ಯಾವುದೇ ರೋಗಿ ಇರಲಿಲ್ಲ. ಡಿಕ್ಕಿ ಹೊಡೆದ ರಭಸಕ್ಕೆ ಆಂಬುಲನ್ಸ್ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ತಕ್ಷಣ ಸ್ಥಳದಲ್ಲಿಯೇ ಇದ್ದ ಸಂಚಾರ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದರು.
* ರಸ್ತೆ ವಿಭಜಕ ಮಧ್ಯೆ ಜಾಗ- ಅಪಾಯಕ್ಕೆ ಆಹ್ವಾನ: ನಿತ್ಯ ಸಾವಿರರು ವಾಹನಗಳು ಓಡಾಡುವ ರಸ್ತೆಯ ವಿಭಜಕಗಳ ಮಧ್ಯೆ ಅನಗತ್ಯವಾಗಿ ಜಾಗ ಬಿಡಲಾಗಿದ್ದು, ಬೈಕ್ ಸವಾರರು ಅಲ್ಲಿಂದಲೇ ಹೋಗುತ್ತಾರೆ. ಇದರಿಂದ, ಅನಾಹುತವಾಗುವ ಸಾಧ್ಯತೆ ಇದ್ದು ಕೂಡಲೇ ಅವುಗಳನ್ನು ಮುಚ್ಚುವ ಕೆಲಸ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.