ಆ್ಯಪ್ನಗರ

ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಆರಂಭಗೊಂಡ ರಾಷ್ಟ್ರೀಯ ಸಮ್ಮೇಳನ

ಕೇವಲ ಜಾಗತೀಕರಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನೇ ಆಧುನೀಕರಣ ಎಂಬ ಮನೋಭಾವ ಬಿಟ್ಟು, ಸ್ಥಳೀಯ ಸಂಸ್ಕೃತಿಗೆ ಅದರ ಲಾಭ ತಲುಪಿಸುವ ಕೆಲಸ ಆಗಬೇಕಿದೆ ಎಂದು ವಿಮರ್ಶಕ ಹಾಗೂ ಚಿಂತಕ ಪ್ರೊ.ಗಣೇಶ ಎನ್‌.ದೇವಿ ನುಡಿದರು.

Vijaya Karnataka 23 Mar 2018, 4:58 pm
ಕಲಬುರಗಿ : ಕೇವಲ ಜಾಗತೀಕರಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನೇ ಆಧುನೀಕರಣ ಎಂಬ ಮನೋಭಾವ ಬಿಟ್ಟು, ಸ್ಥಳೀಯ ಸಂಸ್ಕೃತಿಗೆ ಅದರ ಲಾಭ ತಲುಪಿಸುವ ಕೆಲಸ ಆಗಬೇಕಿದೆ ಎಂದು ವಿಮರ್ಶಕ ಹಾಗೂ ಚಿಂತಕ ಪ್ರೊ.ಗಣೇಶ ಎನ್‌.ದೇವಿ ನುಡಿದರು.
Vijaya Karnataka Web national conference launched in karnataka central university
ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಆರಂಭಗೊಂಡ ರಾಷ್ಟ್ರೀಯ ಸಮ್ಮೇಳನ


ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡ ಎರಡು ದಿನಗಳ 'ಭಾರತೀಯ ಆಧುನೀಕತೆಗಳು: ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ'-ರಾಷ್ಟ್ರೀಯ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಆರ್ಥಿಕ ಪ್ರಗತಿಯನ್ನೋ, ವಿಶ್ವದ ಇನ್ನ್ಯಾವುದೋ ಭಾಗದಲ್ಲಿ ಆಗಿರುವ ಆಧುನೀಕರಣವನ್ನೋ ಜಪಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಅದರ ಬದಲು ಸ್ಥಳೀಯತೆಗೆ ಆಧುನೀಕರಣ ಏನು ಲಾಭ ತಂದುಕೊಡಲಿದೆ ಎಂಬುದರ ಚಿಂತನೆ ನಡೆಯಬೇಕು ಎಂದರು.

ವಸಾಹತುಶಾಹಿ ಗುಲಾಮಗಿರಿಯ ಮನೋಭಾವದಿಂದ ಮೊದಲು ಹೊರಬರಬೇಕು. ಮೇಲಾಗಿ, ನಾವು ಏನು ಎಂಬುದರ ಅಸ್ತಿತ್ವ ಕುರಿತು ಮೊದಲು ಜಾಗೃತಗೊಳ್ಳಬೇಕು. ಅಂದಾಗ ಮಾತ್ರ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪ್ರೊ.ಗಣೇಶ ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ವಿಚಾರ ಸಂಕಿರಣ ಉದ್ಘಾಟಿಸಿದ ಸಿಯುಕೆ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯಅವರು ಮಾತನಾಡಿ, ನಮ್ಮನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಗಳ ಉಗಮ ಹಾಗೂ ಅದರ ಏಳಿಗೆ ಕುರಿತು ಅರಿಯುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಪ್ರೊ.ಎನ್‌.ನಾಗರಾಜು ಅವರು ಮಾತನಾಡಿ, ವಸಾಹತುಶಾಹಿ ಆಡಳಿತದಿಂದ ಸಂಕುಚಿತ ಆಧುನಿಕತೆ ಸಾಧ್ಯವಾಗಿದೆ. ಈ ಮನೋಭಾವದಿಂದ ಮೊದಲು ಹೊರಬರಬೇಕು. ಇದರ ಜೊತೆಗೆ, ಹೊಸ ಆಧುನಿಕತೆಯ ಕಲ್ಪನೆ ರೂಪಿಸುವ ಅಗತ್ಯವಿದೆ ಎಂದರು.

ಸಿಯುಕೆ ಸಮ ಕುಲಪತಿ ಪ್ರೊ.ಜಿ.ಆರ್‌.ನಾಯಕ, ಭಾಷಾ ಮತ್ತು ಮಾನವಿಕ ನಿಕಾಯದ ಡೀನ್‌ ಪ್ರೊ.ಸುನೀತಾ ಮಂಜನಬೇಲ್‌ ಮತ್ತು ಜರ್ಮನಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಚಿಂತಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ರೇಣುಕಾ ನಾಯಕ ಸ್ವಾಗತಿಸಿ, ನಿರೂಪಿಸಿದರು. ಡಾ.ಮಹೇಂದ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ