ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಡಾ. ಚಂದ್ರಶೇಖರ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ
ಮುಂದಿನ ವರ್ಷ ನಡೆಯುವ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಸಹೋದರ, ಡಾ. ಚಂದ್ರಶೇಖರ ಪಾಟೀಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅನುಮೋದನೆ ಮೇರೆಗೆ ಈ ಹೆಸರು ಘೋಷಿಸಲಾಗಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಎಂ.ಲಕ್ಷ್ಮಣ ಅವರನ್ನು ಅಭ್ಯರ್ಥಿಯಾಗಿ ಮಾಡಲಾಗಿದೆ.
ಬೆಂಗಳೂರು/ ಕಲಬುರಗಿ: ಮುಂದಿನ ವರ್ಷ ನಡೆಯುವ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಸಹೋದರ, ಡಾ. ಚಂದ್ರಶೇಖರ ಪಾಟೀಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅನುಮೋದನೆ ಮೇರೆಗೆ ಈ ಹೆಸರು ಘೋಷಿಸಲಾಗಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಎಂ.ಲಕ್ಷ್ಮಣ ಅವರನ್ನು ಅಭ್ಯರ್ಥಿಯಾಗಿ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷವು ಮೊದಲ ಬಾರಿಗೆ ಆರು ತಿಂಗಳ ಮುಂಚೆಯೇ ಈಶಾನ್ಯ ವಲಯ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ. ಹುಮನಾಬಾದ ಶಾಸಕರೂ ಆಗಿರುವ ಭೂಸೇನಾ ನಿಗಮ ಅಧ್ಯಕ್ಷರಾದ ರಾಜಶೇಖರ ಪಾಟೀಲ್ ಅವರ ಸೋದರ ಮತ್ತು ಹುಮನಾಬಾದ್ನ ಎಸ್ವಿಇ ಶಿಕ್ಷಣ ಸಂಸ್ಥೆ ಮತ್ತು ಎಚ್ಕೆಡಿಇಟಿ ಅಧ್ಯಕ್ಷರೂ ಆಗಿರುವ ಡಾ.ಚಂದ್ರಶೇಖರ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಚಂದ್ರಶೇಖರ ಪಾಟೀಲ್ ಮತ್ತು ಡಾ.ವಿಕ್ರಂ ವೈಜನಾಥ ಪಾಟೀಲ್ ಅವರು ಸೇರಿದಂತೆ ಹೈಕ ಭಾಗದ ವಿವಿಧ ಜಿಲ್ಲೆಗಳ ಕೆಲ ಕಾಂಗ್ರೆಸ್ ಮುಖಂಡರು ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಹುಮನಾಬಾದ್ ಪಾಟೀಲ್ ಕುಟುಂಬ ಹಲವಾರು ವರ್ಷಗಳಿಂದ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಗುರುತಿಸಿಕೊಂಡಿದೆ. ಮಾಜಿ ಸಚಿವ ದಿವಂಗತ ಬಸವರಾಜ ಪಾಟೀಲ ಹುಮನಾಬಾದ ಅವರು ಖರ್ಗೆ ಅವರ ಒಡನಾಡಿಗಳಾಗಿದ್ದರು. ಈಗ ಡಾ.ಚಂದ್ರಶೇಖರ ಪಾಟೀಲ್ ಅವರಿಗೆ ಟಿಕೆಟ್ ಸಿಗುವಂತೆ ಮಾಡುವಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರವಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹೇಳಿ ಬರುತ್ತಿದೆ. ಡಾ. ಚಂದ್ರಶೇಖರ ಪಾಟೀಲ್ ಅವರು ವೃತ್ತಿಯಿಂದ ವೈದ್ಯರಾದರೂ ಹಲವಾರು ವರ್ಷಗಳಿಂದ ರಾಜಕೀಯ, ಶೈಕ್ಷಣಿಕ ಮತ್ತು ಉದ್ಯಮಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ತಂದೆ ಬಸವರಾಜ ಪಾಟೀಲ್, ಸೋದರ ರಾಜಶೇಖರ ಪಾಟೀಲ್ ಅವರ ಚುನಾವಣೆಯಲ್ಲಿ ಬೇರು ಮಟ್ಟದಿಂದ ಕೆಲಸ ಮಾಡುವ ಇವರು, ಹುಮನಾಬಾದ ತಾಲೂಕಿನಲ್ಲಿ ಎಲ್ಲ ಸ್ಥಳಿಯ ಚುನಾವಣೆಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಬೀದರ ಜಿಲ್ಲೆಯವರಾದರೂ ಕಲಬುರಗಿ,ಯಾದಗಿರಿ,ರಾಯಚೂರು ಜಿಲ್ಲೆಗಳು ಸೇರಿದಂತೆ ಹೈಕ ಭಾಗದ ಎಲ್ಲಡೆ ತಮ್ಮ ಗೆಳೆಯರ ತಂಡ, ಬೆಂಬಲಿಗರನ್ನು ಹೊಂದಿದ್ದಾರೆ.
ಬಿಜೆಪಿಯು ಸಹ ತನ್ನ ಅಭ್ಯರ್ಥಿಯನ್ನು ಷೋಷಣೆ ಮಾಡಿದೆ. ಹಾಲಿ ಎಂಎಲ್ಸಿ ಅಮರನಾಥ ಪಾಟೀಲ್ ಅವರ ಬದಲಿಗೆ ಹೊಸಪೇಟೆಯ ಶ್ರೀನಿವಾಸ ಎಂಬುವವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ. ಇದರಿಂದ ಹಾಲಿ ಎಂಎಲ್ಸಿ ಅಮರನಾಥ ಪಾಟೀಲ್ ಅವರು ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರವಾಗಿದ್ದಾರೆ. ಡಾ. ಚಂದ್ರಶೇಖರ ಪಾಟೀಲ್ ಮತ್ತು ಶ್ರೀನಿವಾಸ ನಡುವೆ ಹಣಾಹಣಿ ಏರ್ಪಡುವುದು ಖಚಿತವಾಗಿದೆ.
ನಮ್ಮ ಕುಟುಂಬ ಕಾಂಗ್ರೆಸ್ಗೆ ನಿಷ್ಠೆಯಿಂದ ಇರುವುದರಿಂದ ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ಪದವೀಧರರಿಗೆ ಕಾಂಗ್ರೆಸ್ ಪಕ್ಷ ಹೆಚ್ಚು ಅನುಕೂಲ ಮಾಡಿದೆ. 371ಜೆ ಮೂಲಕ ನಿರುದ್ಯೋಗಿಗಳಿಗೆ ಕೆಲಸ ಸಿಕ್ಕಿದೆ. ವೃತ್ತಿಪರ ಕೋರ್ಸ್ಗಳಲ್ಲಿ ಪ್ರವೇಶವೂ ಹೆಚ್ಚಾಗಿದೆ. ಈ ಕಾರಣಗಳಿಂದ ಪದವೀಧರರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂಬವಿಶ್ವಾಸವಿದೆ.
-ಡಾ. ಚಂದ್ರಶೇಖರ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ