ಆ್ಯಪ್ನಗರ

ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆ: ಗುತ್ತೇದಾರ್‌

ಆಳಂದ ತಾಲೂಕಿನಲ್ಲಿ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಡಿವೈಎಸ್ಪಿ ಇಬ್ಬರ ಭ್ರಷ್ಟಾಚಾರ ಮೇರೆ ಮೀರಿದ್ದು, ಶಾಸಕರಿಗೆ ಗೌರವ ಕೊಡುತ್ತಿಲ್ಲ ಎಂದು ಆರೋಪಿಸಿರುವ ಶಾಸಕ ಸುಭಾಷ ಗುತ್ತೇದಾರ್‌, ಈ ಅಧಿಕಾರಿಗಳ ವಿರುದ್ಧ ವಿಧಾನಸಭೆಯ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.

Vijaya Karnataka 28 Jun 2019, 9:11 pm
ಕಲಬುರಗಿ :ಆಳಂದ ತಾಲೂಕಿನಲ್ಲಿ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಡಿವೈಎಸ್ಪಿ ಇಬ್ಬರ ಭ್ರಷ್ಟಾಚಾರ ಮೇರೆ ಮೀರಿದ್ದು, ಶಾಸಕರಿಗೆ ಗೌರವ ಕೊಡುತ್ತಿಲ್ಲ ಎಂದು ಆರೋಪಿಸಿರುವ ಶಾಸಕ ಸುಭಾಷ ಗುತ್ತೇದಾರ್‌, ಈ ಅಧಿಕಾರಿಗಳ ವಿರುದ್ಧ ವಿಧಾನಸಭೆಯ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.
Vijaya Karnataka Web prosecution of officers guttedar
ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆ: ಗುತ್ತೇದಾರ್‌


ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಮಿತಿ ಮೀರಿದೆ. ತಾಲೂಕಿನಲ್ಲಿ ಶಾಸಕರಿಗೆ ಏನು ಕಿಮ್ಮತ್ತು ಉಳಿದಿಲ್ಲ. ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ್‌, ಡಿವೈಎಸ್‌ಪಿ ಸುಲ್ಫಿ ಇಬ್ಬರು ಅಧಿಕಾರಿಗಳು ಹದ್ದು ಮೀರಿ ವರ್ತನೆ ಮಾಡುತ್ತಿದ್ದಾರೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಏನು ಪ್ರಯೋಜನವಾಗಿಲ್ಲ. ಆದ್ದರಿಂದ ಮುಂಬರುವ ವಿಧಾನಸಭೆಯ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು. ಉಭಯತರ ವಿರುದ್ಧ ವಿಚಾರಣೆ ಮಾಡಬೇಕು. ತಾಲೂಕಿನಿಂದ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸುವೆ ಎಂದರು.

ಚುನಾವಣೆ ನಿಮಿತ್ತ ಈ ಅಧಿಕಾರಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಪುನಃ ಅದೇ ಅಧಿಕಾರಿಯನ್ನು ತಂದು ಹಾಕಲಾಗಿದೆ. ಇದು ಸರಿಯಲ್ಲ. ಕೂಡಲೇ ಅಧಿಕಾರಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಆ ಅಧಿಕಾರಿ ವಿರುದ್ಧ ಕೂಡಲೇ ವಿಚಾರಣೆ ಮಾಡಬೇಕು ಇಲ್ಲದೆ ಹೋದರೆ ಸತ್ಯಾಗ್ರಹ ಆರಂಭಿಸಲಾಗುವುದು ಎಂದರು.

ಡಿವೈಎಸ್ಪಿಯಿಂದಲೇ ಅಕ್ರಮ

ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಅಕ್ರಮ ಮದ್ಯ ಮಾರಾಟ, ಮಟಕಾ ರಾಜಾರೋಷವಾಗಿ ನಡೆಯುತ್ತಿದೆ. ಪಡಿತರವೂ ಅಕ್ರಮವಾಗಿ ಸಾಗಾಣೆ ಮಾಡಲು ಈ ಅಧಿಕಾರಿ ಬೆಂಬಲ ನೀಡುತ್ತಿದ್ದಾರೆ. ಈ ಹಿಂದೆ ನಡೆದ ದಲಿತ ಯುವಕ ರಾಹುಲ್‌ ಬೀಳಗಿ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ಸುನೀಲ್‌ ಬಸವರಾಜ ಪಾಟೀಲ, ಸಂಜೀವಕುಮಾರ ಬಸವರಾಜ ಪಾಟೀಲ, ಬಸವರಾಜ ಕಲ್ಯಾಣರಾವ್‌ ಪಾಟೀಲ, ಗುಂಡೇರಾವ್‌ ಭೈರಪ್ಪ ಪಾಟೀಲ ಮತ್ತು ಗುರುಗೌಡ ಶಶಿಕಾಂತ ಪಾಟೀಲ ಅವರನ್ನು ಕೈ ಬಿಡಲಾಗಿದೆ. ಈ ಎಲ್ಲ ಆರೋಪಿತರ ಹೆಸರನ್ನು ಹಿಂದಿನ ಡಿವೈಎಸ್ಪಿ ಹುಲ್ಲೂರ್‌ ಎಫ್‌ಐಆರ್‌ನಲ್ಲಿ ಹಾಕಿದ್ದರು. ಈಗ ಡಿವೈಪಿಎಸ್ಪಿ ಆಗಿರುವ ಟಿ.ಎಸ್‌.ಸುಲ್ಫಿ ಕೈ ಬಿಟ್ಟಿದ್ದಾರೆ ಎಂದು ದೂರಿದರು.

ಆಳಂದ, ಅಫಜಲಪುರದಲ್ಲಿ ಅಧಿಕಾರಿಯ ಅಳಿಯ ಲಕ್ಷ್ಮಿಕಾಂತ ಪ್ಯಾಟಿ ಸಹಾಯದಿಂದ ತಾಲೂಕಿನಲ್ಲಿ ಅವ್ಯಾಹತವಾಗಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ. ಇನ್ನೂ ಶಿವಾನಂದ ಜಮಾದಾರ್‌ ಎನ್ನುವ ವ್ಯಕ್ತಿಯ ಸಹಾಯದಿಂದ ಕಾಳಸಂತೆಯಲ್ಲಿ ಪಡಿತರ ಮಾರಾಟ ಮಾಡಲಾಗುತ್ತಿದೆ. ಇದನ್ನು ಸಾಕ್ಷಿ ಸಮೇತ ಹಿಡಿದು ಕೊಟ್ಟರೂ, ಏನು ಕ್ರಮ ಕೈಗೊಂಡಿಲ್ಲ. ಇದೆಂತಹ ಆಡಳಿತ ಎಂದು ದೂರಿದರು.

ದೂರು ಸಲ್ಲಿಸಿದರೂ ಕ್ರಮ ಇಲ್ಲ:

ಈ ನಿಟ್ಟಿನಲ್ಲಿ ಉಭಯ ಅಧಿಕಾರಿಗಳು ಮತ್ತು ಅವರು ಮಾಡುವ ಭಾನಗಡಿಗಳ ಕುರಿತು ಸಾಕ್ಷಿ ಸಮೇತ ಡಿಜಿಪಿ, ಐಜಿ, ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೆ ಏನು ಆಗುತ್ತಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇದೆಯೋ ಇಲ್ಲವೋ ಗೊತ್ತಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯರಾದ ವಿಜಯಲಕ್ಷ್ಮಿ, ಹರ್ಷ ಗುತ್ತೇದಾರ, ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೋಳ, ಈರಣ್ಣ, ಹಣಮಂತ ಬೆಳಮಗಿ ಸೇರಿದಂತೆ ಇತರರು ಇದ್ದರು.

ಬಿಆರ್‌ಗೆ ಚಾಳಿ ಹೋಗಿಲ್ಲ !

ತಾಲೂಕಿನ ಇಬ್ಬರು ಅಧಿಕಾರಿಗಳ ಆಟಾಟೋಪಕ್ಕೆ ಮಾಜಿ ಶಾಸಕ ಬಿ.ಆರ್‌.ಪಾಟೀಲ ಕಾರಣ. ಅವರ ಕುಮ್ಮಕ್ಕಿನಿಂದಲೇ ಇಷ್ಟೆಲ್ಲಾ ಮಾಡುತ್ತಿದ್ದಾರೆ. ಸುಭಾಷ ಗುತ್ತೇದಾರ ಅಕ್ರಮ ಸರಾಯಿ ಮಾರಾಟ ಮಾಡುತ್ತಾರೆ ಎನ್ನುವ ಪಾಟೀಲರಿಗೆ, ಈಗ ತಾಲೂಕಿನಲ್ಲಿ ಎಷ್ಟು ಅಕ್ರಮಗಳು ನಡೆಯುತ್ತಿವೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ, ಮೊನ್ನೆ ಸುರಪುರ ಮಾದರಿ ನೀರು ಸಂಗ್ರಹಣೆ ಮಾಡಿ ಬಾಗೀನ ಕೊಟ್ಟಿದ್ದು ಏನು ಎಂದು ಗುತ್ತೇದಾರ್‌ಪ್ರಶ್ನಿಸಿದರು.

ಪಾಟೀಲರಿಗೆ ಎಲ್ಲವೂ ನಾನೇ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಚಾಳಿ ಹೋಗಿಲ್ಲ ಎಂದು ಕಾಲೆಳೆದ ಅವರು, ಸೆಂಟ್ರಲ್‌ ವಿವಿ ನಾನೇ ಮಾಡಿದ್ದೇನೆ, ನೀರು ಸಂಗ್ರಹ ಸೇರಿದಂತೆ ಎಲ್ಲವೂ ನಾನೇ ಮಾಡಿದ್ದೇನೆ ಎಂದ ಹೇಳಿಕೊಳ್ಳುವ ಅವರಿಗೆ, ಕನಿಷ್ಠ ಸೌಜನ್ಯಕ್ಕೂ ಸರಕಾರದ ಕಾರ್ಯಕ್ರಮಗಳಿಗೆ ಹಾಲಿ ಶಾಸಕರನ್ನು ಕರೆಯಿಸುವ ಜ್ಞಾನ ಇಲ್ಲದೆ ಹೋದದ್ದು ದುರಾದೃಷ್ಟ ಎಂದರು.

ಮುಖ್ಯಾಧಿಕಾರಿ ಮಹಾ ಭ್ರಷ್ಟ

ಪುರಸಭೆಯಲ್ಲಂತೂ ಮುಖ್ಯಾಧಿಕಾರಿ ಆಗಿರುವ ಚಂದ್ರಕಾಂತ ಪಾಟೀಲರ ಭ್ರಷ್ಟಾಚಾರ ಪರಾಕಾಷ್ಟೆ ತಲುಪಿದೆ. ಚುನಾವಣೆಗೂ ಮುನ್ನ 53 ಜನ 'ಡಿ' ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಬ್ಬೊಬ್ಬರಿಂದ 1.50ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ದೂರಿದರು. ಇದರಲ್ಲಿ 25 ಜನರಿಗೆ ಟೇಬಲ್‌ ವರ್ಕ್‌ ನೀಡಿದ್ದಾರೆ. ಹಾಗಿದ್ದರೆ ಡಿ ದರ್ಜೆ ಹುದ್ದೆಗೆ ನೇಮಕ ಏಕೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು, ಪ್ರತಿಯೊಂದು ಕೆಲಸದಲ್ಲಿ ಲಂಚ ಪಡೆಯದೆ ಕೆಲಸವೇ ಮಾಡುತ್ತಿಲ್ಲ. ಸ್ವಚ್ಛ ಭಾರತ ಯೋಜನೆಯಲ್ಲಿ ಅಡಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ 80ಲಕ್ಷ ರೂ. ಬಂದಿತ್ತು. ಅದನ್ನು ಕೆಲಸ ಮಾಡದೆಯೇ ಲೂಟಿ ಮಾಡಿದ್ದಾರೆ ಎಂದು ಗುತ್ತೇದಾರ್‌ ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ