ಕಲಬುರಗಿ: ಸಾಲ ವಸೂಲಿ ಹೆಸರಲ್ಲಿ ಕಿರುಕುಳ ಮತ್ತು ಬೆದರಿಕೆಗೆ ಹಾಕಿದ್ದಕ್ಕೆ ಸಾವನ್ನಪ್ಪಿದ್ದಾರೆನ್ನಲಾದ ವ್ಯಕ್ತಿಯ ನೊಂದ ಕುಟುಂಬಕ್ಕೆ ನ್ಯಾಯ ಕಲ್ಪಿಸುವಂತೆ ಒತ್ತಾಯಿಸಿ ಖಣದಾಳ ತಾಂಡಾದ ಜನರು ಇಲ್ಲಿನ ಎಸ್ಪಿ ಕಚೇರಿ ಮುಂದೆ ಶವವಿಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.
ಮೋಹನ ರಾಠೋಡ (31) ಎಂಬುವವರೇ ಸಾವಿಗೀಡಾದ ವ್ಯಕ್ತಿ. ಈತ ಆನಂದ್ ಮತ್ತು ಸಂತೋಷ್ ಎಂಬುವವರಿಂದ 3 ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಪ್ರತಿಯಾಗಿ ಮೂರು ಎಕರೆ ಜಮೀನು ಬರೆಸಿಕೊಂಡಿದ್ದರು. ಸಾಲಕ್ಕೆ ಬಡ್ಡಿ ಸೇರಿಸಿ 30 ಲಕ್ಷ ರೂ. ನೀಡುವಂತೆ ಪದೆ-ಪದೇ ಒತ್ತಡ ಹೇರುವ ಮೂಲಕ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.
ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ತಾಂಡಾ ನಿವಾಸಿಗಳು ಎಸ್ಪಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಶವವಿಟ್ಟು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಶಶಿಕುಮಾರ್, ಸಂತ್ರಸ್ತರ ಅಹವಾಲು ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಾದ ಬಳಿಕ ಶವವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.