ಆ್ಯಪ್ನಗರ

ಸಾಕ್ಷಿ ಕಲಬುರಗಿ ಜಿಲ್ಲೆಗೆ ಟಾಪರ್‌

ಕೇವಲ ನಾಲ್ಕು ತಾಸುಗಳ ಶಿಸ್ತುಬದ್ಧ ಅಧ್ಯಯನ ಮತ್ತು ಏಕಾಗ್ರತೆ ಹೆಚ್ಚಳಕ್ಕೆ ಚೆಸ್‌ ಆಟ- 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಗೆ ಪ್ರಪ್ರಥಮ ಸ್ಥಾನ ಪಡೆಯುವ ಮೂಲಕ ಟಾಪರ್‌ ಆಗಿ ಹೊರಹೊಮ್ಮಿರುವ ಸಾಕ್ಷಿ ಕಲ್ಯಾಣರಾವ್‌ ಬಿರಾದಾರ್‌ ತಾನು ಕಲಿತ ಶಾಲೆ ಮತ್ತು ಜಿಲ್ಲೆಗೆ ಹೆಸರು ತಂದಿದ್ದಾಳೆ.

Vijaya Karnataka 1 May 2019, 4:57 pm
ಮಹೇಶ್‌ ಕುಲಕರ್ಣಿ ಕಲಬುರಗಿ:ಕೇವಲ ನಾಲ್ಕು ತಾಸುಗಳ ಶಿಸ್ತುಬದ್ಧ ಅಧ್ಯಯನ ಮತ್ತು ಏಕಾಗ್ರತೆ ಹೆಚ್ಚಳಕ್ಕೆ ಚೆಸ್‌ ಆಟ- 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಗೆ ಪ್ರಪ್ರಥಮ ಸ್ಥಾನ ಪಡೆಯುವ ಮೂಲಕ ಟಾಪರ್‌ ಆಗಿ ಹೊರಹೊಮ್ಮಿರುವ ಸಾಕ್ಷಿ ಕಲ್ಯಾಣರಾವ್‌ ಬಿರಾದಾರ್‌ ತಾನು ಕಲಿತ ಶಾಲೆ ಮತ್ತು ಜಿಲ್ಲೆಗೆ ಹೆಸರು ತಂದಿದ್ದಾಳೆ.
Vijaya Karnataka Web GLR-30GLB4


ನಗರದ ಶ್ರೀ ಶರಣಬಸವೇಶ್ವರ ವಸತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಕ್ಷಿ 625ರ ಪೈಕಿ 620 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ನಂಬರ್‌-1 ಆಗಿ ಹೊಮ್ಮಿದ್ದಾಳೆ. ಮೇಲಾಗಿ, ಗಣಿತ ಮತ್ತು ಹಿಂದಿ ವಿಷಯದಲ್ಲಿ ನೂರಕ್ಕೆ 100 ಅಂಕಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾಳೆ.

ತನ್ನ ಈ ಸಾಧನೆಯ ಹಿಂದೆ ಶಾಲೆಯ ಎಲ್ಲ ಶಿಕ್ಷಕರ ಕೊಡುಗೆ ಹಾಗೂ ಮನೆಯಲ್ಲಿ ಅಮ್ಮ-ಅಪ್ಪ, ಅಣ್ಣ ನೀಡುತ್ತಿದ್ದ ಸಹಕಾರ ಮರೆಯುವಂತಿಲ್ಲ ಎಂದು ಕೃತಜ್ಞತೆ ಸಲ್ಲಿಸುತ್ತಲೇ ಮಾತಿಗಿಳಿದ ಸಾಕ್ಷಿ, ಅಧ್ಯಯನಕ್ಕಾಗಿ ತಾನು ಅನುಸರಿಸುತ್ತಿದ್ದ ಅಧ್ಯಯನ ಕ್ರಮ ಮತ್ತು ಸಮಯದ ಕರಾರುವಾಕ್‌ ಪಾಲನೆ ಹೇಗೆ ಒತ್ತಡಕ್ಕೆ ಕಿಂಚಿತ್ತೂ ಅವಕಾಶ ನೀಡುತ್ತಿರಲಿಲ್ಲ ಎಂಬುದನ್ನು ವಿವರಿಸಿದಳು.

ಶಾಲೆಯ ಆರು ಘಟಕ ಪರೀಕ್ಷೆಗಳು, ಮೂರು ಪ್ರಿಪರೇಟರಿ ಪರೀಕ್ಷೆ ಮತ್ತು ಎರಡು ಮಧ್ಯ ವಾರ್ಷಿಕ ಪರೀಕ್ಷೆಗಳನ್ನು ಎದುರಿಸುವಷ್ಟರಲ್ಲೇ ಎಸ್‌ಬಿಆರ್‌ ವಿದ್ಯಾರ್ಥಿಗಳಲ್ಲಿ ಬಹುತೇಕ ಆತ್ಮವಿಶ್ವಾಸ ಎಂಬುದು ತುಂಬಿ ತುಳುಕಲು ಆರಂಭಗೊಳ್ಳುತ್ತದೆ. ತನಗೂ ಇಂಥದ್ದೇ ಅನುಭವ ಆಯಿತು. ಇದರ ಜೊತೆಗೆ, ನಿತ್ಯ ಬೆಳಗ್ಗೆ 5.30ರಿಂದ 7ರವರೆಗೆ ಕ್ರಮಬದ್ಧ ಅಧ್ಯಯನ, ಶಾಲೆಯ ಅವಧಿ ಮುಗಿಸಿಕೊಂಡು ಬಂದ ನಂತರ ಸಂಜೆ 7ರಿಂದ ರಾತ್ರಿ 11ರವರೆಗೆ ತಪ್ಪದೆ ಓದುತ್ತಿದ್ದುದು ಹೆಚ್ಚು ಸಹಕಾರಿಯಾಯಿತು ಎನ್ನುತ್ತಾಳೆ.

ಸಾಕ್ಷಿ ಸಾಧನೆಗೆ ಸಾಕ್ಷಿ

ಗಣಿತ ಮತ್ತು ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುವ ಸಾಕ್ಷಿ ಬಿರಾದಾರ್‌ ಇಂಗ್ಲಿಷ್‌-124, ವಿಜ್ಞಾನ-99, ಸಮಾಜ ವಿಜ್ಞಾನ-98 ಮತ್ತು ಕನ್ನಡ-99 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾಳೆ. ಯಾವುದೇ ಸಬ್ಜೆಕ್ಟ್ ಆಗಿದ್ದರೂ ಸರಿ; ಅದರ ಬಗ್ಗೆ ನಿರ್ಲಕ್ಷ್ಯ ತಾಳುವಂತಿಲ್ಲ. ಇಂಥದ್ದೊಂದು ಮನಸ್ಥಿತಿ ಅಳವಡಿಸಿಕೊಂಡು ಅಧ್ಯಯನ ನಡೆಸಿದ ಕಾರಣಕ್ಕೆ 620 ಅಂಕಗಳನ್ನು ಗಳಿಸುವುದು ಸುಲಭವಾಯಿತು ಎಂದು ಸಾಕ್ಷಿ ಬಿರಾದಾರ್‌ ಹೆಮ್ಮೆಯಿಂದ ಹೇಳುತ್ತಾಳೆ.

ನಾವು ಎಂದೂ ಹೀಗೆ ಓದಬೇಕು, ಹೀಗೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂದು ಒತ್ತಡ ಹಾಕಿಲ್ಲ. ತನ್ನಷ್ಟಕ್ಕೆ ತಾನು ಅನುಸರಿಸುತ್ತಿದ್ದ ಶಿಸ್ತುಬದ್ಧ ಅಧ್ಯಯನವೇ ಆಕೆಗೆ ಈ ಯಶಸ್ಸು ತಂದುಕೊಟ್ಟಿದೆ.

-ಕಲ್ಯಾಣರಾವ್‌ ಬಿರಾದಾರ್‌, ಸಾಕ್ಷಿ ತಂದೆ

ಚೆಸ್‌ ಆಡುವುದು ಸಾಕ್ಷಿಗೆ ಹೆಚ್ಚು ಪ್ರೀತಿ. ಹೀಗಾಗಿ, ರಾಜ್ಯಮಟ್ಟದ ಸ್ಪರ್ಧೆಗಳನ್ನು ಆಕೆ ಪಾಲ್ಗೊಳ್ಳುತ್ತಾ ಬಂದಿದ್ದಾಳೆ. ಒಟ್ಟಾರೆ, ಓದು ಎಂದರೆ ಒಂದು 'ಭಾರ' ಎನ್ನುವುದಕ್ಕಿಂತಲೂ ಅದೊಂದು 'ಹಸಿವು' ಎಂದು ಓದುತ್ತಿದ್ದಳು.

-ಅರ್ಚನಾ ಕೆ.ಬಿರಾದಾರ್‌, ಸಾಕ್ಷಿ ತಾಯಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ