ಆ್ಯಪ್ನಗರ

ಉಸ್ತುವಾರಿಗೆ ಶಾಕ್‌; ಗುಲ್ಬರ್ಗ ವಿವಿ ರಹಸ್ಯ ಪ್ಲಾನ್‌

ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ರೂ.100 ಕೋಟಿ ಅಂದಾಜು ಮೊತ್ತದ ಅಂತಾರಾಷ್ಟ್ರೀಯ ಗುಣದರ್ಜೆಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (ಕೆಎಸ್‌ಸಿಎ) ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಪರ್ಯಾಸ ಎಂದರೆ, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಂತೆ ಕೆಎಸ್‌ಸಿಎ-ವಿಶ್ವವಿದ್ಯಾಲಯದ ಮಧ್ಯೆ ಒಡಂಬಡಿಕೆ (ಎಂಒಯು) ಮಾಡಿಕೊಳ್ಳುವುದು ಮಾತ್ರ ಬಾಕಿ ಉಳಿದಿದೆ.

Vijaya Karnataka 3 Jan 2019, 5:00 am
ಮಹೇಶ್‌ ಕುಲಕರ್ಣಿ ಕಲಬುರಗಿ :ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ರೂ.100 ಕೋಟಿ ಅಂದಾಜು ಮೊತ್ತದ ಅಂತಾರಾಷ್ಟ್ರೀಯ ಗುಣದರ್ಜೆಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (ಕೆಎಸ್‌ಸಿಎ) ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಪರ್ಯಾಸ ಎಂದರೆ, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಂತೆ ಕೆಎಸ್‌ಸಿಎ-ವಿಶ್ವವಿದ್ಯಾಲಯದ ಮಧ್ಯೆ ಒಡಂಬಡಿಕೆ (ಎಂಒಯು) ಮಾಡಿಕೊಳ್ಳುವುದು ಮಾತ್ರ ಬಾಕಿ ಉಳಿದಿದೆ.
ಒಂದುವರೆ ತಿಂಗಳ ಹಿಂದೆ ಗುಲ್ಬರ್ಗ ವಿವಿ ಉಪಕುಲಪತಿಗಳ ಸದಿಚ್ಛೆ ಮತ್ತು ಕೆಎಸ್‌ಸಿಎ ಪ್ರತಿನಿಧಿಯೊಬ್ಬರ ಒತ್ತಾಸೆಯ ಮೇರೆಗೆ ಈ ತೆರೆಮರೆಯ ನಿಗೂಢ ಯತ್ನಕ್ಕೆ ಚಾಲನೆ ದೊರೆತಿದೆ. ಮೇಲಾಗಿ, ವಿವಿ ಪ್ರಸ್ತಾವನೆಗೆ ಕೆಎಸ್‌ಸಿಎ ತನ್ನ ಮ್ಯಾನೇಜ್‌ಮೆಂಟ್‌ ಕಮೀಟಿ ಸಭೆಯಲ್ಲಿ ಹಸಿರು ನಿಶಾನೆ ತೋರಿದೆ. ಇನ್ನೇನಿದ್ದರೂ, ಕೆಎಸ್‌ಸಿಎ ಸಾಮಾನ್ಯ ಸಭೆಯಲ್ಲಿ ಮಾತ್ರ ಅನುಮೋದನೆ ದೊರೆಯುವುದು ಬಾಕಿ ಉಳಿದಿದೆ. ಈ ಮಧ್ಯೆ, ಮುಂದಿನ ಕೆಲವೇ ದಿನಗಳಲ್ಲಿ ಕೆಎಸ್‌ಸಿಎ ಪ್ರತಿನಿಧಿಗಳನ್ನು ಒಳಗೊಂಡ ತಂಡ ವಿವಿ ಕ್ಯಾಂಪಸ್ಸಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿವಿ ಪ್ರೊಫೆಸರ್‌ವೊಬ್ಬರು ವಿಜಯ ಕರ್ನಾಟಕ ಜೊತೆಗೆ ಮಾಹಿತಿ ಹಂಚಿಕೊಂಡರು.
Vijaya Karnataka Web shock to the caretaker gulbarga university secret plan
ಉಸ್ತುವಾರಿಗೆ ಶಾಕ್‌; ಗುಲ್ಬರ್ಗ ವಿವಿ ರಹಸ್ಯ ಪ್ಲಾನ್‌


ಪ್ರಿಯಾಂಕ್‌ 'ಉಸ್ತುವಾರಿ'ಗೆ ಅತೃಪ್ತಿ:

ಈ ಹಿಂದೆ ಇಲ್ಲಿನ ಅಫಜಲಪುರ ರಸ್ತೆ ಪಕ್ಕದ ಸುಮಾರು 20 ಎಕರೆ 6 ಗುಂಟೆ ಜಮೀನಿನಲ್ಲಿ ಅಂತಾರಾಷ್ಟ್ರೀಯ ಗುಣ ದರ್ಜೆಯ ಕ್ರೀಡಾಂಗಣ ನಿರ್ಮಾಣಕ್ಕೆ ಸ್ವತಃ ಪ್ರಿಯಾಂಕ್‌ ಖರ್ಗೆ ಆಸಕ್ತಿ ವಹಿಸಿ ಪೂರಕ ಯೋಜನೆ ಸಿದ್ಧಪಡಿಸಿದ್ದರು. ಆದರೆ, ಸ್ಥಳೀಯ ಪ್ರತಿಭೆಗಳ ಹಿತಾಸಕ್ತಿ ಮಣ್ಣು ಮಾಡುವುದು ಬೇಡ ಎಂಬ ಇರಾದೆಯಿಂದ ಕೆಎಸ್‌ಸಿಎ ಎದುರಿಟ್ಟ ಕಂಡಿಷನ್‌ಗಳನ್ನು ಪ್ರಿಯಾಂಕ್‌ ತಳ್ಳಿ ಹಾಕಿ ನಿರ್ಲಿಪ್ತರಾಗಿದ್ದರು. ಈಗ ಖುದ್ದು ಗುಲ್ಬರ್ಗ ವಿವಿ ತನ್ನ ಮೈದಾನಕ್ಕೆ ಅಂಟಿಕೊಂಡಿರುವ ಇಎಸ್‌ಐಸಿ ಹಿಂಭಾಗದ ಮೈದಾನದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಸ್‌ಸಿಎಗೆ ಪ್ರಸ್ತಾವನೆ ಸಲ್ಲಿಸಿ ಮುಗುಮ್ಮಾಗಿ ಕುಳಿತಿದೆ.

ಅಚ್ಚರಿಯ ಅಂಶವೆಂದರೆ, ಒಂದುವರೆ ತಿಂಗಳ ಹಿಂದೆ ಗುಲ್ಬರ್ಗ ವಿವಿ ಪ್ರಸ್ತಾವನೆ ಸಲ್ಲಿಸಿರುವುದು ನಿಜ ಎಂದು ವಿವಿ ಕ್ರೀಡಾ ವಿಭಾಗದ ಅಧಿಕಾರಿಯೊಬ್ಬರು ಒಪ್ಪಿಕೊಳ್ಳುತ್ತಾರೆ. ಇನ್ನೊಂದೆಡೆ, ಪ್ರಸ್ತಾವನೆ ಸಲ್ಲಿಸಬೇಕಿತ್ತು. ಆದರೆ, ಸಲ್ಲಿಸಿಲ್ಲ ಎಂದು ವಿವಿ ಆಡಳಿತ ವಿಭಾಗದ ಪ್ರಮುಖ ಅಧಿಕಾರಿಯೊಬ್ಬರು ಗೌಪ್ಯತೆ ಕಾಯ್ದಿಡುವ ತಮ್ಮ ಯತ್ನ ಮುಂದುವರೆಸುವ ಭಾಗವಾಗಿ ಹೇಳಿದರು.

ಕೆಎಸ್‌ಸಿಎ ಕಂಡಿಷನ್ಸ್‌ ಹೀಗಿವೆ.

* ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಬೇಕು ಕನಿಷ್ಠ 16-20 ಎಕರೆ ಜಮೀನು

* ಕ್ರೀಡಾಂಗಣ ನಿರ್ಮಾಣದ ನಂತರ ಮುಂದಿನ 25 ವರ್ಷ ಕೆಎಸ್‌ಸಿಎ ಪಾರುಪತ್ಯ (ಲೀಸಿಂಗ್‌)

* ಸ್ಥಳೀಯ ಪ್ರತಿಭೆಗಳ ತರಬೇತಿಗೆ ಪ್ರತಿ ಮೂರು ತಾಸಿಗೆ ಕೆಎಸ್‌ಸಿಎ ಪಡೆಯುವ ಬಾಡಿಗೆ ರೂ.500

* ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿ, ಜಾಹೀರಾತು, ಆಡಳಿತ - ನಿರ್ವಹಣೆ ಎಲ್ಲವೂ ಕೆಎಸ್‌ಸಿಎ ಪಾಲಿಗೆ

ಎಚ್‌ಕೆಆರ್‌ಡಿಬಿ ಇದೆಯಲ್ಲಾ...!

ಕೆಎಸ್‌ಸಿಎ ಪಾರುಪತ್ಯದ ಬದಲು ನಮ್ಮದೇ ಭಾಗದ ಸಮಗ್ರ ಅಭಿವೃದ್ಧಿಗಾಗಿ ರಚಿಸಲಾಗಿರುವ ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಅಂತಾರಾಷ್ಟ್ರೀಯ ಗುಣದರ್ಜೆಯ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವುದು ಲೇಸು ಎಂದು ಗುಲ್ಬರ್ಗ ವಲಯ (ಕ್ರಿಕೆಟ್‌) ಹೋರಾಟ ಸಮಿತಿ ಅಧ್ಯಕ್ಷ ಡಾ.ಜೈಭೀಮ ದರ್ಗಿ ಅಭಿಪ್ರಾಯಪಡುತ್ತಾರೆ.

ಇಷ್ಟಕ್ಕೂ, ಒಂದೊಮ್ಮೆ ಕೆಎಸ್‌ಸಿಎ ಪಾರುಪತ್ಯದ ಕ್ರೀಡಾಂಗಣ ನಿರ್ಮಾಣಗೊಂಡರೆ, ಪ್ರತಿಯೊಂದಕ್ಕೂ ಕೆಎಸ್‌ಸಿಎ ಅನುಮತಿ ಪಡೆಯಲು ಮಂಡಿಯೂರಿ ಬೇಡಬೇಕಾಗುತ್ತದೆ. ಇದರ ಬದಲು, ಎಚ್‌ಕೆಆರ್‌ಡಿಬಿ ಅಧೀನದಲ್ಲಿ ಹೈದರಾಬಾದ್‌ ಕರ್ನಾಟಕ ಸ್ಪೋರ್ಟ್ಸ್ ಅಕಾಡೆಮಿ ಆರಂಭಿಸಿ, ಅದರ ವ್ಯಾಪ್ತಿಯಲ್ಲೇ ಕ್ರೀಡಾಂಗಣ ನಿರ್ಮಿಸುವುದು ಸ್ಥಳೀಯರ ಹಿತಾಸಕ್ತಿಯಿಂದ ಒಳ್ಳೆಯದು ಎಂದು ವಿವಿ ಸಿಂಡಿಕೇಟ್‌ ಮಾಜಿ ಸದಸ್ಯ ಉಮಾಕಾಂತ ನಿಗ್ಗುಡಗಿ ಸಲಹೆ ನೀಡುತ್ತಾರೆ.

ಕೆಎಸ್‌ಸಿಎ ಎದುರು ಗುಲ್ಬರ್ಗ ವಿವಿ ಪ್ರಸ್ತಾವನೆ ಸಲ್ಲಿಸಿರುವುದು ನಿಜ. ಇಷ್ಟರಲ್ಲೇ ಕೆಎಸ್‌ಸಿಎ ತಂಡ ಸ್ಥಳ ಪರಿಶೀಲನೆಗೆ ಬರಲಿದೆ. ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತಾದರೆ ಎಲ್ಲವೂ ಉಲ್ಟಾ ಹೊಡೆಯುತ್ತದೆ. ಹೀಗಾಗಿ, ರಹಸ್ಯ ಕಾಯ್ದಿಡುವ ಸರ್ಕಸ್‌ ಮಾಡಲಾಗುತ್ತಿದೆ.

-ಹೆಸರು ಬೇಡ, ಕೆಎಸ್‌ಸಿಎ ಪ್ರತಿನಿಧಿ

ವಿಶ್ವವಿದ್ಯಾಲಯ ತನಗಿರುವ ಸ್ವಾಯತ್ತತೆ ಬಳಸಿಕೊಂಡು ಕೆಎಸ್‌ಸಿಎಗೆ ಪ್ರಸ್ತಾವನೆ ಸಲ್ಲಿಸಿರಬಹುದು. ಆದರೆ, ನಮ್ಮ ಭಾಗದ ಯುವಕರಿಗೆ ಉದ್ಯೋಗ, ತರಬೇತಿ ವಿಷಯದಲ್ಲಿ ಅನ್ಯಾಯ ಆಗಲಾರದು ಎಂಬ ಲಿಖಿತ ವಾಗ್ದಾನವನ್ನು ಕೆಎಸ್‌ಸಿಎ ನೀಡಬೇಕು. ಇಲ್ಲದಿದ್ದರೆ ಕ್ರೀಡಾಂಗಣ ನಿರ್ಮಾಣದ ಯತ್ನದ ಕುರಿತು ಜಿಲ್ಲಾ ಉಸ್ತುವಾರಿ ಸಚಿವನಾಗಿ ಮಧ್ಯೆ ಪ್ರವೇಶಿಸಲೇಬೇಕಾಗುತ್ತದೆ.

-ಪ್ರಿಯಾಂಕ್‌ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ