ಆ್ಯಪ್ನಗರ

ಕಳ್ಳಿಯರ ಗ್ಯಾಂಗ್‌ ಸಿಕ್ಕಾಪಟ್ಟೆ ಆ್ಯಕ್ಟೀವ್‌; ಮಹಿಳೆಯರೇ ಟಾರ್ಗೆಟ್‌

ಕಲಬುರಗಿ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಕಳ್ಳಿಯರ ಕಾಟ ಹೆಚ್ಚಾಗಿದೆ. ಮುಖ್ಯವಾಗಿ ಮಹಿಳಾ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡುವ ಈ ಗ್ಯಾಂಗ್‌ ಪ್ರತ್ಯೇಕ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ಚಿನ್ನಾಭರಣ ಧರಿಸಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ಸಂಕಟ ಅನುಭವಿಸುವಂತಾಗಿದೆ.

Vijaya Karnataka 14 Jun 2019, 9:57 pm
ಮಹೇಶ್‌ ಕುಲಕರ್ಣಿ ಕಲಬುರಗಿ:ಕಲಬುರಗಿ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಕಳ್ಳಿಯರ ಕಾಟ ಹೆಚ್ಚಾಗಿದೆ. ಮುಖ್ಯವಾಗಿ ಮಹಿಳಾ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡುವ ಈ ಗ್ಯಾಂಗ್‌ ಪ್ರತ್ಯೇಕ ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ಚಿನ್ನಾಭರಣ ಧರಿಸಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ಸಂಕಟ ಅನುಭವಿಸುವಂತಾಗಿದೆ.
Vijaya Karnataka Web the gang of thieves got active target by women
ಕಳ್ಳಿಯರ ಗ್ಯಾಂಗ್‌ ಸಿಕ್ಕಾಪಟ್ಟೆ ಆ್ಯಕ್ಟೀವ್‌; ಮಹಿಳೆಯರೇ ಟಾರ್ಗೆಟ್‌


ನಗರದ ಆಳಂದ ಚೆಕ್‌ಪೋಸ್ಟ್‌, ಕೇಂದ್ರ ಬಸ್‌ ನಿಲ್ದಾಣ, ಸೇಡಂ ರಿಂಗ್‌ ರಸ್ತೆ, ಹುಮನಾಬಾದ್‌ ರಿಂಗ್‌ ರಸ್ತೆ ಬಳಿ ಈ ಕಳ್ಳಿಯರು ಬಸ್‌ ಹತ್ತುತ್ತಾರೆ. ಅದರಲ್ಲೂ ಅತಿ ಹೆಚ್ಚ ಜನದಟ್ಟಣೆ ಇರುವ ಬಸ್‌ಗಳನ್ನು ತಂಡ ಆಯ್ಕೆ ಮಾಡಿಕೊಳ್ಳುತ್ತದೆ. ಬಸ್‌ ಏರಿದ ಮುಂದಿನ ನಾಲ್ಕೈದು ಕಿ.ಮೀ. ಒಳಗೆ ತಮ್ಮ ಕೈ ಚಳಕ ಪ್ರದರ್ಶಿಸಿ, ಬಸ್‌ ಇಳಿದು ಬಿಡುತ್ತಾರೆ ಎಂದು ನಿತ್ಯ ಕಲಬುರಗಿ-ಆಳಂದ ಮಧ್ಯೆ ಪ್ರಯಾಣಿಸುವ ಶಿಕ್ಷಕರೊಬ್ಬರು ಹೇಳುತ್ತಾರೆ.

ಕೈ ಚಳಕದ ಕಾರ್ಯತಂತ್ರ:

ಮಹಿಳಾ ಪ್ರಯಾಣಿಕರನ್ನು ಹೆಚ್ಚಾಗಿ ಟಾರ್ಗೆಟ್‌ ಮಾಡುವ ಕಳ್ಳಿಯರು ಕಂಕುಳಲ್ಲಿ ಮಗು ಎತ್ತಿಕೊಂಡು ಬಸ್‌ ಹತ್ತುತ್ತಾರೆ. ಹೀಗೆ ಹತ್ತಿದ ಬಳಿಕ ಚಿನ್ನಾಭರಣ ಧರಿಸಿರುವ ಮಹಿಳಾ ಪ್ರಯಾಣಿಕರನ್ನು ಗುರುತಿಸಿ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಒಂದುವೇಳೆ, ಯಾರಾದರೂ ಸೀಟು ಆಕ್ರಮಿಸಿಕೊಂಡಿದ್ದರೆ ತಮ್ಮ ಕಂಕುಳಲ್ಲಿರುವ ಮಗುವನ್ನು ತೋರಿಸಿ ಕುಳಿತುಕೊಳ್ಳಲು ಸ್ವಲ್ಪ ಸ್ಥಳಾವಕಾಶ ನೀಡುವಂತೆ ಮನವಿ ಮಾಡುತ್ತಾರೆ. ಸೀಟ್‌ ಬೇಡುವ ನೆಪದಲ್ಲಿಯೇ ಮಹಿಳಾ ಪ್ರಯಾಣಿಕರನ್ನು ಯಾಮಾರಿಸುತ್ತಾರೆ. ಸೀಟು ದೊರೆತ ಕೂಡಲೆ ಮಹಿಳಾ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಆಭರಣಗಳಿಗೆ ಕತ್ತರಿ ಹಾಕುತ್ತಾರೆ. ಇದು ಹಲವು ರೀತಿಯ ಕಾರ್ಯತಂತ್ರಗಳ ಪೈಕಿ ಒಂದು.

ಮತ್ತೊಂದು ರೀತಿಯೂ ಇದೆ. ಬಸ್‌ನಲ್ಲಿ ಕುಳಿತುಕೊಳ್ಳಲು ಸೀಟ್‌ ಇದ್ದರೂ ಕಂಕುಳಲ್ಲಿ ಕೂಸನ್ನು ಎತ್ತಿಕೊಂಡಿರುವ ಮಹಿಳೆಯರು ಬಸ್‌ನಲ್ಲಿ ಕುಳಿತುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ, ಏನಾದರೂ ಕಾರಣ ಹೇಳಿಕೊಂಡು ಬಸ್ಸಿನ ತುಂಬಾ ಓಡಾಡುತ್ತಾರೆ. ಆಭರಣ ಧರಿಸಿರುವ ಮಹಿಳೆಯರ ಪಕ್ಕದಲ್ಲಿ ನಿಲ್ಲುತ್ತಾರೆ. ತಮ್ಮ ಕಂಕುಳಲ್ಲಿರುವ ಮಗುವಿನ ಮುಖ ತೊಳೆಯುವ ಯತ್ನ ಮಾಡುತ್ತಲೇ ಸೀಟಿನಲ್ಲಿ ಕುಳಿತಿರುವ ಮಹಿಳಾ ಪ್ರಯಾಣಕಿಯ ಮೇಲೆ ನೀರು ಚೆಲ್ಲುವಂತೆ ನೋಡಿಕೊಳ್ಳುತ್ತಾರೆ. ಇದೇವೇಳೆ, ಮಹಿಳಾ ಪ್ರಯಾಣಕಿಯ ಚಿನ್ನಾಭರಣ ಎಗರಿಸುತ್ತಾರೆ.

ನಾನು ನಿತ್ಯ ಖಜೂರಿ-ಕಲಬುರಗಿ ಮಧ್ಯೆ ಬಸ್‌ ಪ್ರಯಾಣ ಮಾಡುತ್ತೇನೆ. ಕಳೆದ ಕೆಲ ತಿಂಗಳುಗಳಿಂದ ಮೂವರು ಮಹಿಳೆಯರು ಆಳಂದ ಚೆಕ್‌ ಪೋಸ್ಟ್‌ ಬಳಿ ಬಸ್‌ ಹತ್ತುತ್ತಾರೆ. ಈ ಪೈಕಿ ಓರ್ವ ಮಹಿಳೆ ನನ್ನ ಎದುರಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗಿಗೆ ಕೈ ಹಾಕಿ ಚಿನ್ನದ ಒಡವೆ ಕೆಳಗೆ ಕೆಡವಿದ್ದಳು. ಅದೃಷ್ಟವಶಾತ್‌ ಕೆಳಗೆ ಬಿದ್ದ ವಸ್ತುವನ್ನು ಕಂಡಕ್ಟರ್‌ ನೋಡಿದ್ದರಿಂದ ಆ ಪ್ರಯಾಣಕಿಯ ಒಡವೆ ಉಳಿಯಿತು. ಇಂತಹ ಘಟನೆಗಳು ಆಳಂದ ಮಾರ್ಗದಲ್ಲಿ ನಿತ್ಯ ನಡೆಯುತ್ತಿರುತ್ತವೆ.

- ಹಣಮಂತ ಶೇರಿ, ಖಜೂರಿ

ಈ ಕುರಿತು ಖಂಡಿತ ಪರಿಶೀಲನೆ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗುವುದು. ಮೇಲಾಗಿ, ಇಂತಹ ಗ್ಯಾಂಗ್‌ ಚಟುವಟಿಕೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಎಸ್ಪಿ

ಸಂಜ್ಞೆಯೇ ಸಂವಹನದ ಹಾದಿ

ಯಾರಿಗೂ ತಿಳಿಯದ ಭಾಷೆ ಮಾತನಾಡುವ ಈ ಕಳ್ಳಿಯರ ಗ್ಯಾಂಗ್‌ ಸದಸ್ಯರು ತಮ್ಮ ಭಾಷೆ ಮತ್ತು ಸಂಜ್ಞೆಯಿಂದ ಬಸ್‌ನಲ್ಲಿ ತಮ್ಮಿಂದ ಸ್ವಲ್ಪ ದೂರ ಇರುವ ತಮ್ಮ ಸದಸ್ಯರಿಗೆ ಜಾಗೃತವಾಗಿರುವಂತೆ ಎಚ್ಚರಿಕೆ ಸಂದೇಶ ರವಾನಿಸುತ್ತಾರೆ.

ಪ್ರಯಾಣಿಕರ ಸೋಗಿನಲ್ಲಿ ಬಸ್‌ ಹತ್ತಿ ಕಾರ್ಯ ಸಾಧನೆ ಆಗುತ್ತಿದ್ದಂತೆಯೇ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗುತ್ತಾರೆ. ಅವರು ತೆಗೆದುಕೊಳ್ಳುವ ಟಿಕೆಟ್‌ ಮಾತ್ರ ಅಂತಿಮ ನಿಲ್ದಾಣದ್ದಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ