ಆ್ಯಪ್ನಗರ

ಜಯಚಂದ್ರ ನಾಲಿಗೆ ಸುಡಬೇಕಾಗುತ್ತದೆ ಎಂದ ಯತ್ನಾಳ್‌

ಟಿಪ್ಪು ಸುಲ್ತಾನ್‌ನಂತಹ ವಿವಾದಿತ ವ್ಯಕ್ತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾಕೆ ಮುತುವರ್ಜಿ ವಹಿಸಿದ್ದಾರೆ ಗೊತ್ತಿಲ್ಲ. ಟಿಪ್ಪು ಸುಲ್ತಾನ್‌ ಹುಲಿನೂ ಸಾಯಿಸಿಲ್ಲ, ಇಲಿನೂ ಸಾಯಿಸಿಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.

Vijaya Karnataka 11 Nov 2018, 8:27 am
ಕಲಬುರಗಿ:ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಟಿಪ್ಪು ಜಯಂತಿ ಆಚರಣೆ ಇಷ್ಟವಿಲ್ಲ. ಅದಕ್ಕಾಗಿಯೇ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೂ ಹೆಸರು ಹಾಕಿಸದೆ ಆರೋಗ್ಯ ನೆಪವೊಡ್ಡಿ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಟೀಕಿಸಿದರು.
Vijaya Karnataka Web tippu jayanti does not like c yatnal
ಜಯಚಂದ್ರ ನಾಲಿಗೆ ಸುಡಬೇಕಾಗುತ್ತದೆ ಎಂದ ಯತ್ನಾಳ್‌


ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್‌ನಂತಹ ವಿವಾದಿತ ವ್ಯಕ್ತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾಕೆ ಮುತುವರ್ಜಿ ವಹಿಸಿದ್ದಾರೆ ಗೊತ್ತಿಲ್ಲ. ಟಿಪ್ಪು ಸುಲ್ತಾನ್‌ ಹುಲಿನೂ ಸಾಯಿಸಿಲ್ಲ, ಇಲಿನೂ ಸಾಯಿಸಿಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.

ನಾನು ಮುಸ್ಲಿಂ ವಿರೋಧಿಯಲ್ಲ: ಟಿಪ್ಪು ಸುಲ್ತಾನ್‌ ಹಿಂದೂ ವಿರೋಧಿಯಾಗಿದ್ದ. ಅವನ ಆಡಳಿತದಲ್ಲಿ ಅನೇಕ ಹಿಂದೂಗಳನ್ನು ಹಾಗೂ ಕೊಡವರನ್ನು ಕಗ್ಗೊಲೆ ಮಾಡಿದ್ದ. ಅಂತಹ ವ್ಯಕ್ತಿಯ ಜಯಂತಿಯನ್ನು ಸರಕಾರ ಆಚರಿಸುತ್ತಿರುವುದು ದುರಾದೃಷ್ಟಕರ. ದೇಶದಲ್ಲಿ ಅನೇಕ ಮಹಾತ್ಮರಿದ್ದಾರೆ. ಅಂತವರ ಜಯಂತಿಯನ್ನು ಸರಕಾರ ಆಚರಿಸಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಟಿಪ್ಪು ಒಬ್ಬ ವಿವಾದಾಸ್ಪದ ವ್ಯಕ್ತಿಯಾಗಿರುವುದರಿಂದ ಆತನ ಜಯಂತಿ ಆಚರಣೆಯನ್ನು ವಿರೋಧಿಸುತ್ತಿದ್ದೇನೆಯೇ ಹೊರತು ನಾನು ಮುಸ್ಲಿಂ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.

ನಮಗೂ ಈ ಹಿಂದೆ ಟಿಪ್ಪು ಇತಿಹಾಸ ಗೊತ್ತಿರಲಿಲ್ಲ. ಅದಕ್ಕಾಗಿಯೇ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಟಿಪ್ಪುನನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸೋಲಿನ ಬಗ್ಗೆ ಆತ್ಮಾವಲೋಕನ:

ಬಳ್ಳಾರಿ ಮತ್ತು ಜಮಖಂಡಿ ಉಪ ಚುನಾವಣೆಯಲ್ಲಿ ಗೆದ್ದಬಳಿಕ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದವರು ರಾಜ್ಯದಲ್ಲಿ ತಲೆಗೆ ಕೋಡು ಬಂದವರಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ನಾವು ಹಲವು ಉಪ ಚುನಾವಣೆಗಳಲ್ಲಿ ಜಯಗಳಿಸಿದ್ದೇವೆ. ಆದರೆ, ಇವರಂತೆ ಜಂಭ ಪಟ್ಟುಕೊಂಡಿಲ್ಲ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಸೋಲು-ಗೆಲುವು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತದೆ. ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರಗಳಲ್ಲಿ ಸೋಲಿನ ಕುರಿತು ಪಕ್ಷ ಆತ್ಮಾವಲೋಕನ ನಡೆಸಲಿದೆ ಎಂದು ಬಸನಗೌಡ ಪಾಟೀಲ್‌ ತಿಳಿಸಿದರು.

ಮುಖಂಡರಾದ ಸಂಗನಗೌಡ ಪಾಟೀಲ್‌, ಜಗದೀಶ ಕ್ಷತ್ರಿ, ಶಾಂತರೆಡ್ಡಿ ಇದ್ದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊರತುಪಡಿಸಿ ಪ್ರಧಾನಿಯಾಗುವ ಅರ್ಹತೆ ರಾಹುಲ್‌ ಗಾಂಧಿ ಸೇರಿದಂತೆ ಯಾರಿಗೂ ಇಲ್ಲ. ಮಹಾಮೈತ್ರಿ ಹೆಸರಿಗಷ್ಟೇ ಸೀಮಿತವಾಗಿದ್ದು, ಈಗಾಗಲೇ ಮಾಯಾವತಿ ಹೊರನಡೆದಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲೂ ಪಕ್ಷಕ್ಕೆ ಬಹುಮತ ಲಭಿಸಲಿದ್ದು, ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ.
- ಬಸನಗೌಡ ಪಾಟೀಲ್‌ ಯತ್ನಾಳ, ಶಾಸಕ

ಜಯಚಂದ್ರ ನಾಲಿಗೆ ಸುಡಬೇಕಾಗುತ್ತದೆ!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಟಿ.ಬಿ.ಜಯಚಂದ್ರ ನೀಡಿರುವ ಅವಹೇಳನಕಾರಿ ಹೇಳಿಕೆಯ ವಿರುದ್ಧ ಕಿಡಿಕಾರಿದ ಶಾಸಕ ಯತ್ನಾಳ, ಅವರ ನಾಲಿಗೆ ಸುಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕಾಂಗ್ರೆಸ್‌ ನಾಯಕರು ಉದ್ಧಟತನದಿಂದ ಮಾತನಾಡುವುದನ್ನು ಬಿಡಬೇಕು. ಇಲ್ಲದಿದ್ದಲ್ಲಿ ಅಂಥವರ ನಾಲಿಗೆ ಸುಡುವ ಕಾಲವೂ ಬರಲಿದೆ ಎಂದರು.

ರಾಹುಲ್‌ ಗಾಂಧಿಯೊಬ್ಬ ಅಪ್ರಬುದ್ಧ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ರಾಗಿದ್ದು, ಅರೆಹುಚ್ಚ ರಾಜಕಾರಣಿ. ಕಾಂಗ್ರೆಸ್‌ ನಾಯಕರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡದೇ ಇದ್ದಲ್ಲಿ ಅವರಿಗಿಂತ ಕೆಟ್ಟದಾಗಿ ಪದ ಬಳಸಿ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ