ಕಲಬುರಗಿ: ಪ್ರತಿ ಕ್ವಿಂಟಾಲ್ ತೊಗರಿಗೆ 6,500 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕೇಂದ್ರ ಸರಕಾರಕ್ಕೆ ನಿಯೋಗ ಹೋಗಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಲ್ ಇಂಡಿಯಾ ಕಿಸಾನ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘ, ತೊಗರಿ ಬೆಳೆಗಾರರ ಸಂಘ, ಅಖಂಡ ಭಾರತ ರೈತ ಸಂಘ ಜಂಟಿಯಾಗಿ ಇದೇ ತಿಂಗಳಲ್ಲಿ ಎರಡನೇ ವಾರದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮ್, ರಾಮ್ವಿಲಾಸ್ ಪಾಸ್ವಾನ್, ರಾಧಾಮೋಹನ್ ಸಿಂಗ್ ಅವರಿಗೆ ಭೇಟಿ ನೀಡಲಾಗುವುದು. ಇದಕ್ಕೆ ಸಂಸದ ಮಲ್ಲಿಕಾರ್ಜುನ್ ಖರ್ಗೆ ಅವರು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ತೊಗರಿ ಬೆಳೆಗಾರರ ಸಂಕಷ್ಟದ ಕುರಿತು ಸಂಸದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಗಮನಕ್ಕೆ ತರಲಾಗಿದೆ. ರಾಜ್ಯ ಸರಕಾರವು ಕನಿಷ್ಠ 6,500 ರೂ. ಗೆ ಬೆಲೆ ನಿಗದಿಪಡಿಸಿ ಅನುದಾನ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೀಗ, ಕೇವಲ 4500 ರೂ. ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ಆರಂಭಿಸಲಾಗುತ್ತಿರುವುದು ರೈತರಿಗೆ ಮೋಸ ಮಾಡಿದಂತಾಗಲಿದೆ ಎಂದು ತಿಳಿಸಿದರು.
* ಜಿಲ್ಲಾದ್ಯಂತ ರಸ್ತೆ ತಡೆ: ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ದರದಂತೆ ರಾಜ್ಯ ಸರಕಾರ ತೊಗರಿಗೆ ಬೆಂಬಲ ಬೆಲೆ ಹೆಚ್ಚಳ ಮಾಡುವುದು ಹಾಗೂ ಕೇಂದ್ರ ಸರಕಾರದ ಪ್ರಣಾಳಿಕೆಯಲ್ಲಿರುವ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾದ್ಯಂತ ರಸ್ತೆ ತಡೆದು ಹೋರಾಟ ನಡೆಸಲಾಗುವುದು. ಅದರಲ್ಲೂ ತೊಗರಿ ಬೆಳೆಯುವ ಪ್ರದೇಶಗಳಲ್ಲಿ ಇದನ್ನು ಉಗ್ರಸ್ವರೂಪದಲ್ಲಿ ಮಾಡುವುದಾಗಿ ಮಾನ್ಪಡೆ ತಿಳಿಸಿದರು.
ಕೆಲವು ತಾಲೂಕುಗಳಲ್ಲಿ ಜ.4ರಿಂದಲೇ ಪ್ರತಿಭಟನೆ, ಧರಣಿ ಮತ್ತು ರಸ್ತೆ ರೋಕ್ ನಡೆಸಲಾಗುವುದು. ಅದರೊಂದಿಗೆ, ಜ.12ರಂದು ಜಿಲ್ಲೆಯಾದ್ಯಂತ ರಸ್ತೆ ತಡೆದು ಪ್ರತಿಭಟಿಸಲಾಗುವುದು. ಈಗಾಗಲೇ ಸಾಕಷ್ಟು ಸಲ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತಾ ಬಂದೂ ಯಾವುದೇ ಪ್ರಯೋಜನವಾಗಿಲ್ಲ. ಮೊಜಾಮಿಲ್, ಕೀನ್ಯಾ ಸೇರಿದಂತೆ ವಿವಿಧೆಡೆಗಳಿಂದ ಆಮದು ಮಾಡಿಕೊಳ್ಳುವ ತೊಗರಿಗೆ ಶೇ.30ರಷ್ಟು ತೆರಿಗೆ ವಿಧಿಸಬೇಕು. ತೊಗರಿಯಲ್ಲಿ ಗ್ರೇಡಿಂಗ್, ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು. ಮುಂಬರುವ ದಿನಗಳಲ್ಲಿ ಹೆಚ್ಚಿನ ಬೇಳೆ-ಕಾಳುಗಳನ್ನು ಬೆಳೆಯುವುದಕ್ಕೂ ಪೂರಕ ವಾತಾವರಣ ಸೃಷ್ಟಿಸಬೇಕು. ಡಬ್ಲ್ಯುಎಚ್ಒ ವರದಿಯ ಪ್ರಕಾರ ಪ್ರತಿಯೊಬ್ಬರಿಗೆ 80 ಗ್ರಾಂ ಬೇಳೆ-ಕಾಳುಗಳ ಅವಶ್ಯಕತೆ ಇದೆ. ಆದರಂತೆ, ಈಗ ಬೆಳೆಯುತ್ತಿರುವುದರ ಎರಡು ಪಟ್ಟು ಬೆಳೆಸಿದರೂ ನಮ್ಮ ದೇಶದಲ್ಲಿ ಸಾಲುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಾಂತ ರೈತ ಸಂಘದ ಅಶೋಕ್ ಮ್ಯಾಗೇರಿ, ಕಿಸಾನ್ ಸಭಾದ ಮೌಲಾ ಮುಲ್ಲಾ, ಶಾಂತಪ್ಪ ಪಾಟೀಲ್ ಸಣ್ಣೂರ, ಅಂಬರೀಶ್ಗೌಡ ಬಳಬಟ್ಟಿ ಸೇರಿ ಇತರರಿದ್ದರು.
ಬಿಜೆಪಿ ರಸ್ತೆ ತಡೆ ನಾಚಿಕೆಗೇಡು: ಆರೋಪ
ರಾಜ್ಯ ಸರಕಾರ ತೊಗರಿಗೆ ಹೆಚ್ಚಿನ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮಾಜಿ ಸಚಿವ ಹಾಗೂ ಶಾಸಕ ಸೇರಿ ರಸ್ತೆ ತಡೆ ನಡೆಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಅಧಿಕಾರ ಇಟ್ಟುಕೊಂಡು ರಸ್ತೆ ತಡೆ ಮಾಡುವ ಬದಲು ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕು. ರೈತರಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲೂ ರಾಜಕೀಯ ತೋರುವುದನ್ನು ಬಿಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ಹೇಳಿದರು.