ಕಲಬುರಗಿ: ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಪೂರೈಸಿ ಟಂಟಂನಲ್ಲಿ ಹಿಂದಿರುಗುತ್ತಿದ್ದ ವೇಳೆ ಡಬಲ್ ಟ್ರಾಲಿ ಟ್ರ್ಯಾಕ್ಟರ್ ಅಪ್ಪಳಿಸಿದ ಕಾರಣ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಜೇವರ್ಗಿ ತಾಲೂಕಿನ ಕೆಲ್ಲೂರ ಕ್ರಾಸ್ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಜೇವರ್ಗಿ ತಾಲೂಕಿನ ಶಖಾಪುರದ ಹೊನ್ನಪ್ಪ ಸಿದ್ದಪ್ಪ ಪೂಜಾರಿ (50), ಕಾಮಣ್ಣ ಸಿದ್ದಮಲ್ಲಪ್ಪ (48) ಮೃತಪಟ್ಟವರು. ಇನ್ನು ಟಂಟಂನಲ್ಲಿದ್ದ ಧರ್ಮಣ್ಣ ಹುಲೆಪ್ಪ ಪೂಜಾರಿ, ರಾಮಣ್ಣ ಸಿದ್ರಾಮ, ನಾಗಪ್ಪ ಸಿದ್ದಪ್ಪ, ಹೈಯಾಳಪ್ಪ ಭೀಮರಾಯ, ಸಿದ್ದಪ್ಪ ಭೀಮರಾಯ, ಮಲ್ಲವ್ವ ಅಮೋಘಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಹಾಪುರ ತಾಲೂಕಿನ ಗಂಗನಾಳ ಗ್ರಾಮದಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಶಖಾಪುರದಿಂದ ಟಂಟಂನಲ್ಲಿ ಅಂತ್ಯಕ್ರಿಯೆಗೆ ತೆರಳಿದ್ದರು. ದುರಂತವೆಂದರೆ, ಅಂತ್ಯಕ್ರಿಯೆಗೆ ತೆರಳಿದವರು ಮರಳಿ ಮನೆಗೆ ಹಿಂದಿರುಗದಿರುವುದು ಶಖಾಪುರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.
ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.