ಆ್ಯಪ್ನಗರ

ಅವೈಜ್ಞಾನಿಕ ನೀತಿ; ಎಚ್‌ಕೆಆರ್‌ಡಿಬಿ ದುಡ್ಡು ‘ದಂಡ’

ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಬಿಡುಗಡೆ ಮಾಡಿದ ಕೋಟ್ಯಂತರ ರೂ. ಅನುದಾನ ಬಳಸಿಕೊಂಡು ರಸ್ತೆ ಮತ್ತು ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವಲ್ಲಿ ಎಡವಿದ ಇಲ್ಲಿನ ಮಹಾನಗರ ಪಾಲಿಕೆಯ ಕ್ರಮದಿಂದಾಗಿ ಕೋಟ್ಯಂತರ ರೂ. ನೀರಿಗೆ ಚೆಲ್ಲಿದಂತಾಗಿದೆ.

Vijaya Karnataka 31 Aug 2018, 5:21 pm
ಮಹೇಶ್‌ ಕುಲಕರ್ಣಿ
Vijaya Karnataka Web unhealthy policy hkrdb dudu fine
ಅವೈಜ್ಞಾನಿಕ ನೀತಿ; ಎಚ್‌ಕೆಆರ್‌ಡಿಬಿ ದುಡ್ಡು ‘ದಂಡ’


ಕಲಬುರಗಿ :
ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಬಿಡುಗಡೆ ಮಾಡಿದ ಕೋಟ್ಯಂತರ ರೂ. ಅನುದಾನ ಬಳಸಿಕೊಂಡು ರಸ್ತೆ ಮತ್ತು ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವಲ್ಲಿ ಎಡವಿದ ಇಲ್ಲಿನ ಮಹಾನಗರ ಪಾಲಿಕೆಯ ಕ್ರಮದಿಂದಾಗಿ ಕೋಟ್ಯಂತರ ರೂ. ನೀರಿಗೆ ಚೆಲ್ಲಿದಂತಾಗಿದೆ.

ಎಚ್‌ಕೆಆರ್‌ಡಿಬಿ 2015-16ರಲ್ಲಿ ರೂ. 45 ಕೋಟಿ ಹಾಗೂ 2016-17ರಲ್ಲಿ ರೂ.70 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈ ಹಿಂದಿನ ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರ ಕಾಳಜಿಯಿಂದಾಗಿ ಹಣ ನೀರಿನಂತೆ ಬಿಡುಗಡೆಗೊಂಡಾಗ್ಯೂ, ಪಾಲಿಕೆಯ ವತಿಯಿಂದ ಕೈಗೊಂಡ ರಸ್ತೆ ಮತ್ತು ಚರಂಡಿ ಕಾಮಗಾರಿಗಳಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಲಾಗಿರಲಿಲ್ಲ. ಹೀಗಾಗಿ, ಈ ಬಾರಿಯ ಮುಂಗಾರು ಅವಧಿಯ ಜಿಟಿಜಿಟಿ ಮಳೆಯಿಂದಾಗಿ ನಗರದಲ್ಲಿ ಕೈಗೊಂಡ ಬಹುತೇಕ ರಸ್ತೆಗಳು ಇಂದು ಭಾಗಶಃ ಕಿತ್ತು ಹೋಗಿವೆ.

ಅಚ್ಚರಿ ಮೂಡಿಸುವ ಅಂಶವೆಂದರೆ, ಎಚ್‌ಕೆಆರ್‌ಡಿಬಿ ಬಿಡುಗಡೆ ಮಾಡುವ ಹಣದಲ್ಲಿ ಯಾವುದೇ ಕಾಮಗಾರಿ ಕೈಗೊಂಡರೂ 'ಥರ್ಡ್‌ ಪಾರ್ಟಿ' ಅನುಮೋದನೆ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ, ಕೈಗೊಂಡಿರುವ ಕಾಮಗಾರಿಗಳು ಹೀಗೆ ಕುಲಗೆಟ್ಟು ಹೋಗಿರುವುದಕ್ಕೆ ಯಾರು ಹೊಣೆಗಾರಿಕೆ ಸ್ವೀಕರಿಸುತ್ತಾರೆ? ಎಂದು ಮೇಯರ್‌ ಶರಣು ಮೋದಿ ಪ್ರಶ್ನಿಸುತ್ತಾರೆ.

ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ನಿರ್ಮಿಸಿರುವ ಬೃಹತ್‌ ಚರಂಡಿಗಳ ಕಾಮಗಾರಿಗಳನ್ನು ಹೊರತುಪಡಿಸಿದರೆ, ಇದೇ ಅನುದಾನ ಬಳಸಿಕೊಂಡು ನಿರ್ಮಿಸಿದ ರಸ್ತೆ ಮತ್ತು ಚರಂಡಿಗಳು ಮಾತ್ರ ಎಚ್‌ಕೆಆರ್‌ಡಿಬಿ ಪಾವಿತ್ರ್ಯವನ್ನು ಪ್ರಶ್ನಿಸುವಂತಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ದೀಪಕ್‌ ಗಾಲಾ ಅಭಿಪ್ರಾಯಪಡುತ್ತಾರೆ.

ಬಹಿರಂಗ ಚರ್ಚೆ ಅಗತ್ಯ


2015-16 ಮತ್ತು 2016-17ನೇ ಸಾಲಿನಲ್ಲಿ ಎಚ್‌ಕೆಆರ್‌ಡಿಬಿ ಬಿಡುಗಡೆಗೊಳಿಸಿದ ಸುಮಾರು ರೂ.115 ಕೋಟಿಗೂ ಹೆಚ್ಚು ಅನುದಾನದಲ್ಲಿ ಎಷ್ಟು ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ ಎಂಬುದರ ಕುರಿತು ಬಹಿರಂಗ ಚರ್ಚೆ ನಡೆಸಿದರೆ ಹೂರಣ ಹೊರಬೀಳುತ್ತದೆ ಎಂದು ಮೇಯರ್‌ ಶರಣು ಮೋದಿ ಸವಾಲು ಹಾಕುತ್ತಾರೆ.

ಇಷ್ಟಕ್ಕೂ, ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ ಎಂಬುದು ನಿಜವಾಗಿದ್ದರೆ ಈ ನಿಟ್ಟಿನಲ್ಲಿ ಬಹಿರಂಗ ಚರ್ಚೆ ಕೈಗೊಳ್ಳುವುದರಲ್ಲಿ ಏಕೆ ಭಯ ಪಡಬೇಕು ಎನ್ನುವ ಅವರು, ಪಾಲಿಕೆಯ ಹಿರಿಯ ಅಧಿಕಾರಿಗಳ ಮೂಗಿನ ಅಡಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹೀಗಾಗಿ, ಯಾರೊಬ್ಬರೂ ಚರ್ಚೆಗೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಅವರು ವಾದಿಸುತ್ತಾರೆ.

ಯಾವುದೇ ಮೇಯರ್‌ ತಾನು ಪ್ರತಿನಿಧಿಸುವ ಪಾಲಿಕೆಯ ವಿರುದ್ಧ ಅಪಸ್ವರ ಎತ್ತುವುದಿಲ್ಲ. ಆದರೆ, ನಮ್ಮ ಪಾಲಿಕೆಯಲ್ಲಿ ಇದಕ್ಕೆ ತದ್ವಿರುದ್ಧ ವಾತಾವರಣವಿದೆ. ಆ ಕಾರಣಕ್ಕಾಗಿಯೇ ನಾನು ದನಿ ಎತ್ತದೆ ಅನ್ಯ ಮಾರ್ಗವೇ ಇಲ್ಲ. ಎಚ್‌ಕೆಆರ್‌ಡಿಬಿ ಅನುದಾನವನ್ನು ಖರ್ಚು ಮಾಡುವಲ್ಲಿ ತೋರಿದ ಅವೈಜ್ಞಾನಿಕ ತಂತ್ರಗಳ ಕುರಿತು ಮೊದಲು ಚರ್ಚೆ ನಡೆಯಲಿ. ಸಾರ್ವಜನಿಕರೂ ಈ ಕುರಿತು ದನಿಗೂಡಿಸಬೇಕು.

-ಶರಣು ಮೋದಿ, ಮೇಯರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ